ಪಿಪಿಸಿಯ ಷಹಜಹಾನ್ ಇಕ್ಬಾಲ್ ನೇತೃತ್ವದ ತಂಡಕ್ಕೆ ಎನ್ಸಿಐಸಿಪಿ-2022ರಲ್ಲಿ 2ನೇ ಸ್ಥಾನ
ಉಡುಪಿ, ಡಿ.8: ನಗರದ ಪೂರ್ಣಪ್ರಜ್ಞ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ ಷಹಜಹಾನ್ ಇಕ್ಬಾಲ್ ಅವರು ತನ್ನ ತಂಡದ ಪರವಾಗಿ ಪಾಟ್ನಾದ ಪಾಟಲೀಪುತ್ರ ವಿವಿಯಲ್ಲಿ ನಡೆದ ಎನ್ಸಿಐಸಿಪಿ-22ರಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಎರಡನೇ ಪ್ರಶಸ್ತಿಯನ್ನು ಸ್ವೀಕರಿಸಿದರಲ್ಲದೇ, ಇದೇ ಸಂದರ್ಭದಲ್ಲಿ ಖ್ಯಾತ ವಿಜ್ಞಾನಿ ಪದ್ಮಶ್ರೀ ಎಚ್. ಸಿ.ಶರ್ಮರನ್ನು ಭೇಟಿಯಾಗುವ ಅವಕಾಶವನ್ನೂ ಪಡೆದರು.
ಪೂರ್ಣಪ್ರಜ್ಞ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿಗಳಾದ ಷಹಜಹಾನ್ ಇಕ್ಬಾಲ್, ಚೈತ್ರಿಕಾ ಬಿ.ಎಂ., ಮೊಹಮ್ಮದ್ ಹಾಶಿಮ್ ಮತ್ತು ಚ್ಯವನ್ ಹೆಗಡೆ ಇವರ ನ್ನೊಳಗೊಂಡ ತಂಡ, ಭಾರತೀಯ ಭೌತಶಾಸ್ತ್ರ ಶಿಕ್ಷಕರ ಸಂಘ (ಐಎಪಿಟಿ) ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕಂಪ್ಯೂಟೇಶನಲ್ ಫಿಸಿಕ್ಸ್ ಸ್ಪರ್ಧೆ - ಎನ್ಸಿಐಸಿಪಿ-2022ರಲ್ಲಿ ಭಾಗವಹಿಸಿ ‘ಕಂಪ್ಯೂಟೇಷನಲ್ ಸ್ಟಡಿ ಟೆಂಪರೇಚರ್ ಡೆಪೆಂಡೆನ್ಸ್ ಆಫ್ ಎನ್ಕ್ಯೂಆರ್ ಫ್ರಿಕ್ವೆನ್ಸಿ ಎಂಡ್ ಇಂಟರ್ನಲ್ ಮೋಷನ್ಸ್ ಆಫ್ ಕಂಪೌಂಡ್ಸ್ ಇನ್ ಪ್ಲಾಂಟ್ ನ್ಯೂಟ್ರಿಯೆಂಟ್ಸ್ ಕಾನ್ಸ್ಟಿಟ್ಯುಯೆಂಟ್ ಆಫ್ ಹರ್ಬಿಸೈಡ್’ ಎಂಬ ಪ್ರಾಜೆಕ್ಟ್ನ್ನು ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಮು ಎಲ್ ಮತ್ತು ಅತುಲ್ ಭಟ್ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಪಡಿಸಿತ್ತು.
ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳ ಈ ತಂಡ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಗೆದ್ದು ಕೊಂಡಿತ್ತು. ಇದೇ ಡಿ.2ರಿಂದ 4ರ ವರೆಗೆ ಪಾಟ್ನಾದ ಪಾಟಲಿಪುತ್ರ ವಿಶ್ವವಿದ್ಯಾಲಯದಲ್ಲಿ ನಡೆದ 36ನೇ ವಾರ್ಷಿಕ ಐಎಪಿಟಿ ಸಮಾವೇಶದಲ್ಲಿ ಷಹಜಹಾನ್ ಇಕ್ಬಾಲ್ ಈ ಪ್ರೊಜೆಕ್ಟನ್ನು ಪ್ರಸ್ತುತ ಪಡಿಸಿದ್ದು ತಂಡದ ಪರವಾಗಿ ನಗದು ಬಹುಮಾನ ಸ್ವೀಕರಿಸಿದರು.
ಪ್ರಸ್ತುತಿಯ ಸಂದರ್ಭದಲ್ಲಿ ಅವರು ಹಲವಾರು ಭೌತಶಾಸ್ತ್ರ ಪುಸ್ತಕಗಳ ಖ್ಯಾತ ಲೇಖಕರು ಹಾಗೂ ಐಐಟಿ ಕಾನ್ಪುರದ ವಿಶ್ರಾಂತ ಪ್ರಾಧ್ಯಾಪಕರಾದ ಪದ್ಮಶ್ರೀ ಪ್ರೊ. ಎಚ್.ಸಿ. ವರ್ಮಾರನ್ನು ಭೇಟಿಯಾದರು. ಇಕ್ಬಾಲ್ ಅವರ ಸಂಶೋಧನಾ ಪ್ರಬಂಧ ಹಾಗೂ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ ತಂಡದ ಕಾರ್ಯವನ್ನು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ವಿದ್ಯಾರ್ಥಿ ಗಳ ಈ ಸಾಧನೆಯನ್ನು ಅಭಿನಂದಿಸಿದ್ದಾರೆ.