ಮೋದಿ ವಿರುದ್ಧ ಟೀಕೆಯಿಂದ ಪಾಕ್ ಸಚಿವ ಬಿಲಾವಲ್ ಕೀಳು ಮನೋಸ್ಥಿತಿ ಬಯಲು: ಯಡಿಯೂರಪ್ಪ

ಬೆಂಗಳೂರು, ಡಿ.17: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಮಾಡಿರುವ ಟೀಕೆ ಅವರ ಕೀಳು ಮನೋಸ್ಥಿತಿಯನ್ನು ಬಯಲು ಮಾಡಿದೆ. ಪಾಕಿಸ್ಥಾನದ ವಿದೇಶಾಂಗ ಸಚಿವರಾಗಿ ಅವರ ಹೇಳಿಕೆಯು ಪಾಕಿಸ್ಥಾನ ಸರ್ಕಾರದ ನೀಚ ಮನೋಸ್ಥಿತಿಯನ್ನು ಪ್ರತಿಬಿಂಬಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಇಡೀ ವಿಶ್ವದಲ್ಲಿಯೇ ಶಾಂತಿ ನೆಲೆಸುವಂತಾಗಲು ಭಾರತದ ಪ್ರಧಾನ ಮಂತ್ರಿಯವರು ನೇತೃತ್ವ ವಹಿಸಬೇಕೆಂದು ವಿಶ್ವದ ಎಲ್ಲಾ ಪ್ರಮುಖ ದೇಶಗಳು ಕೋರುತ್ತಿರುವ ಇಂತಹ ಸಂದರ್ಭದಲ್ಲಿ ಪಾಕಿಸ್ಥಾನದ ವಿದೇಶಾಂಗ ಸಚಿವರಿಂದ ಇಂತಹ ಹೇಳಿಕೆ ನಾಯಿಬಾಲ ಡೊಂಕು ಎಂಬಂತಹ ಪ್ರವೃತ್ತಿಯನ್ನು ಸಾಬೀತು ಪಡಿಸುತ್ತಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ವಿಶ್ವದ ಅತ್ಯುಗ್ರ ಒಸಾಮ ಬಿನ್ ಲಾಡೆನ್ ಎಲ್ಲಿ ಅಡಗಿ ಕುಳಿತಿದ್ದ, ಮತ್ತು ಅವನನ್ನು ಪೋಷಿಸುತ್ತಿದ್ದವರು ಯಾರು ಹಾಗೂ ವಿಶ್ವದ ಬಹುತೇಕ ಉಗ್ರ ಸಂಘಟನೆಗಳಿಗೆ ತವರು ನೆಲೆ ಪಾಕಿಸ್ಥಾನ ಎಂದು ಇಡೀ ಜಗತ್ತಿಗೆ ತಿಳಿದಿರುವಾಗ ನರೆಂದ್ರ ಮೋದಿಯಂತಹ ವಿಶ್ವ ನಾಯಕರ ಬಗ್ಗೆ ಟೀಕೆ ಮಾಡಿದರೆ ಜಗತ್ತಿನ ಕಣ್ಣಿನಲ್ಲಿ ತಾನು ದೊಡ್ಡ ವ್ಯಕ್ತಿಯಾಗುತ್ತೇನೆಂದು ಭಾವಿಸಿರುವಂತೆ ಕಾಣುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
2018ರ ಫೆಬ್ರವರಿ 18ರಂದು ಅಮೆರಿಕದ ವಾಷಿಂಗ್ಟನ್ ನಲ್ಲಿ “ಪಾಕಿಸ್ಥಾನದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ”ಎಂದು ಹಾಗೂ 2019ರ ಮಾರ್ಚ್ 7ರಂದು “ಪಾಕಿಸ್ಥಾನದ ಮೂರು ಸಚಿವರು ಉಗ್ರ ಸಂಘಟನೆಗಳ ಜೊತೆಗೆ ಸಂಬಂದ ಹೊಂದಿದ್ದಾರೆ”ಎಂದು ಹೇಳಿಕೆ ನೀಡಿರುವುದನ್ನು ಮರೆತಂತೆ ಕಾಣುತ್ತಿದೆ. ನರೆಂದ್ರ ಮೋದಿಯವರ ಕುರಿತಾದ ಕೀಳು ಮಟ್ಟದ ಇಬ್ಬಗೆತನದ ಅವರ ಹೇಳಿಕೆ ಭಾರತ ದೇಶಕ್ಕೆ ಮಾಡಿದ ಅವಮಾನ, ದೇಶಪ್ರೇಮಿ ಭಾರತೀಯರು ಇದನ್ನು ಖಂಡಿಸಿ ಇದರ ವಿರುದ್ದ ಹೋರಾಟ ಮಾಡಬೇಕಿದೆ ಎಂದು ಯಡಿಯೂರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.







