ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯಕ್ಕೆ ಮಹತ್ವ: ಎಸ್.ಆರ್.ವಿಜಯಶಂಕರ್
ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಸುಳ್ಯ : ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯ ಮತ್ತು ಮಹತ್ವವನ್ನು ಪ್ರತಿಪಾದಿಸಿದ್ದು ನಮ್ಮ ಸಾಹಿತ್ಯ. ನಮಗೆ ಸಮಾನತೆ ಮತ್ತು ಸ್ವಾತಂತ್ರ್ಯದ ಮಹತ್ವವನ್ನು ನಮಗೆ ಕಲಿಸಿದ್ದು ಭಾಷೆ ಮತ್ತು ಸಾಹಿತ್ಯ ಎಂದು ಹಿರಿಯ ವಿಮರ್ಶಕರು ಹಾಗು ಸಾಹಿತಿ ಎಸ್.ಆರ್.ವಿಜಯಶಂಕರ ಹೇಳಿದ್ದಾರೆ.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಘಟಕ, ಸಮ್ಮೇಳನ ಸ್ವಾಗತ ಸಮಿತಿಯ ಆಶ್ರಯದಲ್ಲಿ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಸಜ್ಜನ ಸಭಾಭವನದಲ್ಲಿ ನಡೆದ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದು ಬೇಕು, ಯಾವುದು ಬೇಡ, ಯಾವುದನ್ನು ಉಳಿಸಬೇಕು, ಯಾವುದನ್ನು ತ್ಯಜಿಸಬೇಕು ಎಂಬುದನ್ನು ಸಾಹಿತ್ಯ ಸ್ಪಷ್ಟಪಡಿಸುತ್ತದೆ.ಭಾಷೆಯು ಸಾಹಿತ್ಯದ ಮೂಲಕ ಸಾಕಾರಗೊಳ್ಳುತ್ತದೆ. ಆ ಮೂಲಕ ಭಾಷೆ ಬೆಳವಣಿಗೆ ಆಗುತ್ತದೆ. ಭಾಷೆ ಎಲ್ಲದಕ್ಕೂ ಮೂಲ. ಆದುದರಿಂದ ಭಾಷೆ, ಸಾಹಿತ್ಯ, ಸಂಸ್ಕೃತಿಯ ಮಧ್ಯೆ ಅವಿನಾಭಾವ ಸಂಬಂಧ ಇದೆ. ಭಾಷೆಯ ಔಚಿತ್ಯ ಮತ್ತು ಔನ್ಯತ್ತಿಯನ್ನು ಸಾಧಿಸಲು ಸಾಹಿತ್ಯ ಮತ್ತು ಸಂಸ್ಕೃತಿಯು ಸಹಾಯಕ ಎಂದು ಅವರು ಹೇಳಿದರು.
ಹಿಂಗಾರ ಅರಳಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಮಾತನಾಡಿ ಭಾಷೆಯ ಬಗ್ಗೆ ಅಭಿಮಾನ ಬೇಕು.ಭಾಷೆಯ ಬಗ್ಗೆ ಅಭಿಮಾನ ಇದ್ದರೆ ಭಾವನೆಗಳು ಬೆಳೆಯಬಹುದು. ಭಾಷೆಯ ಬೆಳವಣಿಗೆಗೆ ಏನು ಮಾಡಬಹುದು ಎಂಬ ಬಗ್ಗೆ ಸರಕಾರ ಮತ್ತು ಪ್ರತಿಯೊಬ್ಬರೂ ಯೋಚನೆ ಮಾಡಬೇಕು ಎಂದು ಹೇಳಿದರು. ಭಾಷೆಯ ಬೆಳವಣಿಗೆಗೆ ಮತ್ತು ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನ ಮಾಡಲು ಸರಕಾರ ಒತ್ತು ನೀಡುತಿದೆ ಎಂದು ಹೇಳಿದರು.
ಡಾ. ಶಿವರಾಮ ಕಾರಂತ ಸಭಾಂಗಣ , ಪ್ರೊ.ನಿಸಾರ್ ಅಹಮದ್ ವೇದಿಕೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕ ಕೆ.ಆರ್ ಗಂಗಾಧರ ಸರ್ವಾಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಸ್ಮರಣ ಸಂಚಿಕೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಬಿಡುಗಡೆ ಮಾಡಿದರು. ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಹಾಗು ಸಾಹಿತಿ ಸುಬ್ರಾಯ ಸಂಪಾಜೆ ಹೊಸ ಕೃತಿಗಳನ್ನು ಬಿಡುಗಡೆ ಮಾಡಿದರು. ಕನ್ನಡ ಭುವನೇಶ್ವರಿಯ ಮೆರವಣಿಗೆಗೆ ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕ್ಯೊಂಗಾಜೆ ಚಾಲನೆ ನೀಡಿದರು.
ರಾಷ್ಟ್ರ ಧ್ವಜಾರೋಹಣವನ್ನು ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಜಿ.ಕೆ ಹಮೀದ್, ಪರಿಷತ್ನ ಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಮತ್ತು ಕನ್ನಡ ಧ್ವಜಾರೋಹಣವನ್ನು ಕಸಾಪ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲ್ ನೆರವೇರಿಸಿದರು. ವಸ್ತು ಪ್ರದರ್ಶನವನ್ನು ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಪುಸ್ತಕ ಪ್ರದರ್ಶನವನ್ನು ತಹಸೀಲ್ದಾರ್ ಅನಿತಾಲಕ್ಷ್ಮಿ ನೆರವೇರಿಸಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಸ್ವಾಗತಿಸಿದರು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಸಮ್ಮೇಳನದ ಆಶಯ ನುಡಿ ನುಡಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರಾದ ಡಾ.ಪೂವಪ್ಪ ಕಣಿಯೂರು ಮಾತನಾಡಿದರು.
ಡಾ.ಲೀಲಾಧರ್ ಡಿ.ವಿ. ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಪ್ರೊ.ಸಂಜೀವ ಕುದ್ಪಾಜೆ ಸ್ಮರಣ ಸಂಚಿಕೆ ಬಗ್ಗೆ ಮಾತನಾಡಿದರು. ಸಾಹಿತ್ಯ ಸಮ್ಮೇಳನ ಹಾಗು ಕಸಾಪ ಪದಾಧಿಕಾರಿಗಳಾದ ದಾಮೋದರ.ಕೆ, ದಯಾನಂದ ಆಳ್ವ, ಚಂದ್ರಮತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೇಜಸ್ವಿ ಕಡಪಳ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ವಂದಿಸಿದರು.
ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ನಮ್ಮ ಅಭಿಮಾನದ ಪ್ರತೀಕ. ಆಂಗ್ಲ ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಅಥವಾ ಯಾವುದೇ ಭಾಷೆ ಕನ್ನಡದ ಮೇಲೆ ಆಕ್ರಮಣ, ಶೋಷಣೆ, ದಬ್ಬಾಳಿಕೆ ಮಾಡಿದರೂ ಎದೆಗುಂದದ ಸಂಪದ್ಭರಿತ ಭಾಷೆ ನಮ್ಮದು ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಹಾಗು ಹಿರಿಯ ಸಾಹಿತಿ ಕೆ.ಆರ್.ಗಂಗಾಧರ ಹೇಳಿದ್ದಾರೆ.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಘಟಕ, ಸಮ್ಮೇಳನ ಸ್ವಾಗತ ಸಮಿತಿಯ ಆಶ್ರಯದಲ್ಲಿ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಸಜ್ಜನ ಸಭಾಭವನದಲ್ಲಿ ನಡೆದ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಅಖಂಡ ಭಾರತದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸುವ ಭಾಷೆಯಾಗಿ, ಸ್ವಾಭಿಮಾನದ ಪ್ರತೀಕವಾಗಿ, ಕರುನಾಡ ಜನರ ಸಂಸ್ಕೃತಿಯ ಜೀವನಾಡಿಯಾಗಿ ಕಣಕಣದಲ್ಲೂ ಹಾಸು ಹೊಕ್ಕಾಗಿ ಆವರಿಸಿಕೊಂಡಿರುವ ನಮ್ಮ ಸರಳ, ಸುಂದರ ನಾಡು ನುಡಿ ಕನ್ನಡ. ಕನ್ನಡ ಭಾಷೆ ಜಗತ್ತಿನ ಶಾಸ್ರ್ತೀಯ ಹಾಗೂ ಪ್ರಾಚೀನ ಭಾಷೆಗಳಲ್ಲಿ ಒಂದು. ಸುಳ್ಯ ತಾಲೂಕು ಭಾಷಾ ಸಾಮರಸ್ಯ ಕಾಪಾಡಿಕೊಂಡಿದೆ.ಯಕ್ಷಗಾನದ ಮೂಲಕ ಕನ್ನಡ ಭಾಷೆಯ ಪೂರಕ ಬೆಳವಣಿಗೆ ಭಾಷೆಯನ್ನು ಗಟ್ಟಿಗೊಳಿಸಿದೆ ಎಂದು ಹೇಳಿದರು.