ಮಂಗಳೂರು: ಡಿ.10ರಂದು ಎನ್ಪಿಎಸ್ ನೌಕರರ ಸಂಘದಿಂದ ‘ನಮ್ಮ ಮತ ಒಪಿಎಸ್ಗೆ’ ಅಭಿಯಾನ, ಪಾದಯಾತ್ರೆ
ಮಂಗಳೂರು, ಡಿ.9: ರಾಜ್ಯ ಸರಕಾರಿ ಎನ್ಪಿಎಸ್ ನೌಕರರ ಸಂಘದ ಮಂಗಳೂರು ತಾಲೂಕು ಘಟಕದ ವತಿಯಿಂದ ಡಿ.10ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಬೃಹತ್ ಪಾದಯಾತ್ರೆ, ಸಭೆ ಮತ್ತು ‘ನಮ್ಮ ಮತ ಒಪಿಎಸ್’ ಎಂಬ ಅಭಿಯಾನ ಆಯೋಜಿಸಲಾಗಿದೆ.
ಕರ್ನಾಟಕ ಸರಕಾರದ ನೌಕರರಿಗೆ ಹಳೆ ಪಿಂಚಣಿಯನ್ನು ಜಾರಿಗೆ ತರಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರ ಎನ್ಪಿಎಸ್ ನೌಕರರ ಸಂಘ ಡಿ.19ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಿದೆ. ಇದರ ಪೂರ್ವಭಾವಿಯಾಗಿ ತಾಲೂಕಿನ ಸರಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿಗಳಲ್ಲಿ, ಅನುದಾನಿತ ಹಾಗೂ ಅರೆ ಸರಕಾರಿ ನೌಕರರನ್ನು ಜಾಗೃತಿಗೊಳಿಸಲು ಈ ಕಾರ್ಯಕ್ರಮ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಚಂದ್ರನಾಥ ಎಂ. ತಿಳಿಸಿದ್ದಾರೆ.
ಪಾದಯಾತ್ರೆಗೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಗರದ ಪುರಭವನದ ಮಿನಿ ಹಾಲ್ನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬ ಉದ್ಘಾಟಿಸಲಿದ್ದಾರೆ. ಡಾ.ಶೇಷಪ್ಪ ಅಮೀನ್ ಪ್ರಸ್ತಾವನೆ ಮತ್ತು ಸ್ವಾಗತಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭಾಗವಹಿಸಲಿದ್ದಾರೆ.
ಎನ್ಪಿಎಸ್ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ ಪ್ರಧಾನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಶಾಂತಾರಾಮ ತೇಜ, ನಾಗನ ಗೌಡರು, ಕೃಷ್ಣ, ಇಬ್ರಾಹಿಂ, ಆದರ್ಶ, ವಿಮಲ್ ನೆಲ್ಯಾಡಿ, ವಿದ್ಯಾಧರ ರೈ, ಯತೀಶ್ ಪಿ., ಪ್ರಶಾಂತ್ ಪೈ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶೇಷಪ್ಪ್ಪ ಅಮೀನ್, ಲಕ್ಷ್ಮೀಕಾಂತ್, ಪ್ರದೀಪ್ ಕುಮಾರ್, ಕರಿಬಸಪ್ಪ ಎಂ.ಎಸ್. ಉಪಸ್ಥಿತರಿದ್ದರು.