ಸುಳ್ಯ ತಾಲೂಕು 26ನೇ ಕನ್ನಡ ನುಡಿಜಾತ್ರೆ ಸಮಾರೋಪ: ಸಾಧಕರಿಗೆ ಕನ್ನಡ ಕಸ್ತೂರಿ ಸನ್ಮಾನ

ಸುಳ್ಯ: ಆಧುನಿಕ ಕಾಲದಲ್ಲಿ ಎಲ್ಲವೂ ಕೊಚ್ಚಿ ಹೋಗುವ ಬದುಕಿನಲ್ಲಿ ಇದ್ದೇವೆ. ಇಂತಹ ಧಾವಂತದ ಸಮಾಜದಲ್ಲಿ ಅಪಾಯದ ಚಿಂತನೆಯ ಎಚ್ಚರಿಕೆ ಬೇಕು. ಭಾಷೆ ನಾಶವಾದರೇ ಬದುಕು ನಾಶ ವಾದಂತೆ ಎಂದು ಸಾಹಿತಿ, ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಗಣರಾಜ ಕುಂಬ್ಳೆ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಮತ್ತು ಸಮ್ಮೇಳನ ಸ್ವಾಗತ ಸಮಿತಿ ನೇತೃತ್ವದಲ್ಲಿ ಶನಿವಾರ ಗೂನಡ್ಕ ಬೀಜದಕಟ್ಟೆಯ ಸಜ್ಜನ ಸಭಾಭವನದ ಬಳಿ ನಡೆದ ಸುಳ್ಯ ತಾಲೂಕು 26ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ನಾಡು ಕಟ್ಟುವ ಪ್ರಯತ್ನ ಸಮ್ಮೇಳನಗಳಿಂದ ಆಗಬೇಕು. ಭಾಷೆ ಹೋದರೆ ಬದುಕೂ ಹೋಗುತ್ತದೆ ಎಂದರು.
ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಸನ್ಮಾನ ನೆರವೇರಿಸಿ ಮಾತನಾಡಿ ಸಾಧಕರನ್ನು ಸನ್ಮಾನಿಸುವುದರಿಂದ ಅವರ ಧನಾತ್ಮಕ ಶಕ್ತಿ ಸಮಾಜಕ್ಕೂ ಬರುತ್ತದೆ ಎಂದರು.
ಸಮ್ಮೇಳನಾಧ್ಯಕ್ಷ ಕೆ.ಆರ್.ಗಂಗಾಧರ್ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಡಾ.ಶ್ರೀನಾಥ್ ಎಂ.ಪಿ. ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಎನ್., ಕಸಾಪ ನಿಕಟಪೂರ್ವಾಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಶಹೀದ್ ಮುಖ್ಯ ಅತಿಥಿಗಳಾಗಿದ್ದರು.
ಕಸಾಪ ನಿರ್ದೇಶಕ ಪ್ರೊ. ಬಾಲಚಂದ್ರ ಗೌಡ ಸ್ವಾಗತಿಸಿ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ದಾಮೋದರ ಕೆ. ವಂದಿಸಿದರು. ಚಂದ್ರಮತಿ ಕೆ. ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಪೋಷಕ ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ., ಸುಳ್ಯ ಕಸಾಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಗೌರವ ಕೋಶಾಧಿಕಾರಿ ದಯಾನಂದ ಆಳ್ವ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಕನ್ನಡ ಕಸ್ತೂರಿ ಸನ್ಮಾನ ನೀಡಿ ಗೌರವಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ತೇಜಕುಮಾರ್ ಬಡ್ಡಡ್ಕ, ಕೃಷಿ ಕ್ಷೇತ್ರದ ಪಿ.ಬಿ.ಪ್ರಭಾಕರ ರೈ, ಉದ್ಯಮ ಕ್ಷೇತ್ರದಲ್ಲಿ ಸತೀಶ್ ಡಿ.ವಿ., ವೈದ್ಯಕೀಯ ಕ್ಷೇತ್ರದ ಡಾ.ತಾಜುದ್ದಿನ್, ಕ್ರೀಡಾ ಕ್ಷೇತ್ರದ ಬಾಲಕೃಷ್ಣ ಕುದ್ವ, ಯಕ್ಷಗಾನದ ಕ್ಷೇತ್ರದಲ್ಲಿ ಸುಬ್ರಾಯ ಪಾಟಾಳಿ ಸಂಪಾಜೆ, ಶಿಕ್ಷಣ ಕ್ಷೇತ್ರದಲ್ಲಿ ಕುಸುಮಾವತಿ ಯು.ಬಿ., ಯಕ್ಷಗುರು ಬಾಲಕೃಷ್ಣ ನಾಯರ್ ನೀರಬಿದಿರೆ, ಸಂಘಟನೆಯಲ್ಲಿ ಡಾ. ಕೆ.ಟಿ.ವಿಶ್ವನಾಥ್, ನಾಟಿ ವೈದ್ಯೆ ಡಾ. ಜಯಲಕ್ಷ್ಮಿ ಜೋಯಿಸ ಕರುವಜೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೃಷ್ಣ ಬೆಟ್ಟ, ದೈವ ನರ್ತಕ ನಾರಾಯಣ ಪರವ ಬಾಳಿಲ ಅವರನ್ನು ಗೌರವಿಸಲಾಯಿತು.