'ಗಡಿ ವಿವಾದ' ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಹಕ್ಕು ಸಾಧಿಸುವಂತಿಲ್ಲ: ಅಮಿತ್ ಶಾ
ಕರ್ನಾಟಕ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ
ಬೆಂಗಳೂರು, ಡಿ.14: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಆದೇಶ ಬರುವವರೆಗೆ ಯಾವುದೆ ರಾಜ್ಯ ಮತ್ತೊಂದು ರಾಜ್ಯದ ಭೂ ಭಾಗದ ಮೇಲೆ ಹಕ್ಕು, ಬೇಡಿಕೆ ಸಾಧಿಸುವಂತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರಕಾರಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಗಡಿ ವಿವಾದದಂತಹ ಸಮಸ್ಯೆಗಳನ್ನು ರಸ್ತೆಗಳಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಸಂವಿಧಾನಬದ್ಧ ಮಾರ್ಗದಲ್ಲೆ ಆಗಬೇಕು ಎಂದರು.
ಸಚಿವರ ಸಮಿತಿ ರಚನೆ: ಎರಡು ರಾಜ್ಯಗಳ ತಲಾ ಮೂವರು ಸಚಿವರು ಗಡಿ ವಿವಾದಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಚರ್ಚೆ ನಡೆಸಲಿದ್ದಾರೆ. ಇದಲ್ಲದೆ, ಉಭಯ ರಾಜ್ಯಗಳ ನಡುವೆ ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ ಅವುಗಳನ್ನು ಈ ಸಚಿವರ ತಂಡವೆ ಪರಿಹರಿಸಲಿದೆ ಎಂದು ಅಮಿತ್ ಶಾ ಹೇಳಿದರು.
ಎರಡು ರಾಜ್ಯಗಳಲ್ಲಿ ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಅನ್ಯ ಭಾಷಿಕರು, ಯಾತ್ರಿಗಳು, ವ್ಯಾಪಾರಿಗಳಿಗೆ ಯಾವುದೆ ರೀತಿಯ ಸಮಸ್ಯೆ ಆಗದಂತೆ ಗಮನಹರಿಸಲು, ಹಿರಿಯ ಐಪಿಎಸ್ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಎರಡು ರಾಜ್ಯಗಳು ನಿರ್ಧರಿಸಿವೆ ಎಂದು ಅವರು ತಿಳಿಸಿದರು.
ನಕಲಿ ಟ್ವೀಟರ್ ಖಾತೆಗಳಲ್ಲಿ ಹಿರಿಯ ನಾಯಕರ ಹೆಸರಿನಲ್ಲಿ ಸಂದೇಶಗಳನ್ನು ಹಾಕಿ ಹಂಚಿದ ಪರಿಣಾಮದಿಂದಲೂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ರಾಜ್ಯಗಳ ಜನತೆಯ ಭಾವನೆಗಳು ಕೆರಳಿವೆ. ಎಲ್ಲೆಲ್ಲಿ ಇಂತಹ ಪ್ರಕರಣಗಳು ಕಂಡು ಬಂದಿದೆಯೋ, ಅಲ್ಲಿ ಎಫ್ಐಆರ್ ದಾಖಲು ಮಾಡಿ, ಯಾರು ಇಂತಹ ನಕಲಿ ಸಂದೇಶಗಳನ್ನು ಹಂಚಿದ್ದಾರೆ ಎಂಬುದು ಜನತೆಯ ಮುಂದೆ ಬಯಲು ಮಾಡಬೇಕು ಎಂದು ಅವರು ಹೇಳಿದರು.
ಇದರ ಜೊತೆಗೆ, ಎರಡು ರಾಜ್ಯಗಳಲ್ಲಿರುವ ವಿರೋಧ ಪಕ್ಷದ ನಾಯಕರಿಗೂ ಮನವಿ ಮಾಡುತ್ತೇನೆ. ಎರಡು ರಾಜ್ಯಗಳ ಜನತೆಯ, ವಿಶೇಷವಾಗಿ ಗಡಿ ಭಾಗದಲ್ಲಿರುವ ಜನರ ಹಿತರಕ್ಷಣೆಯ ದೃಷ್ಟಿಯಿಂದ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಸುಪ್ರೀಂಕೋರ್ಟ್ನ ತೀರ್ಮಾನ ಬರುವವರೆಗೆ ಕಾಯಬೇಕು ಎಂದು ಅಮಿತ್ ಶಾ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತರಿದ್ದರು.