‘ನ್ಯಾಯಬೆಲೆ ಅಂಗಡಿ’ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಗಂಭೀರ ಆರೋಪ: ಹೈಕೋರ್ಟ್

ಬೆಂಗಳೂರು, ಡಿ.13: ಆರ್ಥಿಕವಾಗಿ ಹಿಂದುಳಿದವರಿಗಾಗಿ ಸ್ಥಾಪಿಸಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್)ಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಆಹಾರ ಧಾನ್ಯ ಮಾರಾಟ ಮಾಡುವುದು ಗಂಭೀರ ಸ್ವರೂಪದ ಆರೋಪವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸಿದ್ದ ಜಿಲ್ಲಾಧಿಕಾರಿಗಳ ಆದೇಶ ಎತ್ತಿ ಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ರಾಮನಗರ ಜಿಲ್ಲೆಯ ಬಿಡದಿಯ ವಾಜರಹಳ್ಳಿಯ ವಿ.ಎಂ. ಸಂಜೀವಯ್ಯ ಅವರ ಕಾನೂನು ವಾರಸುದಾರರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರ ನೇತೃತ್ವದ ವಿಭಾಗೀಯ ಪೀಠ, ಅಧಿಕಾರಿಗಳ ಕ್ರಮವನ್ನು ಎತ್ತಿ ಹಿಡಿದು ಮೇಲ್ಮನವಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಕೆಲ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸದೇ ಇರುವುದು, ರಸೀದಿ ನೀಡದಿರುವ ಆರೋಪದಲ್ಲಿ ನ್ಯಾಯಬೆಲೆ ಅಂಗಡಿ ನಡೆಸಲು ನೀಡಿದ್ದ ಪರವಾನಗಿ ರದ್ದುಪಡಿಸಿದ್ದ ಜಿಲ್ಲಾಧಿಕಾರಿಗಳ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಆರ್ಥಿಕ ದುರ್ಬಲರು ಮತ್ತು ಬಡತನದ ರೇಖೆಗಿಂತ ಕೆಳಗಿರುವವರಿಗೆ ಆಹಾರ ಧಾನ್ಯಗಳು ಮತ್ತು ಸೀಮೆ ಎಣ್ಣೆಯನ್ನು ನಿಗದಿತ ಬೆಲೆಗೆ ಮಾರಾಟ ಮಾಡುವುದೇ ಸಾರ್ವಜನಿಕ ವಿತರಣಾ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಂಥ ವ್ಯಕ್ತಿಗಳಿಗೆ ನೀಡಬೇಕಾದ ಆಹಾರ ಧಾನ್ಯಗಳನ್ನು ಸರಬರಾಜು ಮಾಡದಿರುವುದು ಅತ್ಯಂತ ಗಂಭೀರ ಸ್ವರೂಪದ ದುಷ್ಕøತ್ಯವಾಗಿದೆ. ಈ ನಡವಳಿಕೆ ಕಾರ್ಡ್ದಾರರನ್ನು ಮೂಲ ಸೌಕರ್ಯಗಳಿಂದ ವಂಚಿಸಿದಂತಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?: ಅರ್ಜಿದಾರರ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು 13 ವರ್ಷಗಳಿಗೂ ಹೆಚ್ಚು ಅವಧಿ ಯಾವುದೇ ದೂರುಗಳು ಇಲ್ಲದೆ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದರು. ಈ ನಡುವೆ ರಾಮನಗರ ಜಿಲ್ಲಾಧಿಕಾರಿಗಳು(ಆಹಾರ ವಿಭಾಗ) ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಪಡಿತರ ಮಾರಾಟ ಮಾಡುತ್ತಿದ್ದೀರಿ ಎಂದು ಆರೋಪಿಸಿ 2008ರ ಜುಲೈ 22ರದು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು.
ಇದಕ್ಕೆ ಅರ್ಜಿದಾರರು ಉತ್ತರಿಸಿದ್ದರು, ಇದರಿಂದ ತೃಪ್ತಿಗೊಳ್ಳದ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ವಿರುದ್ಧದ ಆರೋಪವನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಅವರ ಪರವಾನಗಿಯನ್ನು ಜಿಲ್ಲಾಧಿಕಾರಿಗಳು ರದ್ದು ಮಾಡಿ ಆದೇಶಿಸಿದ್ದರು.







