ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಮರದಿಂದ ಬಿದ್ದು ಖೈದಿ ಮೃತ್ಯು
ಕಲಬುರಗಿ, ಡಿ.15: ಮರದಿಂದ ಕೆಳಗೆ ಬಿದ್ದು ಖೈದಿ ಮೃತಪಟ್ಟಿರುವ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಗುರುವಾರ ವರದಿಯಾಗಿದೆ.
ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದ ನಿವಾಸಿ ಸಂಗಮೇಶ್ ಕುಂಬಾರ (25) ಮೃತ ಖೈದಿ ಎಂದು ತಿಳಿದು ಬಂದಿದೆ.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿ ಖೈದಿಗಳು ಕ್ರಿಕೆಟ್ ಆಡುತ್ತಿದ್ದರೆನ್ನಲಾಗಿದ್ದು, ಆಟವಾಡುತ್ತಿದ್ದ ಸಂದರ್ಭದಲ್ಲಿ ಚೆಂಡು ಮರದ ಮೇಲೆ ಬಿದ್ದಿದೆ. ಈ ವೇಳೆ ಖೈದಿ ಸಂಗಮೇಶ್ ಮರದ ಮೇಲಿದ್ದ ಬಾಲ್ ತರಲು ಹೋಗಿದ್ದಾಗ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ಖೈದಿ ಸಂಗಮೇಶ್ ಕಳೆದ 18 ತಿಂಗಳ ಹಿಂದೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ. ಘಟನೆ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story