ಸಾಗರ | ಕೆಳದಿ ದೇವಸ್ಥಾನದ ಐದು ಹುಂಡಿಗಳಿಂದ ಹಣ ಕಳವು: ಆರೋಪ
ಸಾಗರ, ನ.26: ತಾಲೂಕಿನ ಕೆಳದಿಯ ರಾಮೇಶ್ವರ ದೇವಸ್ಥಾನದಲ್ಲಿ ಹುಂಡಿ ಒಡೆದು ಅದರಲ್ಲಿದ್ದ ಹಣ ಕಳವು ಮಾಡಿರುವ ಘಟನೆ ಶುಕ್ರವಾರ ತಡೆರಾತ್ರಿ ನಡೆದಿರುವುದು ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ .
ದೇವಸ್ಥಾನದ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಐದು ಹುಂಡಿಗಳನ್ನು ಹೊರಗೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಅದರಲ್ಲಿದ್ದ ಹಣ ಕದ್ದೊಯ್ದಿರುವುದು ಕಂಡುಬಂದಿದೆ. ಒಡೆದ ಹುಂಡಿಯನ್ನು ದೇವಸ್ಥಾನದ ಆವರಣದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆನ್ನಲಾಗಿದೆ.
ಹುಂಡಿಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಹಣ ಇತ್ತು ಎಂದು ಅಂದಾಜಿಸಲಾಗಿದ್ದು, ದೇವಸ್ಥಾನದ ಸಿಸಿ ಕ್ಯಾಮೆರಾ ಅಳವಡಿಸದೇ ಇರುವುದು ದೊಡ್ಡ ಲೋಪವಾಗಿದೆ. ಈ ಕುರಿತು ಸ್ಥಳೀಯರು ಹಲವು ಬಾರಿ ಪ್ರಾಚ್ಯವಸ್ತು ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೇವಸ್ಥಾನ ಸಮಿತಿಯ ನಿರ್ದೇಶಕ ಸಂದೀಪ್ ಆರೋಪಿಸಿದ್ದಾರೆ.
ಸಾಗರ ಗ್ರಾಮಾಂತರ ಪೋಲಿಸ್ ಠಾಣಾ ಪೋಲೀಸರು ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.