ಪಚ್ಚನಾಡಿಯ ಸರಕಾರಿ ಜಾಗದ ಅಕ್ರಮ ಹಂಚಿಕೆ ಪ್ರಕರಣವು ರಾಜಕೀಯ ತೇಜೋವಧೆಗೆ ಯತ್ನ: ಸಂಗೀತ ನಾಯಕ್ ಆರೋಪ

ಮಂಗಳೂರು: ಪಚ್ಚನಾಡಿ ವಾರ್ಡ್ನಲ್ಲಿ ಎಂದೆಂದೂ ನಡೆಯದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇದನ್ನು ಸಹಿಸದೆ ಕೆಲವರು ನನ್ನ ಮತ್ತು ನನ್ನ ಪತಿಯ ವಿರುದ್ಧ ರಾಜಕೀಯ ತೇಜೋವೆಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಮನಪಾ ಸದಸ್ಯೆ ಸಂಗೀತ ನಾಯಕ್ ಆರೋಪಿಸಿದರು.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಾರ್ಡ್ನಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಅಲ್ಲದೆ, ಪಾರ್ಕ್, ಅಂಗನವಾಡಿ, ಪಚ್ಚನಾಡಿ ಡಂಪಿಂಗ್ ಯಾರ್ಡ್ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಇದನ್ನು ಸಹಿಸದೆ ಕಳೆದ ಕೆಲವು ವರ್ಷಗಳಿಂದ ನನ್ನ ಮತ್ತು ನನ್ನ ಪತಿಯ ವಿರುದ್ಧ ಆರೋಪಿಸಲಾಗುತ್ತಿದೆ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಡಿ.14ರಂದು ನಡೆದ ಘಟನೆಯ ವಿಡಿಯೋದ ಸಣ್ಣ ತುಣುಕನ್ನು ಹರಿಯಬಿಟ್ಟು ಕಾರ್ಪೋರೇಟರ್ ಗಂಡನ ಹಸ್ತಕ್ಷೇಪ, ಗೂಂಡಾಗಿರಿ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದರು.
ಡಿ.14ರಂದು ನಾನು ಆ ಸ್ಥಳಕ್ಕೆ ಹೋದೆ. ಆ ವೇಳೆ ನಾನು ಸ್ಥಳೀಯರೊಂದಿಗೆ ಮಾತನಾಡುತ್ತಿದ್ದಾಗ, ಮೋಹನ್ ಪಚ್ಚನಾಡಿ ಎಂಬವರು ನನ್ನ ಹಾಗೂ ನನ್ನ ಪತಿಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದನ್ನು ಆಕ್ಷೇಪಿಸಿದ ನನ್ನ ಪತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಒಂದು ವೇಳೆ ಭೂಮಾಫಿಯಾ ನಡೆದಿದ್ದರೆ ಅದನ್ನು ದಾಖಲೆ ಸಹಿತ ಬಹಿರಂಗಪಡಿಸಲಿ. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಪತಿ ಯಾವತ್ತೂ ಹಸ್ತಕ್ಷೇಪ ಮಾಡಿಲ್ಲ ಎಂದು ಅವರು ಹೇಳಿದರು.