ಬೆಂಗಳೂರು | ಕೇರಳ ಮೂಲದ ಯುವತಿಯ ಅತ್ಯಾಚಾರ ಆರೋಪ; ರ್ಯಾಪಿಡೊ ಬೈಕ್ ಸವಾರ, ಸ್ನೇಹಿತ ಬಂಧನ
ಬೆಂಗಳೂರು, ನ.29: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಶಹಾಬುದ್ದೀನ್, ಅಖ್ತರ್ ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರ ಕೃತ್ಯಕ್ಕೆ ಸಹಕರಿಸಿ, ಅತ್ಯಾಚಾರ ಸಂಗತಿ ಮುಚ್ಚಿಟ್ಟಿದ್ದ ಆರೋಪದಡಿ ಯುವತಿಯನ್ನೂ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಕೇರಳದ 22 ವರ್ಷದ ಯುವತಿ, ಕೆಲಸಕ್ಕೆಂದು ನಗರಕ್ಕೆ ಬಂದಿದ್ದರು. ಬಿಟಿಎಂ ಲೇಔಟ್ನ ಕಂಪೆನಿಯೊಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ವಾಸವಿದ್ದರು.ನ.24 ರಾತ್ರಿ ಕೆಲಸ ಮುಗಿಸಿ ಇಲ್ಲಿನ ಬಿಟಿಎಂ ಲೇಔಟ್ನಲ್ಲಿರುವ ಸ್ನೇಹಿತರೊಬ್ಬರ ಮನೆಗೆ ಯುವತಿ ಹೋಗಿದ್ದರು. ಅಲ್ಲಿ ಸ್ನೇಹಿತರೊಂದಿಗೆ ಸೇರಿ ಮದ್ಯ ಸೇವನೆ ಮಾಡಿದ್ದಾರೆ ಎನ್ನಲಾಗಿದೆ.
ಪಾನಮತ್ತ ಸ್ಥಿತಿಯಲ್ಲೇ ನೀಲಾದ್ರಿನಗರದಲ್ಲಿರುವ ತಮ್ಮ ಮನೆಗೆ ಹೊರಟಲು ಸಜ್ಜಾಗಿದ್ದ ಯುವತಿ, ರ್ಯಾಪಿಡೊ ಬೈಕ್ ಕಾಯ್ದಿರಿಸಿದ್ದಾರೆ. ಆಗ ಬೈಕ್ ಚಾಲಕನಾಗಿ ಶಹಾಬುದ್ದೀನ್, ಸ್ಥಳಕ್ಕೆ ಬಂದು ಯುವತಿಯನ್ನು ಹತ್ತಿಸಿಕೊಂಡು ನೀಲಾದ್ರಿನಗರದ ನಿಗದಿತ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಸ್ನೇಹಿತ ಅಖ್ತರ್ ಜೊತೆ ಸೇರಿ ಯುವತಿಯನ್ನು ಅಪಹರಿಸಿಕೊಂಡು ಕೊಠಡಿಯೊಂದಕ್ಕೆ ಕರೆದೊಯ್ದಿದ್ದ ಎಂದು ಹೇಳಲಾಗುತ್ತಿದೆ.
ಆನಂತರ, ಇಬ್ಬರೂ ಸೇರಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಗತಿ ಗೊತ್ತಿದ್ದರೂ ಆರೋಪಿತ ಯುವತಿ ಸುಮ್ಮನಿದ್ದರು. ಆನಂತರ, ಅಸ್ವಸ್ಥಗೊಂಡಿದ್ದ ಯುವತಿ, ಬೇರೆ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಅತ್ಯಾಚಾರ ಆಗಿರುವುದಾಗಿ ವೈದ್ಯರು ದೃಢಪಟ್ಟಿದ್ದಾರೆ ಎನ್ನಲಾಗಿದೆ.
ಬಳಿಕ ನಂತರ ಯುವತಿ ಠಾಣೆಗೆ ಬಂದು ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.