ದಾರಿ ತಪ್ಪಿಸುವ ಪತಂಜಲಿ ಜಾಹೀರಾತು ಪ್ರಕಟಿಸಿದ್ದ ಎರಡು ಮಾಧ್ಯಮ ಸಂಸ್ಥೆಗಳಿಗೆ ಪಿಸಿಐ ನೋಟಿಸ್
![ದಾರಿ ತಪ್ಪಿಸುವ ಪತಂಜಲಿ ಜಾಹೀರಾತು ಪ್ರಕಟಿಸಿದ್ದ ಎರಡು ಮಾಧ್ಯಮ ಸಂಸ್ಥೆಗಳಿಗೆ ಪಿಸಿಐ ನೋಟಿಸ್ ದಾರಿ ತಪ್ಪಿಸುವ ಪತಂಜಲಿ ಜಾಹೀರಾತು ಪ್ರಕಟಿಸಿದ್ದ ಎರಡು ಮಾಧ್ಯಮ ಸಂಸ್ಥೆಗಳಿಗೆ ಪಿಸಿಐ ನೋಟಿಸ್](https://www.varthabharati.in/sites/default/files/images/articles/2022/12/14/360164-1671037172.jpeg)
ಹೊಸದಿಲ್ಲಿ,ಡಿ.14: ಮಧುಮೇಹ,ರಕ್ತದೊತ್ತಡ ಮತ್ತು ಇತರ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹೇಳಿಕೊಂಡು ಬಾಬಾ ರಾಮದೇವ್(Baba Ramdev) ಅವರ ಪತಂಜಲಿ ಗ್ರೂಪ್ (Patanjali Group) ಬಿಡುಗಡೆಗೊಳಿಸಿದ್ದ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಎರಡು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಿಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (PCI) ಶೋಕಾಸ್ ನೋಟಿಸ್ಗಳನ್ನು ಜಾರಿಗೊಳಿಸಿದೆ.
ಕೇರಳದ ಆರ್ಟಿಐ ಕಾರ್ಯಕರ್ತ ಹಾಗೂ ನೇತ್ರತಜ್ಞ ಡಾ.ಕೆ.ವಿ.ಬಾಬು(Dr. KV Babu) ಅವರು ಸಲ್ಲಿಸಿದ್ದ ದೂರುಗಳ ಮೇರೆಗೆ ಪಿಸಿಐ ಈ ನೋಟಿಸ್ಗಳನ್ನು ಹೊರಡಿಸಿದೆ. ಒಂದು ರಾಷ್ಟ್ರಮಟ್ಟದ ಮಾಧ್ಯಮ ಸಂಸ್ಥೆಯಾಗಿದ್ದರೆ ಇನ್ನೊಂದು ಪ್ರಾದೇಶಿಕ ಮಾಧ್ಯಮ ಸಂಸ್ಥೆಯಾಗಿದೆ. ಜಾಹೀರಾತುಗಳು ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮೆಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು ಡಾ.ಬಾಬು ಆರೋಪಿಸಿದ್ದರು.
ಪತಂಜಲಿ ಗ್ರೂಪ್ನ ಮಾರಾಟ ಘಟಕ ದಿವ್ಯಾ ಫಾರ್ಮಸಿ ಈ ಜಾಹೀರಾತುಗಳನ್ನು ಬಿಡುಗಡೆಗೊಳಿಸಿತ್ತು. ಪಿಸಿಐ ಕ್ರಮ ಕೈಗೊಳ್ಳುವ ಮೊದಲೇ ಉತ್ತರಾಖಂಡ ರಾಜ್ಯ ಔಷಧಿ ನಿಯಂತ್ರಕರು ಮತ್ತು ಕೇಂದ್ರ ಸರಕಾರದ ಅಧಿಕಾರಿಗಳು ಕಾಯ್ದೆಯ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ್ದರು.
ಜಾಹೀರಾತುಗಳನ್ನು ಪ್ರಕಟಿಸಿದ್ದು 2020ರ ಪತ್ರಿಕೋದ್ಯಮ ನಡವಳಿಕೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ರೋಗಿಗಳ ಮತ್ತು ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಪಿಸಿಐ ಎರಡು ದೈನಿಕಗಳ ಸಂಪಾದಕರಿಗೆ ನೋಟಿಸ್ ಜಾರಿಗೊಳಿಸಿದ್ದನ್ನು ತಾನು ಸ್ವಾಗತಿಸುತ್ತೇನೆ ಎಂದು ಡಾ.ಬಾಬು ಸುದ್ದಿಸಂಸ್ಥೆಗೆ ತಿಳಿಸಿದರು.
ನೋಟಿಸ್ಗೆ ಉತ್ತರಿಸಲು ಮಾಧ್ಯಮ ಸಂಸ್ಥೆಗಳಿಗೆ ಎರಡು ವಾರಗಳ ಗಡುವು ನೀಡಲಾಗಿದೆ. ದಿವ್ಯಾ ಲಿಪಿಡಮ್,ದಿವ್ಯಾ ಲಿವೊಗ್ರಿಟ್, ದಿವ್ಯಾ ಲಿವಾಮೃತ ಅಡ್ವಾನ್ಸ್,ದಿವ್ಯಾ ಮಧುನಾಶಿನಿ ವಟಿ ಮತ್ತು ದಿವ್ಯಾ ಮಧುನಾಶಿನಿ ಮಾತ್ರೆಗಳು ಹೃದ್ರೋಗಗಳು ಮತ್ತು ಇತರ ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ದಿವ್ಯಾ ಫಾರ್ಮಸಿ ಜಾಹೀರಾತುಗಳಲ್ಲಿ ಹೇಳಿಕೊಂಡಿತ್ತು.