ಗ್ರಾಹಕರು ಎಂದೂ ಬಯಸಿರದ ಸರಕಾರದ ವಿಮಾ ಯೋಜನೆಗೆ ಶುಲ್ಕ ವಿಧಿಸುತ್ತಿರುವ ಬ್ಯಾಂಕುಗಳು: ವರದಿ
ಗ್ರಾಹಕರಿಗೆ ಅಗತ್ಯವಿರದ ಅಥವಾ ಅವರು ಕೋರಿಕೊಂಡಿರದ ಕೇಂದ್ರ ಸರಕಾರದ ಹಲವಾರು ವಿಮೆ ಮತ್ತು ಪಿಂಚಣಿ ಯೋಜನೆಗಳಿಗಾಗಿ (Government Insurance) ದೇಶಾದ್ಯಂತ ಬ್ಯಾಂಕುಗಳು (Banks) ಅವರಿಗೆ ಶುಲ್ಕಗಳನ್ನು ವಿಧಿಸುತ್ತಿವೆ ಮತ್ತು ಗ್ರಾಹಕರು ಈಗಲೂ ಈ ಯೋಜನೆಗಳಿಗಾಗಿ ಶುಲ್ಕಗಳನ್ನು ತೆರುತ್ತಿದ್ದಾರೆ ಎನ್ನುವುದನ್ನು ತಮ್ಮ ತನಿಖೆಯು ಬಹಿರಂಗಗೊಳಿಸಿದೆ ಎಂದು thewire.in ವರದಿ ಮಾಡಿದೆ.
ಸರಕಾರಿ ಮತ್ತು ಖಾಸಗಿ ಬ್ಯಾಂಕುಗಳು ಜೀವವಿಮೆಗಾಗಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY), ಅಪಘಾತ ವಿಮೆಗಾಗಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್ಬಿಐ) ಮತ್ತು ಕಿರು ಪಿಂಚಣಿಗಾಗಿ ಅಟಲ್ ಪಿಂಚಣಿ ಯೋಜನೆ(ಎಪಿಎಸ್)ಯನ್ನು ತಮ್ಮ ಗ್ರಾಹಕರ ಮೇಲೆ ಹೇರುತ್ತಿವೆ. ಈ ಯೋಜನೆಗಳು ಸ್ವಯಂಪ್ರೇರಿತವಾಗಿವೆ ಮತ್ತು ಗ್ರಾಹಕರಿಗೆ ಶುಲ್ಕಗಳನ್ನು ವಿಧಿಸಲು ಅವರ ಸ್ಪಷ್ಟ ಅನುಮತಿಯ ಅಗತ್ಯವಿದೆ ಎಂದು ನಿಯಮಗಳು ಹೇಳುತ್ತಿದ್ದರೂ ಬ್ಯಾಂಕುಗಳು ಬ್ಯಾಕ್ಎಂಡ್ ಮೂಲಕ ಅಥವಾ ಸುಳ್ಳುಗಳು,ವಂಚನೆ ಅಥವಾ ಬಲವಂತದಿಂದ ಗ್ರಾಹಕರನ್ನು ಈ ಯೋಜನೆಗಳಿಗೆ ನೋಂದಾಯಿಸಿಕೊಳ್ಳುತ್ತಿವೆ. ಇದನ್ನು ಕೈಗಾರಿಕಾ ಮಟ್ಟದ ದಾಖಲಾತಿಗಾಗಿ ಇಂತಹ ಅವ್ಯವಹಾರಗಳು ನಡೆಯುತ್ತಿರುವದನ್ನು ಒಪ್ಪಿಕೊಂಡಿರುವ ಬ್ಯಾಂಕ್ ಉದ್ಯೋಗಿಗಳ ಆಡಿಯೊ ಮತ್ತು ವೀಡಿಯೊ ತುಣುಕುಗಳು, ಆರ್ಟಿಐ ಉತ್ತರಗಳು ಮತ್ತು ಬ್ಯಾಂಕ್ ಉದ್ಯೋಗಿಗಳಿಗೆ ಗುರಿಗಳನ್ನು ನಿಗದಿಗೊಳಿಸಿರುವ ಆಂತರಿಕ ಪತ್ರಗಳು ತೋರಿಸುತ್ತಿವೆ.
ಬಡವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಪ್ರಧಾನಿ ನರೇಂದ್ರ ಮೋದಿಯವರು ಮೇ 2015ರಲ್ಲಿ ಈ ಯೋಜನೆಗಳಿಗೆ ಚಾಲನೆ ನೀಡಿದ್ದರು. ಜೀವವಿಮೆಯು ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ ಎರಡು ಲ.ರೂ.ಗಳ ಮತ್ತು ಅಪಘಾತ ವಿಮೆಯು ಅಪಘಾತದಿಂದಾಗಿ ಮರಣ ಅಥವಾ ಅಂಗವಿಕಲತೆ ಉಂಟಾದರೆ ಅಷ್ಟೇ ಮೊತ್ತದ ಪರಿಹಾರವನ್ನು ನೀಡುತ್ತದೆ. ಅಟಲ್ ಪಿಂಚಣಿ ಯೋಜನೆಯು ವ್ಯಕ್ತಿಗೆ 60 ವರ್ಷಗಳಾದ ಬಳಿಕ 5,000 ರೂ.ವರೆಗೆ ಮಾಸಿಕ ಪಿಂಚಣಿಯನ್ನು ಖಾತರಿ ಪಡಿಸುತ್ತದೆ. ಜೀವವಿಮೆ ಮತ್ತು ಅಪಘಾತ ವಿಮೆ ಪಾಲಿಸಿಗಳು ಅನುಕ್ರಮವಾಗಿ 436 ರೂ. ಮತ್ತು 12 ರೂ. ವೆಚ್ಚದಲ್ಲಿ ಪ್ರತಿವರ್ಷ ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತವೆ. ಎಪಿಎಸ್ಗೆೆ ಶುಲ್ಕವು ಗ್ರಾಹಕರು ಆಯ್ದುಕೊಂಡ ಯೋಜನೆಯನ್ನು ಅವಲಂಬಿಸಿರುತ್ತದೆ ಮತ್ತು ಪ್ರತಿ ತಿಂಗಳು ವಿಧಿಸಲಾಗುತ್ತದೆ.
ಬ್ಯಾಂಕುಗಳು ಕಮಿಷನ್ ಗಾಗಿ (ಪಿಎಂಜೆಜೆಬಿವೈಗೆ 41 ರೂ.ಮತ್ತು ಪಿಎಂಎಸ್ಬಿಐಗೆ 2 ರೂ.) ಈ ಯೋಜನೆಗಳಿಗೆ ಗ್ರಾಹಕರನ್ನು ಸೇರಿಸಿಕೊಳ್ಳುವ ಏಜೆಂಟ್ ಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಮತ್ತು ಈ ವ್ಯವಹಾರಗಳು ಅವು ಒಪ್ಪಂದ ಮಾಡಿಕೊಂಡಿರುವ ವಿಮಾ ಕಂಪನಿಗಳಿಗೆ ಸೇರುತ್ತದೆ ಎಂದು thewire.in ವರದಿ ಹೇಳಿದೆ.
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಮತ್ತು ಹಣಕಾಸು ಸೇವೆಗಳ ಇಲಾಖೆ (ಡಿಎಫ್ಎಸ್) ಪ್ರಕಾರ 2022, ಮೇ 32ಕ್ಕೆ 6.58 ಕೋಟಿ ಸಕ್ರಿಯ ಜೀವವಿಮೆ ಪಾಲಿಸಿಗಳಿದ್ದವು. ಈವರೆಗೆ ಸೇರಿಸಿಕೊಳ್ಳಲಾಗಿರುವ 28.63 ಕೋಟಿ ಸಕ್ರಿಯ ಅಪಘಾತ ವಿಮೆ ಪಾಲಿಸಿದಾರರ ಸಂಖ್ಯೆ ತನ್ನ ಬಳಿಯಲ್ಲಿಲ್ಲ ಎಂದು ಐಆರ್ಡಿಎಐ ಹೇಳಿದೆ.
ಬ್ಯಾಂಕುಗಳು ಈ ಯೋಜನೆಗಳಿಗೆ ಜನರನ್ನು ಸೇರಿಸಲು ಮತ್ತು ಅವರನ್ನು ಉಳಿಸಿಕೊಳ್ಳಲು ಅನುಸರಿಸುತ್ತಿರುವ ನಿರ್ಲಜ್ಜ ವಿಧಾನಗಳನ್ನು ಬ್ಯಾಂಕ್ ಉದ್ಯೋಗಿಗಳು ಮತ್ತು ಗ್ರಾಹಕರು ‘ದಿ ರಿಪೋರ್ಟರ್ಸ್ ಕಲೆಕ್ಟಿವ್(TRC)’ಗೆ ಬಹಿರಂಗಗೊಳಿಸಿದ್ದಾರೆ.
ಬ್ಯಾಂಕುಗಳು ಅಗತ್ಯವಿರದಿದ್ದ ವಿಮೆ ಯೋಜನೆಗಳನ್ನು ಬಲವಂತದಿಂದ ಹೇರಿರುವ ಹಲವಾರು ಗ್ರಾಹಕರಲ್ಲಿ ರಾಹುಲ್ ಚೌಹಾಣ್(22) ಒಬ್ಬರಾಗಿದ್ದಾರೆ. ಚೌಹಾಣ್ ಶಾಲೆಯಲ್ಲಿ ಓದುತ್ತಿದ್ದಾಗ ಸರಕಾರಿ ವಿದ್ಯಾರ್ಥಿ ವೇತನವನ್ನು ಪಡೆಯಲು ಎಸ್ಬಿಐನಲ್ಲಿ ಖಾತೆಯನ್ನು ಆರಂಭಿಸಿದ್ದರು. 2019ರಿಂದ ಪ್ರತಿ ವರ್ಷವೂ ಅವರು ಖರೀದಿಸಿಯೇ ಇರದ ಸರಕಾರದ ವಿಮೆ ಪಾಲಿಸಿಗಳಿಗಾಗಿ ಅವರ ಖಾತೆಯಲ್ಲಿ ಖರ್ಚು ಹಾಕಲಾಗುತ್ತಿದೆ. ಪ್ರತಿ ವರ್ಷವೂ ಅವರು ಈ ಖರ್ಚುಗಳನ್ನು ನಿಲ್ಲಿಸುವಂತೆ ಬ್ಯಾಂಕಿಗೆ ಕೋರಿಕೊಳ್ಳುತ್ತಿದ್ದಾರೆ. ಬ್ಯಾಂಕು ಅವರನ್ನು ವಿನಾಕಾರಣ ಅಲೆದಾಡಿಸುತ್ತಿದೆ ಅಥವಾ ಯೋಜನೆಗಳಿಂದ ಹೆಸರನ್ನು ತೆಗೆದು ಹಾಕುವುದಾಗಿ ಹೇಳುತ್ತಿದೆ, ಆದರೆ ಮತ್ತೆ ಮತ್ತೆ ಅವರಿಗೆ ಶುಲ್ಕ ವಿಧಿಸುತ್ತಲೇ ಇದೆ.
ಈ ಯೋಜನೆಗಳಿಗೆ ಗ್ರಾಹಕರನ್ನು ಸೇರಿಸುವ ಅನೈತಿಕ ಪರಿಪಾಠವು ವ್ಯಾಪಕವಾಗಿ ಚಾಲ್ತಿಯಲ್ಲಿದೆ ಎಂದು ಬ್ಯಾಂಕ್ ಉದ್ಯೋಗಿಗಳ ನೂತನ ಒಕ್ಕೂಟ ವಿಬ್ಯಾಂಕರ್ಸ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಆಶಿಷ ಮಿಶ್ರಾ ಟಿಆರ್ಸಿಗೆ ತಿಳಿಸಿದರು. ಬಡ್ತಿಗಳ ಹಿಂದೆ ಬಿದ್ದಿರುವ ಸೀನಿಯರ್ ಮ್ಯಾನೇಜರ್ಗಳು ಯೋಜನೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೇರಿಸದಿದ್ದರೆ ಶಾಖಾ ಮುಖ್ಯಸ್ಥರನ್ನು ನಿಂದಿಸುತ್ತಾರೆ ಮತ್ತು ಅಮಾನತು, ವರ್ಗಾವಣೆ, ವೇತನ ಕಡಿತ ಇತ್ಯಾದಿಗಳ ಬೆದರಿಕೆಗಳನ್ನು ಹಾಕುತ್ತಾರೆ. ಈ ಒತ್ತಡದಿಂದಾಗಿ ಹೇಗಾದರೂ ಮಾಡಿ ಯೋಜನೆಗಳಿಗೆ ಗ್ರಾಹಕರನ್ನು ಸೇರಿಸುವುದು ಬ್ಯಾಂಕ್ ಶಾಖೆಗಳಿಗೆ ಅನಿವಾರ್ಯ ಕರ್ಮವಾಗಿಬಿಟ್ಟಿದೆ ಎಂದೂ ಅವರು ಹೇಳಿದ್ದಾಗಿ thewire.in ವರದಿ ಮಾಡಿದೆ.
ಗುರಿಗಳನ್ನು ಸಾಧಿಸುವ ಗೀಳು ಹೊಂದಿರುವ ಆಡಳಿತ ವರ್ಗಗಳು ತಾವು ಗ್ರಾಹರನ್ನು ವಂಚಿಸುವಂತೆ ಮಾಡುತ್ತಿವೆ ಎಂದು ಬ್ಯಾಂಕ್ ಉದ್ಯೋಗಿಗಳು ಸುದೀರ್ಘ ಸಮಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದಾರೆ.
ಹೀಗೆ ವಂಚನೆಗೊಳಗಾದ ನೂರಾರು ಗ್ರಾಹಕರೂ ತಮ್ಮ ದೂರುಗಳನ್ನು ಟ್ವಿಟರ್, ದೂರು ವೇದಿಕೆಗಳು, ಯುಟ್ಯೂಬ್ ಮತ್ತು ಹಲವಾರು ವೆಬ್ಸೈಟ್ ಗಳಲ್ಲಿ ಪೋಸ್ಟ್ ಮಾಡಿದ್ದಾರೆ. ವಾಸ್ತವದಲ್ಲಿ ಯೋಜನೆಗಳು ಆರಂಭಗೊಂಡ ಕೆಲವೇ ವಾರಗಳಲ್ಲಿ ನೇರ ನೋಂದಣಿಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿಗಳಲ್ಲಿ ಅಲ್ಲಲ್ಲಿ ದೂರುಗಳು ಕಾಣಿಸಿಕೊಳ್ಳಲು ಆರಂಭಿಸಿದ್ದವು.
ಒಂದು ವರ್ಷದ ಬಳಿಕ 'ದಿ ಟ್ರಿಬ್ಯೂನ್' ವೃತ್ತಪತ್ರಿಕೆಯ ಜಮ್ಮು ಆವೃತ್ತಿಯಲ್ಲಿನ ವರದಿಯೊಂದು ಗ್ರಾಹಕರನ್ನು ಯೋಜನೆಗಳಿಗೆ ಸೇರಿಸಿಕೊಳ್ಳುವಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಬಯಲುಗೊಳಿಸಿತ್ತು. ಈ ವಂಚನೆಯನ್ನು ಹೇಗೆ ನಡೆಸಲಾಗುತ್ತಿದೆ ಎನ್ನುವುದರ ಒಳನೋಟವನ್ನು ಒಂಭತ್ತು ಸರಕಾರಿ ಬ್ಯಾಂಕುಗಳ 20 ಉದ್ಯೋಗಿಗಳು ಮತ್ತು ಕಿಯೋಸ್ಕ್ ಆಪರೇಟರ್ಗಳು ಟಿಆರ್ಸಿಗೆ ನೀಡಿದ್ದಾರೆ. ಅವರಲ್ಲಿ ಅರ್ಧದಷ್ಟು ಜನರು ತಾವೇ ಸ್ವತಃ ಅನಿವಾರ್ಯವಾಗಿ ಗ್ರಾಹಕರನ್ನು ವಂಚಿಸಿದ್ದನ್ನು ಒಪ್ಪಿಕೊಂಡಿದ್ದರೆ, ಗ್ರಾಹಕರನ್ನು ವಂಚಿಸುವುದು ತಮ್ಮ ನಿತ್ಯದ ಕೆಲಸದ ಭಾಗವಾಗಿದೆ ಎಂದು ಕೆಲವರು ಹೇಳಿದ್ದಾರೆ.
ಬ್ಯಾಂಕ್ ಗಳು ಬ್ಯಾಕ್ ಆಫೀಸ್ ನಲ್ಲಿ ಬಟನ್ ಕ್ಲಿಕ್ ಮಾಡುವ ಮೂಲಕ ಗ್ರಾಹಕರ ಖಾತೆಗಳಲ್ಲಿ ಯೋಜನೆಗಳನ್ನು ಸಾಮೂಹಿಕವಾಗಿ ಸಕ್ರಿಯಗೊಳಿಸುತ್ತವೆ. ವಲಯ ಕಚೇರಿ ಮತ್ತು ಪ್ರಾದೇಶಿಕ ಕಚೇರಿಯಂತಹ ಮೇಲಿನ ಕಚೇರಿಗಳಿಂದ ಅರ್ಹ ಖಾತೆಗಳ ಪಟ್ಟಿ ಮತ್ತು ದಾಖಲಾತಿ ಗುರಿಯನ್ನು ಶಾಖಾ ವ್ಯವಸ್ಥಾಪಕರು ಸ್ವೀಕರಿಸಿದ ಬಳಿಕ ಈ ಕೆಲಸ ನಡೆಯುತ್ತದೆ.
ವಿಶೇಷ ಅಭಿಯಾನಗಳ ಸಂದರ್ಭದಲ್ಲಿ ಗ್ರಾಹಕರ ಖಾತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಜನೆಗಳನ್ನು ತಾವು ಸಕ್ರಿಯಗೊಳಿಸಿದ್ದಾಗಿ ಕೆನರಾ ಬ್ಯಾಂಕಿನ ಇಬ್ಬರು ಅಧಿಕಾರಿಗಳು ಟಿಆರ್ಸಿಗೆ ತಿಳಿಸಿದ್ದಾರೆ.
ಕೆನರಾ ಬ್ಯಾಂಕಿನ ಉದ್ಯೋಗಿಯೋರ್ವರು ಮೇಲಿನ ಕಚೇರಿಗಳಿಂದ ಬಂದಿದ್ದ ಇಂತಹ ಇಮೇಲ್ಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೊಂದು ಸರಕಾರಿ ಬ್ಯಾಂಕಿನ ಉದ್ಯೋಗಿ ಈ ವರ್ಷದ ಆರಂಭದಲ್ಲಿ ಪ್ರಾದೇಶಿಕ ಕಚೇರಿಯಿಂದ ಬಂದಿದ್ದ ಇಮೇಲ್ ಗಳ ಜೊತೆಗೆ ಅವುಗಳೊಂದಿಗೆ ಲಗತ್ತಿಸಲಾಗಿದ್ದ ಎರಡು ಬಲ್ಕ್ ಅಪ್ಲೋಡ್ ಫೈಲ್ಗಳನ್ನು ಈ ವರದಿಗಾರನೊಂದಿಗೆ ಹಂಚಿಕೊಂಡಿದ್ದಾರೆ. ಬಲ್ಕ್ ಅಪ್ಲೋಡ್ ಎನ್ನುವುದು ಕಾರ್ಪೊರೇಟ್ ಗ್ರಾಹಕರ ವೇತನ ಖಾತೆಗಳಲ್ಲಿ ವೇತನವನ್ನು ಕಳುಹಿಸಲು ಬ್ಯಾಂಕುಗಳು ಬಳಸುವ ತಂತ್ರಜ್ಞಾನವಾಗಿದೆ. ಗ್ರಾಹಕರ ಅನುಮತಿಯಿಲ್ಲದೆ ಅವರ ಖಾತೆಗಳಲ್ಲಿ ಜೀವವಿಮೆ ಮತ್ತು ಅಪಘಾತ ವಿಮೆ ಯೋಜನೆಗಳನ್ನು ಸಕ್ರಿಯಗೊಳಿಸಲು ಈ ಫೈಲ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಈ ಉದ್ಯೋಗಿ ತಿಳಿಸಿದರು. ತಮ್ಮ ಬ್ಯಾಂಕುಗಳಲ್ಲಿಯೂ ಇದೇ ಪರಿಪಾಠವಿದೆ ಎಂದು ವಿವಿಧ ಬ್ಯಾಂಕುಗಳ ಉದ್ಯೋಗಿಗಳು ತಿಳಿಸಿದ್ದಾರೆ.
ಬಲ್ಕ್ ಅಪ್ಲೋಡ್ ಫೈಲ್ಗಳನ್ನು ಸ್ವೀಕರಿಸಿದ್ದ ಬ್ಯಾಂಕ್ ಉದ್ಯೋಗಿ, ತಾನು ಅವುಗಳನ್ನು ಸಂಸ್ಕರಿಸಲು ನಿರಾಕರಿಸಿದಾಗ ತನ್ನನ್ನು ದೂರದ ಶಾಖೆಗೆ ನಿಯೋಜಿಸಲಾಗಿತ್ತು ಎಂದು ತಿಳಿಸಿದರು.
ಇಂತಹ ಹಲವಾರು ನಿದರ್ಶನಗಳು ತಮ್ಮ ತನಿಖೆಯಲ್ಲಿ ಕಂಡು ಬಂದಿವೆ ಎಂದು ಸುದ್ದಿಸಂಸ್ಥೆ thewire.in ವರದಿ ಮಾಡಿದೆ.
ಬಲ್ಕ್ ಅಪಲೋಡ್ ಫೈಲ್ಗಳ ಕೇವಲ ಉಪಸ್ಥಿತಿ ತಪ್ಪೇನೂ ಅಲ್ಲ, ಗ್ರಾಹಕರ ಅನುಮತಿಯಿಲ್ಲದೆ ಬಲ್ಕ್ ಅಪ್ಲೋಡ್ ನ ಅರೋಪವನ್ನು ಸಾಬೀತುಗೊಳಿಸಲು ಆಳವಾದ ಫೊರೆನ್ಸಿಕ್ ಆಡಿಟ್ ನ ಅಗತ್ಯವಿದೆ ಎಂದು ಫೊರೆನ್ಸಿಕ್ ಲೆಕ್ಕ ಪರಿಶೋಧಕ ಮತ್ತು ಪ್ರಮಾಣೀಕೃತ ವಂಚನೆ ಪರೀಕ್ಷಕ ನಿಖಿಲ್ ಪಾರುಲ್ಕರ್ ತಿಳಿಸಿದ್ದಾರೆ. ಆರೋಪಗಳು ನಿಜವಾಗಿದ್ದರೆ ಇದು ವ್ಯವಹಾರ ಅಭಿವೃದ್ಧಿಗಾಗಿ ಸಂಖ್ಯೆಯನ್ನು ಹೆಚ್ಚಿಸಲು ಮೋಸದ ಉದ್ದೇಶದಿಂದ ತಪ್ಪು ಮಾರಾಟವಾಗುತ್ತದೆ ಎಂದರು. ಈ ಯೋಜನೆಗಳಿಗೆ ಗ್ರಾಹಕರನ್ನು ಸೇರಿಸಿಕೊಳ್ಳಲು ಬ್ಯಾಂಕುಗಳು ಅನುಸರಿಸುತ್ತಿರುವ ಇನ್ನೊಂದು ವಿಧಾನವೆಂದರೆ ಖಾತೆಯನ್ನು ಆರಂಭಿಸುವಾಗ ನಿಗದಿತ ಫಾರ್ಮ್ಗಳ ಜೊತೆ ವಿಮೆ ಯೋಜನೆಗಳ ಫಾರ್ಮ್ಗಳನ್ನು ಸೇರಿಸಿ, ಗ್ರಾಹಕರು ಯಾವುದನ್ನೂ ಪರಿಶೀಲಿಸದೆ ಎಲ್ಲ ಫಾರ್ಮ್ ಗಳಿಗೆ ಸಹಿ ಹಾಕುವಂತೆ ಮಾಡುವುದು. ಈ ಫಾರ್ಮ್ ಗಳನ್ನು ಯಾರಾದರೂ ಗುರುತಿಸಿದರೆ ಅವು ಖಾತೆಯನ್ನು ತೆರೆಯಲು ಕಡ್ಡಾಯವೆಂದು ಹೇಳಿ ಅಧಿಕಾರಿಗಳು ಅವರನ್ನು ಮಂಗ ಮಾಡುತ್ತಾರೆ. ಅಲ್ಲದೆ ಅನೇಕ ಬ್ಯಾಂಕ್ ಶಾಖೆಗಳು ಬ್ಯಾಕ್ಎಂಡ್ನಿಂದ ಹೊಸ ಖಾತೆಗಳಿಗೆ ಪಾಲಿಸಿಗಳನ್ನು ಸಕ್ರಿಯಗೊಳಿಸುತ್ತವೆ.
ಬ್ಯಾಂಕ್ ಉದ್ಯೋಗಿಗಳ ಕೆಲವು ಫೇಸ್ಬುಕ್ ಗುಂಪುಗಳಲ್ಲಿ (ಒಂದು ಗುಂಪು 1.74 ಲ.ಫಾಲೋವರ್ಗಳನ್ನು ಹೊಂದಿದೆ) ಇಂತಹ ಕುತಂತ್ರಗಳ ಬಗ್ಗೆ ಮೀಮ್ ಗಳು ಮತ್ತು ಕಮೆಂಟ್ ಥ್ರೆಡ್ಗಳನ್ನು ಕಾಣಬಹುದು. ಮೀಮ್ಗಳು ಮತ್ತು ಅವುಗಳ ಕುರಿತ ಚರ್ಚೆಗಳು ಬ್ಯಾಂಕ್ ಉದ್ಯೋಗಿಗಳು ಮತ್ತು ಗ್ರಾಹಕರ ದೂರುಗಳನ್ನು ಪ್ರತಿಧ್ವನಿಸುತ್ತಿವೆ.
ಕೆವೈಸಿಗೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಸಲ್ಲಿಸಿಲ್ಲವೆಂಬ ನೆಪದಲ್ಲಿ ಬ್ಯಾಂಕುಗಳು ಗ್ರಾಹಕರ ಖಾತೆಗಳನ್ನೂ ಸ್ತಂಭನಗೊಳಿಸುತ್ತವೆ. ಶಾಖೆಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಕೆವೈಸಿ ನಿಯಮಗಳಡಿ ಜೀವವಿಮೆ,ಅಪಘಾತ ವಿಮೆ ಮತ್ತು ಪಿಂಚಣಿ ಫಾರ್ಮ್ಗಳನ್ನು ತುಂಬುವುದು ಕಡ್ಡಾಯವಾಗಿದೆ ಎಂದು ಸುಳ್ಳು ಹೇಳಲಾಗುತ್ತದೆ.
ಬ್ಯಾಂಕುಗಳಿಂದ ಸಾಲ ಪಡೆಯುವ ಗ್ರಾಹಕರಿಗೆ ವಿಮೆ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯ ಎಂದು ಹೇಳಲಾಗುತ್ತದೆ. ಬೀದಿ ಬದಿ ಮಾರಾಟಗಾರರು,ಸ್ವಸಹಾಯ ಗುಂಪುಗಳು,ಕಿರು ಉದ್ಯಮಿಗಳು ಇತ್ಯಾದಿ ಇತರ ಸರಕಾರಿ ಯೋಜನೆಗಳ ಫಲಾನುಭವಿಗಳಿಗೂ ಇದೇ ಸುಳ್ಳನ್ನು ಹೇಳಲಾಗುತ್ತಿದೆ. ಕೆಲವು ಶಾಖಾ ಮ್ಯಾನೇಜರ್ಗಳು ಗ್ರಾಹಕರು ವಿಮೆ ಯೋಜನೆಯನ್ನು ಸಕ್ರಿಯಗೊಳಿಸಲು ಅವರು ತಮ್ಮ ಬ್ಯಾಂಕುಗಳಿಗೆ ಎಸ್ಎಂಎಸ್ ಕಳುಹಿಸುವಂತೆ ಕುತಂತ್ರ ನಡೆಸುತ್ತಾರೆ.
ದುರ್ಗಮ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕ ಸೇವಾ ಕೇಂದ್ರ ಕಿಯೋಸ್ಕ್ಗಳ ಮೂಲಕ ಬ್ಯಾಂಕುಗಳು ಗ್ರಾಹಕರಿಗೆ ಸೇವೆಗಳನ್ನು ಒದಗಿಸುತ್ತಿವೆ. ತಮ್ಮ ಮೇಲ್ವಿಚಾರಕರ ಒತ್ತಡದಿಂದಾಗಿ ಇಂತಹ ಕಿಯೋಸ್ಕ್ಗಳ ಆಪರೇಟರ್ಗಳು ಆಧಾರ್ ಜೋಡಣೆ ಹೊಂದಿದ ಬಯೊಮೆಟ್ರಿಕ್ ಸಾಧನದಲ್ಲಿ ಮುಗ್ಧ ಗ್ರಾಹಕರ ಬೆರಳಚ್ಚುಗಳನ್ನು ಪರಿಶೀಲಿಸುವ ನಾಟಕವಾಡಿ ಅವರಿಗೆ ಗೊತ್ತಿಲ್ಲದೆ ವಿಮೆ ಪಾಲಿಸಿಗಳನ್ನು ಮಾರಾಟ ಮಾಡುತ್ತಾರೆ.
ಗ್ರಾಹಕರಿಂದ ಪ್ರಶ್ನೆಗಳು ಎದುರಾದರೆ ಹಲವು ಬ್ರಾಂಚ್ ಮ್ಯಾನೇಜರ್ಗಳು,ಬ್ಯಾಂಕ್ ಉದ್ಯೋಗಿಗಳು ಮತ್ತು ಕಿಯೋಸ್ಕ್ ಆಪರೇಟರ್ಗಳು ಅವರು ಈ ಯೋಜನೆಗಳಿಗೆ ಸಹಿ ಹಾಕುವವರೆಗೆ ಅವರಿಗೆ ಸೇವೆಗಳನ್ನು ಒದಗಿಸುವುದಿಲ್ಲ.
ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವ ಹಲವು ಗ್ರಾಹಕರು ತಮ್ಮ ಅನುಮತಿಯಿಲ್ಲದೆ ಎಲ್ಲ ಖಾತೆಗಳಲ್ಲಿಯೂ ಈ ಯೋಜನೆಗಳಿಗೆ ಸೇರಿಸಲ್ಪಡುತ್ತಿದ್ದಾರೆ ಮತ್ತು ಎಲ್ಲ ಬ್ಯಾಂಕುಗಳೂ ಅವರಿಗೆ ಶುಲ್ಕಗಳನ್ನು ವಿಧಿಸುತ್ತಿವೆ. ಹೆಚ್ಚಿನ ಪ್ರಕರಣಗಳಲ್ಲಿ ವಿಮೆ ಮಾಡಿಸಲಾದ ವ್ಯಕ್ತಿಗಳ ಕುಟುಂಬಗಳಿಗೆ ಈ ಪಾಲಿಸಿಗಳ ಬಗ್ಗೆ ಗೊತ್ತೇ ಇರುವುದಿಲ್ಲ.
ಹೆಚ್ಚಿನ ಬ್ಯಾಂಕ್ ಸಿಬ್ಬಂದಿಗಳು ವಿಮೆ ಫಾರ್ಮ್ಗಳಲ್ಲಿ ನಾಮಿನಿಯ ವಿವರಗಳನ್ನು ತುಂಬುವುದೇ ಇಲ್ಲ ಅಥವಾ ‘ಅನ್ವಯಿಸುವುದಿಲ್ಲ ’ಎಂದು ಬರೆದುಬಿಡುತ್ತಾರೆ ಎಂದು ಖುದ್ದು ಗ್ರಾಹಕರನ್ನು ಈ ಯೋಜನೆಗಳಿಗೆ ಸೇರಿಸಿರುವ ಮಹಿಳಾ ಉದ್ಯೋಗಿಯೋರ್ವರು ತಿಳಿಸಿದರು.
ಸುಮಾರು 2.73 ಲಕ್ಷ ಜೀವವಿಮೆ ಮತ್ತು ಅಪಘಾತ ವಿಮೆ ಪಾಲಿಸಿಗಳಲ್ಲಿ ನಾಮಿನಿಗಳ ಹೆಸರುಗಳಿಲ್ಲ ಎಂದು ಬ್ಯಾಂಕ್ ಆಫ್ ಇಂಡಿಯಾ ಆರ್ಟಿಐ ಉತ್ತರವೊಂದರಲ್ಲಿ ತಿಳಿಸಿದೆ. 9,871 ಅಪಘಾತ ವಿಮೆ ಪಾಲಿಸಿಗಳಲ್ಲಿ ನಾಮಿನಿಯ ವಿವರಗಳಿರುವ ಸ್ಥಳದಲ್ಲಿ 'ಅನ್ವಯಿಸುವುದಿಲ್ಲ(ಎನ್ಎ)' ಎಂದು ಬರೆಯಲಾಗಿದೆ ಎಂದೂ ಅದು ತಿಳಿಸಿದೆ. ಅಲ್ಲದೆ 54.4 ಲ.ಜೀವವಿಮೆ ಪಾಲಿಸಿಗಳು ಮತ್ತು 1.4 ಕೋ.ಅಪಘಾತ ವಿಮೆ ಪಾಲಿಸಿಗಳಲ್ಲಿ ನಾಮಿನಿಯ ವಯಸ್ಸನ್ನು ಉಲ್ಲೇಖಿಸಿಲ್ಲ ಎಂದೂ ಆರ್ಟಿಐ ಉತ್ತರವು ಬಹಿರಂಗಗೊಳಿಸಿದೆ. ಇತರ ಬ್ಯಾಂಕುಗಳು ಈ ಬಗ್ಗೆ ಮಾಹಿತಿಗಳನ್ನು ನೀಡಲು ನಿರಾಕರಿಸಿವೆ.
ಐಆರ್ಡಿಎಐ ನಿಯಮದಂತೆ ವಿಮೆ ಪಾಲಿಸಿಯಲ್ಲಿ ನಾಮಿನಿಯ ಹೆಸರು, ವಯಸ್ಸು ಮತ್ತು ಪಾಲಿಸಿದಾರನೊಂದಿಗೆ ಸಂಬಂಧವನ್ನು ಉಲ್ಲೇಖಿಸವುದು ಕಡ್ಡಾಯವಾಗಿದೆ. ವಿಮೆ ಪಾಲಿಸಿಯಲ್ಲಿ ನಾಮಿನಿಯ ಹೆಸರು ಇಲ್ಲದಿದ್ದಾಗ ಮತ್ತು ಪಾಲಿಸಿದಾರ ಮರಣಿಸಿದಾಗ ವಿಮೆ ಹಣವನ್ನು ಪಡೆಯಲು ವಾರಸುದಾರರು ಪರದಾಡಬೇಕಾಗುತ್ತದೆ,ಕೋರ್ಟ್ ಮೆಟ್ಟಿಲನ್ನೂ ಹತ್ತಬೇಕಾಗುತ್ತದೆ.
ಹಲವು ಬ್ಯಾಂಕ್ ಶಾಖೆಗಳಲ್ಲಿ ತಮ್ಮನ್ನು ಈ ವಿಮಾ ಯೋಜನೆಗಳಿಂದ ತೆಗೆಯುವಂತೆ ಕೋರಿಕೊಂಡ ಗ್ರಾಹಕರಿಗೆ ಅದು ಸಾಧ್ಯವಿಲ್ಲ, ಏಕೆಂದರೆ ಕೇಂದ್ರ/ಆರ್ಬಿಐ/ಮೋದಿ ಆದೇಶದಂತೆ ಇವು ಕಡ್ಡಾಯವಾಗಿವೆ ಎಂದು ಸುಳ್ಳು ಹೇಳಲಾಗುತ್ತದೆ. ಯೋಜನೆಗಳಿಂದ ಹೆಸರನ್ನು ತೆಗೆಯಲಾಗಿದೆ ಅಥವಾ ತೆಗೆಯಲಾಗುತ್ತದೆ ಎದು ಹಲವು ಬ್ಯಾಂಕುಗಳು ಗ್ರಾಹಕರಿಗೆ ಭರವಸೆ ನೀಡಿದರೂ ಮುಂದಿನ ನವೀಕರಣ ಸಂದರ್ಭದಲ್ಲಿ ಮತ್ತೆ ಅವರಿಗೆ ಶುಲ್ಕಗಳನ್ನು ವಿಧಿಸುತ್ತಿವೆ.
ಕೃಪೆ: thewire.in