ತಾಜ್ಮಹಲ್ ಕುರಿತ 'ಐತಿಹಾಸಿಕ ತಪ್ಪು'ಗಳನ್ನು ತಿದ್ದಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಚರಿತ್ರೆ ಕೆದಕಲು ನಾವಿಲ್ಲಿ ಕುಳಿತಿಲ್ಲ ಎಂದ ನ್ಯಾಯಾಲಯ
![ತಾಜ್ಮಹಲ್ ಕುರಿತ ಐತಿಹಾಸಿಕ ತಪ್ಪುಗಳನ್ನು ತಿದ್ದಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ ತಾಜ್ಮಹಲ್ ಕುರಿತ ಐತಿಹಾಸಿಕ ತಪ್ಪುಗಳನ್ನು ತಿದ್ದಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್](https://www.varthabharati.in/sites/default/files/images/articles/2022/12/5/358880-1670240820.jpg)
ಹೊಸದಿಲ್ಲಿ: ತಾಜ್ ಮಹಲ್ (Taj Mahal) ನಿರ್ಮಾಣ ಕುರಿತಂತೆ 'ತಪ್ಪು ಐತಿಹಾಸಿಕ ವಿಷಯಗಳನ್ನು' ಇತಿಹಾಸ ಪುಸ್ತಕಗಳು ಹಾಗೂ ಪಠ್ಯಪುಸ್ತಕಗಳಿಂದ ತೆಗೆದು ಹಾಕಬೇಕಬೇಕು ಹಾಗೂ ಸ್ಮಾರಕದ ವಯಸ್ಸನ್ನು ತಿಳಿದುಕೊಳ್ಳಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.
ಈ ಕುರಿತು ಯಾವುದೇ ಮನವಿಯಿದ್ದರೂ ಅದನ್ನು ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಕೆಗೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರ ಪೀಠ ಹೇಳಿದೆ.
"ನಾವು ಇಲ್ಲಿ ಇತಿಹಾಸವನ್ನು ಮರುತೆರೆಯಲು ಕುಳಿತಿಲ್ಲ, ಇತಿಹಾಸ ಮುಂದಿವರಿಯಲಿ. ಎಎಸ್ಐಗೆ ಮನವಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರು,'' ಎಂದು ಪೀಠ ಹೇಳಿದೆ.
ಸುರ್ಜಿತ್ ಸಿಂಗ್ ಯಾದವ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿ ನ್ಯಾಯಾಲಯ ಅದನ್ನು ವಜಾಗೊಳಿಸಿದೆ. ತಾಜ್ ಮಹಲ್ ನಿರ್ಮಿಸಿ ಎಷ್ಟು ವರ್ಷವಾಗಿರಬಹುದೆಂದು ತಿಳಿಯಲು ತನಿಖೆ ನಡೆಸಬೇಕೆಂದು ಪುರಾತತ್ವ ಇಲಾಖೆಗೆ ಸೂಚಿಸಬೇಕೆಂದೂ ಅರ್ಜಿಯಲ್ಲಿ ತಿಳಿಸಲಾಗಿತ್ತು.
ಮುಘಲ್ ದೊರೆ ಶಾಹ್ ಜಹಾನ್ ತನ್ನ ಪತ್ನಿ ಮುಮ್ತಾಝ್ ಮೃತದೇಹವನ್ನು ದಫನ ಮಾಡಿದ ಸ್ಥಳದಲ್ಲಿ ಅದಾಗಲೇ ಭವ್ಯ ಕಟ್ಟಡವೊಂದು ಇತ್ತು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ ಎಂದು ಅರ್ಜಿದಾರರು ಹೇಳಿದ್ದಾರೆ.