ಬಂಟ್ವಾಳ: ಜಮೀಯ್ಯತುಲ್ ಫಲಾಹ್ ವತಿಯಿಂದ ಸ್ನೇಹ ಕೂಟ

ವಿಟ್ಲ: ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದು ಒಂದು ಹವ್ಯಾಸವಾಗಿದ್ದು ನಿರಂತರ ಸಾಮಾಜಿಕ ಚಟುವಟಿಕೆ ಗಳು ಮನುಷ್ಯನಿಗೆ ಮಾನಸಿಕ ಸಂತೃಪ್ತಿಯನ್ನು ನೀಡುತ್ತವೆ ಎಂದು ಪಿ.ಎ. ಪ್ರಥಮ ದರ್ಜೆ ಕಾಲೇಜು ನಡುಪದವು ಇದರ ಪ್ರಾಂಶುಪಾಲ ಮತ್ತು ಖ್ಯಾತ ಮೈಂಡ್ ಮ್ಯಾಪಿಂಗ್ ತರಬೇತುದಾರ ಸರ್ಫಾಝ್ ಆಶೀಂ ಅಭಿಪ್ರಾಯಪಟ್ಟರು.
ಅವರು ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ನಡೆದ ಸಂಸ್ಥೆಯ ಆಜೀವ ಸದಸ್ಯರ ಸ್ನೇಹ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ಮನಸ್ಸು ಯಾವುದೇ ಚಟುವಟಿಕೆಗಳಿಗೆ ಪ್ರೇರಣೆಯನ್ನು ನೀಡಬಲ್ಲದು, ನಾವು ಒಳಿತು ಮತ್ತು ಕೆಡುಕಿನ ನಡುವೆ ಒಳಿತನ್ನೇ ಆಯ್ಕೆ ಮಾಡಿಕೊಂಡರೆ ಉತ್ತಮ ವ್ಯಕ್ತಿಗಳಾಗುತ್ತೇವೆ ಎಂದು ಹೇಳಿದರು.
ಘಟಕಾಧ್ಯಕ್ಷ ರಶೀದ್ ವಿಟ್ಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಘಟಕದ ಕೋಶಾಧಿಕಾರಿ ಎಂ.ಎಚ್ ಇಕ್ಬಾಲ್ ಉಪಸ್ಥಿತರಿದ್ದರು.
ಇದೇ ವೇಳೆ ಹಾಜಿ ಎನ್. ಸುಲೈಮಾನ್ ನಾರ್ಶ ( ಶಿಕ್ಷಣ ಕ್ಷೇತ್ರ), ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು (ಸಾಮಾಜಿಕ ಕ್ಷೇತ್ರ), ಹಾಜಿ ಉಸ್ಮಾನ್ ಕರೋಪಾಡಿ (ರಾಜಕೀಯ ಕ್ಷೇತ್ರ), ಡಾ. ಅಬ್ದುಲ್ ಬಶೀರ್ ವಿ.ಕೆ (ವೈದ್ಯಕೀಯ ಕ್ಷೇತ್ರ), ಹಾಜಿ ಅಹಮದ್ ಮುಸ್ತಫಾ (ಹೈನುಗಾರಿಕೆ ಕ್ಷೇತ್ರ) ಮತ್ತು ಕೆ.ಎಸ್ ಯಾಸೀರ್ ಕಲ್ಲಡ್ಕ (ಇತಿಹಾಸ ಕ್ಷೇತ್ರ) ಇವರನ್ನು ಸನ್ಮಾನಿಸಲಾಯಿತು. 10 ಮಂದಿಯನ್ನು ಸಂಸ್ಥೆಯ ಅಜೀವ ಸದಸ್ಯರಾಗಿ ಸೇರ್ಪಡೆ ಗೊಳಿಸಲಾಯಿತು.
ಸ್ನೇಹ ಕೂಟದ ಅಂಗವಾಗಿ ನಡೆದ ರಸ ಪ್ರಶ್ನೆಯಲ್ಲಿ ವಿಜೇತರಾದ ಆಜೀವ ಸದಸ್ಯರಾದ ಅಬ್ದುಲ್ ಲತೀಫ್ ಬಿ.ಕೆ, ಅಬ್ದುಲ್ ರಝಾಕ್ ಹಾಜಿ.ಜಿ, ಸಲೀಂ ಅಲ್ತಾಫ್, ಸುಲೈಮಾನ್ ಸೂರಿಕುಮೇರು ಇವರಿಗೆ ಬಹುಮಾನ ವಿತರಿಸಲಾಯಿತು.
ಘಟಕದ ಪೂರ್ವಾಧ್ಯಕ್ಷ ಅಬೂಬಕ್ಕರ್ ವಿಟ್ಲ ಕಿರಾತ್ ಪಠಿಸಿದರು, ಕಾರ್ಯದರ್ಶಿ ಕೆ.ಕೆ. ಶಾಹುಲ್ ಹಮೀದ್ ಸ್ವಾಗತಿಸಿ, ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಪ್ರಸ್ತಾವನೆಗೈದರು. ಉಪಾಧ್ಯಕ್ಷರು ಗಳಾದ ಶೇಕ್ ರಹ್ಮತುಲ್ಲಾ ವಂದಿಸಿ, ಅಬ್ದುಲ್ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.