ಸದ್ಯದಲ್ಲಿಯೇ ಸೋನಿಯಾ, ರಾಹುಲ್ ಗಾಂಧಿ ಜೈಲು ಸೇರಲಿದ್ದಾರೆಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇಕೆ?
ಮಡಿಕೇರಿ, ನ.26: 'ಸದ್ಯದಲ್ಲಿಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ (Sonia Gandhi- Rahul Gandh )ಜೈಲು ಸೇರಲಿದ್ದಾರೆ' ಎಂದು ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ (Subramanian Swamy) ಹೇಳಿದ್ದಾರೆ.
ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ''ಯಾರು ಭಾರತವನ್ನು ಒಡೆದರೋ ಅವರೇ ತಾವು ಮಾಡಿದ ಕೃತ್ಯಕ್ಕೆ ಪ್ರಾಯಶ್ಚಿತವಾಗಿ “ಭಾರತ್ ಜೋಡೊ” ಎಂದು ತಾವೇ ಒಡೆದ ಭಾರತವನ್ನು ಜೋಡಿಸಲು ಹೊರಟಂತಿದೆ. ರಾಹುಲ್ ಗಾಂಧಿಗೆ ಮಾತ್ರ ಭಾರತ ಒಡೆದಂತೆ ಕಾಣುತ್ತಿದೆಯೇ ವಿನಾ ನಿಜವಾದ ಭಾರತ ಒಗ್ಗಟ್ಟಿನ ಭಾರತವಾಗಿದೆ, ಎಲ್ಲೂ ಒಡೆದ ಭಾರತದಂತಿಲ್ಲ. ಸದ್ಯದಲ್ಲಿಯೇ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಜೈಲಿಗೆ ಹೋಗುತ್ತಾರೆ'' ಎಂದು ಹೇಳಿದರು.
''ಕೆಲವು ವಿಚಾರಗಳ ಬಗ್ಗೆ ಬಿಗಿ ನಿರ್ಧಾರಗಳನ್ನು ಮೋದಿ ಕೈಗೊಂಡಿಲ್ಲ ಎಂಬ ಅಸಮಾಧಾನವಿದೆ. ಹೀಗಿದ್ದರೂ ದೇಶದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಬೆಂಬಲದಿಂದ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ'' ಸುಬ್ರಹ್ಮಣ್ಯ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.