ನ್ಯಾಯಾಧೀಶರ ವಿರುದ್ಧ ತಾರತಮ್ಯ ಆರೋಪ ಹೊರಿಸಿದ್ದಕ್ಕೆ ಬೇಷರತ್ ಕ್ಷಮೆ ಕೋರಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಖುದ್ದು ಹಾಜರಾಗಿ ಕ್ಷಮೆಕೋರುವುದಕ್ಕೆ ಕಷ್ಟವಿದೆಯೇ ಎಂದು ಪ್ರಶ್ನಿಸಿದ ನ್ಯಾಯಾಲಯ
![ನ್ಯಾಯಾಧೀಶರ ವಿರುದ್ಧ ತಾರತಮ್ಯ ಆರೋಪ ಹೊರಿಸಿದ್ದಕ್ಕೆ ಬೇಷರತ್ ಕ್ಷಮೆ ಕೋರಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನ್ಯಾಯಾಧೀಶರ ವಿರುದ್ಧ ತಾರತಮ್ಯ ಆರೋಪ ಹೊರಿಸಿದ್ದಕ್ಕೆ ಬೇಷರತ್ ಕ್ಷಮೆ ಕೋರಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ](https://www.varthabharati.in/sites/default/files/images/articles/2022/12/6/358993-1670318193.jpg)
ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಲ್ಲೊಬ್ಬರಾಗಿರುವ ಹೋರಾಟಗಾರ ಗೌತಮ್ ನವ್ಲಾಖ (Gautam Navlakha) ಅವರ ಟ್ರಾನ್ಸಿಟ್ ರಿಮಾಂಡ್ ಮತ್ತು ಗೃಹ ಬಂಧನವನ್ನು ರದ್ದುಗೊಳಿಸಿ 2018ರಲ್ಲಿ ಜಸ್ಟಿಸ್ ಎಸ್ ,ಮುರಳೀಧರ್ ಹೊರಡಿಸಿದ್ದ ಆದೇಶದ ಹಿನ್ನೆಲೆಯಲ್ಲಿ ಅವರ ವಿರುದ್ಧ ತಾರತಮ್ಯ ಆರೋಪ ಹೊರಿಸಿ ನೀಡಿದ್ದ ಹೇಳಿಕೆಗಾಗಿ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri ) ಅವರು ದಿಲ್ಲಿ ಹೈಕೋರ್ಟ್ಗೆ (Delhi High Court) ಸಲ್ಲಿಸಿದ ಅಫಿಡವಿಟ್ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಅಗ್ನಿಹೋತ್ರಿ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ನಿರ್ದೇಶಕ ಎಸ್ ಗುರುಮೂರ್ತಿ ವಿರುದ್ಧ ದಿಲ್ಲಿ ಹೈಕೋರ್ಟ್ 2018 ರಲ್ಲಿ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ವಿವೇಕ್ ಅಗ್ನಿಹೋತ್ರಿ ಇದೀಗ ಕ್ಷಮೆಯಾಚಿಸಿದ್ದಾರೆ.
ಹೈಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಿದ್ದ ಅಗ್ನಿಹೋತ್ರಿ ತಾವು ಮುರಳೀಧರ್ ಕುರಿತು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾಗಿ ಹೇಳಿದ್ದರು. ಆದರೆ ಈ ಟ್ವೀಟ್ಗಳನ್ನು ಅಗ್ನಿಹೋತ್ರಿ ಡಿಲೀಟ್ ಮಾಡಿಲ್ಲ, ಟ್ವಿಟರ್ ಡಿಲೀಟ್ ಮಾಡಿತ್ತು ಎಂದು ಅಮಿಕಸ್ ಕ್ಯುರೇ ಹೇಳಿದ್ದರು.
ಈ ಪ್ರಕರಣದ ಮುಂದಿನ ವಿಚಾರಣೆ ಮುಂದಿನ ವರ್ಷದ ಮಾರ್ಚ್ 16 ರಂದು ನಡೆಯುವ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ನ್ಯಾಯಾಧೀಶರು ಅಗ್ನಿಹೋತ್ರಿಗೆ ಸೂಚಿಸಿದರು. "ಖುದ್ದು ಹಾಜರಾಗಿ ಕ್ಷಮೆಕೋರುವುದಕ್ಕೆ ಅವರಿಗೇನಾದರೂ ಕಷ್ಟವಿದೆಯೇ? ಅಫಿಡವಿಟ್ ಮೂಲಕ ಯಾವತ್ತೂ ಕ್ಷಮೆಯಾಚಿಸುವ ಹಾಗಿಲ್ಲ,ʼʼ ಎಂದು ನ್ಯಾಯಾಧೀಶರು ಹೇಳಿದರು.
ಇದನ್ನೂ ಓದಿ: 'CFI ಸೇರಿರಿ' ಗೋಡೆಬರಹ ಒಂದೆರಡು ತಿಂಗಳ ಹಳೆಯದು: ಪೊಲೀಸರ ಮಾಹಿತಿ