ಅದಾನಿ ಫೌಂಡೇಶನ್ನಿಂದ ಫಾರ್ಚೂನ್ ಸುಪೋಶನ್ ಯೋಜನೆಗೆ ಚಾಲನೆ

ಮಂಗಳೂರು : ಅದಾನಿ ಫೌಂಡೇಶನ್ ಫಾರ್ಚೂನ್ ಸುಪೋಶನ್ ಯೋಜನೆಯ ಮೂಲಕ ಮಕ್ಕಳ ಅಪೌಷ್ಠಿಕತೆ ಯನ್ನು ಹೋಗಲಾಡಿಸಲು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಉತ್ತಮ ಕಾರ್ಯ ಹಮ್ಮಿಕೊಂಡಿದೆ ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದರು.
ಅದಾನಿ ಫೌಂಡೇಶನ್ನಿಂದ ಫಾರ್ಚೂನ್ ಸುಪೋಶನ್ ಯೋಜನೆಗೆ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಐದು ವರ್ಷದೊಳಗಿನ ಮಕ್ಕಳು ಮಾತ್ರವಲ್ಲದೆ ಹದಿ ಹರೆಯದ ಬಾಲಕಿಯರು ಹಾಗೂ ಗರ್ಭಿಣಿ ಮಹಿಳೆಯರ ಪೌಷ್ಠಿಕಾಂಶದ ಸಮಸ್ಯೆಯನ್ನು ಸುಧಾರಿಸಲು ಈ ಯೋಜನೆಯ ಮೂಲಕ ಸಾಧ್ಯವಾಗಲಿದೆ. ಸರಕಾರದ ಯೋಜನೆಗಳ ಜತೆ ಖಾಸಗಿ ಸಂಸ್ಥೆಗಳು ತಮ್ಮ ಹೊಣೆಗಾರಿಕೆ ಅರಿತು ಇಂತಹ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅವಶ್ಯ ಎಂದರು.
ಅದಾನಿ ಫೌಂಡೇಶನ್ನ ಪ್ರಾಜೆಕ್ಟ್ ಮ್ಯಾನೇಜರ್ ವಿವೇಕ್ ಯಾದವ್ ಮಾತನಾಡಿ, ಪ್ರಸ್ತುತ ಪ್ರಾಜೆಕ್ಟ್ ಫಾರ್ಚೂನ್ ಸುಪೋಶನ್ ಭಾರತದ 12 ರಾಜ್ಯಗಳ 1200 ಕ್ಕೂ ಹೆಚ್ಚು ಹಳ್ಳಿಗಳು, ಸ್ಲಮ್ಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯ ವಿಸ್ತರಣೆಯ ಭಾಗವಾಗಿ ನಾಲ್ಕು ವರ್ಷಗಳ ಅವಧಿಗೆ ಮಂಗಳೂರು ನಗರ ಬ್ಲಾಕ್ನಲ್ಲಿ ಪ್ರಾರಂಭಿಸಿದ್ದೇವೆ ಎಂದರು.
ಅತಿಥಿಗಳಾಗಿ ದ.ಕ.ಜಿಪಂ ಸಿಇಒ ಡಾ.ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪಬೋವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಗ್ರಾಮಾಂತರ ಸಿಡಿಪಿಒ ಶೈಲಾ ಕಾರಗಿ ಭಾಗವಹಿಸಿದ್ದರು.
ಯುನಿಟ್ ಹೆಡ್ ಮನೋಜ್ ಶ್ರೀವಾಸ್ತವ, ಪ್ಲಾೃಂಟ್ ಎಚ್ಆರ್ ಆ್ಯಂಡ್ ಎಡ್ಮಿನ್ ಶಾಂತ ಕುಮಾರ್ ಟಿ.ಎಂ. ಉಪಸ್ಥಿತರಿದ್ದರು. ಪ್ರೇಮಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.