ಭಟ್ಕಳದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ: ಆಕಳು ಸಾವು

ಭಟ್ಕಳ, ಡಿ.17: ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ಹೈನುಗಾರ ರೈತರಲ್ಲಿ ಆತಂಕ ಮೂಡಿಸಿದೆ.
ಕಳೆದ ಹತ್ತಾರು ದಿನಗಳಿಂದ ಈ ಭಾಗದ ರೋಗ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಗಣಪತಿ ಹೆಗ್ಡೆ ಎಂಬವರಿಗೆ ಸೇರಿದ ಸುಮಾರು 50 ಸಾವಿರ ರೂ. ಮೌಲ್ಯದ ಗಿರ್ ತಳಿಯ ಆಕಳೊಂದು ರೋಗಬಾಧೆಯಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ಜಾನುವಾರುಗಳಲ್ಲಿ ರೋಗ ಉಲ್ಬಣಗೊಳ್ಳುತ್ತಿದೆ. ಆದರೆ ಈ ಬಗ್ಗೆ ಸ್ಥಳೀಯ ಪಂಚಾಯತ್ ಆಗಲಿ ಪಶು ಅಧಿಕಾರಿಗಳಾಗಲಿ ರೋಗದ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೈನುಗಾರ ರೈತರಿಗೆ ಮಾಹಿತಿ ನೀಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.
"ತಾಲೂಕಿನಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಏರಿಕೆ ಕಾಣುತ್ತಿದ್ದು, ವ್ಯಾಕ್ಸಿನ್ ಕಾರ್ಯ ಭರದಿಂದ ಸಾಗಿದೆ. ತಾಲೂಕಿನಲ್ಲಿ ಈ ರೋಗಕ್ಕೆ ಸಾವನ್ನಪ್ಪಿದ ಮೊದಲ ಪ್ರಕರಣವಾಗಿದೆ. ಈಗಾಗಲೇ 11,000ಕ್ಕೂ ಅಧಿಕ ಜಾನುವಾರುಗಳಿಗೆ ವ್ಯಾಕ್ಸಿನ್ ನೀಡಲಾಗಿದೆ. ಸಿಬ್ಬಂದಿಯ ಕೊರತೆಯಿಂದ ವ್ಯಾಕ್ಸಿನ್ ಕಾರ್ಯ ಕುಂಠಿತಗೊಳ್ಳುತ್ತಿದೆ. ರೈತರು ರೋಗ ಕಂಡುಬಂದ ಜಾನುವಾರನ್ನು ಪ್ರತ್ಯೇಕವಿಟ್ಟು ಔಷಧೋಪಚಾರ ಮಾಡಿದ್ದಲ್ಲಿ ರೋಗ ಹತೋಟಿಗೆ ತರಬಹುದು. ಒಂದೊಮ್ಮೆ ರೋಗದಿಂದ ಜಾನುವಾರು ಸಾವನ್ನಪ್ಪದಲ್ಲಿ ಸ್ಥಳೀಯ ಪಶು ಇಲಾಖೆಗೆ ಮಾಹಿತಿ ನೀಡಿದರೆ ಸರಕಾರದಿಂದ ಸಿಗುವ ಪರಿಹಾರ ದೊರಕಿಸಿಕೊಡಲಾಗುವುದು."
-ಡಾ. ಶಿವಕುಮಾರ ಪಶು ವೈದ್ಯಾಧಿಕಾರಿ, ಭಟ್ಕಳ







