'ಜಮೀನು ಕಿತ್ತುಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ': ಸಂಸದ ಪ್ರತಾಪ್ ಸಿಂಹ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಮೈಸೂರು, ನ.30: ಮೈಸೂರು-ಕುಶಾಲನಗರ ನಡುವಿನ ರೈಲು ಮಾರ್ಗದ ಕಾಮಗಾರಿಗೆ ಜಮೀನು ಸರ್ವೇ ಮಾಡಲು ಅಧಿಕಾರಿಗಳು ಬರಲಿದ್ದಾರೆ ಎಂಬ ಮಾಹಿತಿ ತಿಳಿದ ಹುಣಸೂರು ತಾಲೂಕಿನ ಚಿಕ್ಕ ಬಿಚ್ಚನಹಳ್ಳಿ ಗ್ರಾಮಸ್ಥರು, ಸಂಸದ ಪ್ರತಾಪಸಿಂಹ ಅವರ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ.
''ಉದ್ಯಮಿಗಳ ಪ್ರಭಾವದ ಒತ್ತಡಕ್ಕೆ ಮಣಿದು, ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಕುಶಾಲನಗರ ನಡುವಿನ ರೈಲು ಮಾರ್ಗ ಬದಲಿಸಿ ನಮ್ಮ ಜಮೀನಿನ ಮೇಲೆ ಹಾಯ್ದು ಹೋಗುವಂತೆ ಮಾಡಿದ್ದಾರೆ. ಪ್ರಾಣ ಕೊಟ್ಟೇವು ಆದರೆ ನಮ್ಮ ಜಮೀನು ಮಾತ್ರ ಬಿಡುವುದಿಲ್ಲ'' ಎಂದು ಚಿಕ್ಕಬಿಚ್ಚನಹಳ್ಳಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರತಾಪ್ ಸಿಂಹ ಅವರು ಬೇರೆಕಡೆ ಹೋಗುತ್ತಿದ್ದ ರೈಲ್ವೆ ರಸ್ತೆಯನ್ನು ನಮ್ಮಕಡೆ ಹೋಗುವಂತೆ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
'ಉದ್ಯಮಿಗಳ ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಸಂಸದ ಪ್ರತಾಪ್ ಸಿಂಹ ಅವರು, ಮೈಸೂರು ಕುಶಾಲನಗರ ಮಾರ್ಗದರೈಲ್ವೆ ರಸ್ತೆಯನ್ನು ಎರಡು ಭಾರೀ ರೈಲ್ವೆ ಮಾರ್ಗ ಬದಲಾವಣೆ ಮಾಡಿದರೆ, ಈಗ ಅರ್ಧ ಎಕರೆ ಹತ್ತು ಕುಂಟೆ ಜಮೀನು ಇರುವ ಬಡ ರೈತರ ಜೀವನವನ್ನು ಕಿತ್ತುಕೊಳ್ಳುತ್ತಿದ್ದರೆ. ನಮ್ಮ ಪ್ರಾಣ ಕೊಟ್ಟರೂ ಜಮೀನು ಕೊಡುವುದಿಲ್ಲ' ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
'ನಮ್ಮ ಜಮೀನು ಕಿತ್ತುಕೊಂಡರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ' ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
'ನಾವು ಅಲ್ಪ ಸ್ವಲ್ಪಜಮೀನು ಇಟ್ಟು ಕೊಂಡು ಜೀವನ ನಡೆಸುತ್ತಿದ್ದೇವೆ. ನಿಮ್ಮಹೆಂಡತಿ ಮಕ್ಕಳು ಚೆನ್ನಾಗಿರಲಿ ನಮ್ಮ ಹೆಂಡತಿ ಮಕ್ಕಳು ಏನು ಮಾಡಬೇಕು, ರೈತರ ಹೆಂಡತಿ ಮಕ್ಕಳು ಚೆನ್ನಾಗಿ ಇರಬಾರದಾ?'ಎಂದು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ವಾಗ್ದಾಳಿ ನಡೆಸಿದರು.