ಸುರತ್ಕಲ್: ಜನಸ್ಪಂದನ ಕಾರ್ಯಕ್ರಮ

ಸುರತ್ಕಲ್, ಡಿ. 11: ಜನಸಾಮಾನ್ಯರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯ ಗತಗೊಳಿಸಿದ ಆತ್ಮ ಸಂತೃಪ್ತಿ ನನ್ನಲ್ಲಿದೆ ಎಂದು ಶಾಸಕ ಡಾ. ವೈ ಭರತ್ ಶೆಟ್ಟಿ ನುಡಿದರು.
ಅವರು ರವಿವಾರ ಸುರತ್ಕಲ್ ವಿದ್ಯಾದಾಯಿನೀ ವಜ್ರಮಹೋತ್ಸವ ಸಭಾಂಗಣದಲ್ಲಿ ಸರಕಾರಿ ಇಲಾಖೆಗಳ ವಿವಿಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಏಳನೇ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ನಾಗರಿಕ ಮೂಲಭೂತ ಸೌಕರ್ಯಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ಸರಕಾರಿ ಯೋಜನೆಗಳನ್ನು ಮೌಲ್ಯಯುತವಾಗಿ ನನ್ನ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಕ್ಷತೀತವಾಗಿ ಪ್ರಜಾಪ್ರಭುತ್ವದ ನೆಲೆಯಲ್ಲಿ ಸರ್ವರಿಗೂ ಒದಗಿಸಿದ್ದೇನೆ ಎಂದ ಅವರು, ಮುಂದಿನ ದಿನಗಳನ್ನು ನನ್ನ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಇರಾದೆಯನ್ನು ವ್ಯಕ್ತಪಡಿಸಿದರು.
ಸುರತ್ಕಲ್, ಪಣಂಬೂರು, ಬೈಕಂಪಾಡಿ ಸುತ್ತುಮುತ್ತಲಿನ ಪ್ರದೇಶಗಳಲ್ಲಿನ ಕೆಲವೊಂದು ರಸ್ತೆಗಳ ಕಾಂಕ್ರೀಟಿ ಕರಣ ಕಾಮಗಾರಿ ಪ್ರಗತಿಯಿಂದ ಸಾಗುತ್ತಿದೆ ಎಂದರು.
ಸರಕಾರಿ ಹಕ್ಕು ಪತ್ರ, ಪಿಂಚಣಿ ಯೋಜನೆ, ಜಾತಿ ಪ್ರಮಾಣ ಅದಾಯ ಪ್ರಮಾಣ ಪತ್ರ, ಆಭಾ ಕಾರ್ಡ್, ಮತದಾರರ ಪಟ್ಟಿ ನೋಂದಣಿ, ಕೃಷಿ ಇಲಾಖೆಯ ಸವಲತ್ತುಗಳನ್ನು ಇದೇ ಸಂದರ್ಭ ಶಾಸಕರು ವಿತರಿಸಿದರು.
ಮನಪಾ ಮೇಯರ್ ಜಯಾನಂದ ಅಂಚನ್, ಸದಸ್ಯರಾದ ಶೋಭಾ ರಾಜೇಶ್, ನಯನಾ ಕೋಟ್ಯಾನ್, ವರುಣ್ ಚೌಟ, ವೇದಾವತಿ, ಸುಮಿತ್ರ ಕರಿಯ, ಸುನೀತಾ, ಸರಿತಾ ಶಶಿಧರ್, ಲೋಕೇಶ್ ಬೊಳ್ಳಾಜೆ, ಪ್ರಶಾಂತ್ ಮೂಡಾಯಿಕೊಡಿ,ಲಕ್ಷ್ಮೀ ಶೇಖರ ದೇವಾಡಿಗ, ರಾಜೇಶ್ ಬೈಕಂಪಾಡಿ, ಪಕ್ಷದ ಪ್ರಮುಖರಾದ ಸಂದೀಪ್ ಪಚ್ಚನಾಡಿ, ಗಣೇಶ್ ಹೊಸಬೆಟ್ಟು, ವಿಠಲ ಸಾಲ್ಯಾನ್, ವಸಂತ ಹೊಸಬೆಟ್ಟು, ಯೋಗಿಶ್ ಕುಳಾಯಿ, ಸುನೀಲ್ ಕುಳಾಯಿ, ರಾಘವೇಂದ್ರ ಶೆಣೈ, ದಿನಕರ್ ಇಡ್ಯಾ, ಪ್ರಮೀಳಾ ಕೋಟ್ಯಾನ್, ಪವಿತ್ರ ನಿರಂಜನ್, ಬೇಬಿ, ಮುಂತಾ ದವರು ಉಪಸ್ಥಿತರಿದ್ದರು.
