ಪಕ್ಷ ಬಿಟ್ಟು ಹೋಗಲಿ ಎನ್ನಲು ಪ್ರತಾಪ್ ಸಿಂಹ ಯಾರು?: ಎಚ್.ವಿಶ್ವನಾಥ್ ಕಿಡಿ
![ಪಕ್ಷ ಬಿಟ್ಟು ಹೋಗಲಿ ಎನ್ನಲು ಪ್ರತಾಪ್ ಸಿಂಹ ಯಾರು?: ಎಚ್.ವಿಶ್ವನಾಥ್ ಕಿಡಿ ಪಕ್ಷ ಬಿಟ್ಟು ಹೋಗಲಿ ಎನ್ನಲು ಪ್ರತಾಪ್ ಸಿಂಹ ಯಾರು?: ಎಚ್.ವಿಶ್ವನಾಥ್ ಕಿಡಿ](https://www.varthabharati.in/sites/default/files/images/articles/2022/12/17/360483-1671295266.jpg)
ಮೈಸೂರು,ಡಿ.17: ಪಕ್ಷ ಬಿಟ್ಟು ಹೋಗಲಿ ಎನ್ನಲು ಯಾರ್ ರೀ ಅವನು ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, 'ಯಾರ್ ರೀ ಅವನು ಪ್ರತಾಪ್ ಸಿಂಹ..? ಪಕ್ಷ ಬಿಟ್ಟು ಹೋಗಲಿ ಅನ್ನೋಕೆ ಅವನಿಗೇನು ಅಧಿಕಾರಿದೆ? ನಾನು ಮಾತನಾಡಿರೋದು ಸರಿಯೋ ತಪ್ಪೋ ಅದನ್ನು ಕೇಳೋಕೆ ರಾಜ್ಯಾಧ್ಯಕ್ಷರು ಇದ್ದಾರೆ. ಅವನು ರಾಜ್ಯಾಧ್ಯಕ್ಷನೇ.? ನನ್ನ ಬಗ್ಗೆ ಮಾತನಾಡುವ ನೈತಿಕತೆ ಪ್ರತಾಪ್ ಸಿಂಹನಿಗಿದೆಯಾ.? ಬೇರೆಯವರು ಮಾಡಿರುವ ಕೆಲಸವನ್ನು ನಾನು ಮಾಡಿದ್ದು ಅಂತ ಹೇಳಿ ತಿರುಗುತ್ತೀಯಾ.. ನಾಚಿಕೆ ಆಗಬೇಕು ನಿನಗೆ. ಆಸ್ಕರ್ ಫರ್ನಾಂಡಿಸ್ ಅವರ ಕಾಲದ ಆಗಿರುವ ರಸ್ತೆ ಕಾಮಗಾರಿ ನಾನು ಮಾಡಿಸಿದೆ ಅಂತೀಯಾ' ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
''ನಿಜವಾದ ದೇಶ ಭಕ್ತೆ ಇಂದಿರಾ ಗಾಂಧಿ. ಅವರ ಮನೆ ಇಂದು ಮ್ಯೂಸಿಯಂ ಆಗಿದೆ. ಅಲ್ಲಿರುವ ದೇವರ ಕೋಣೆಯಲ್ಲಿ ದೇವರ ಫೋಟೋಗಳಿಲ್ಲ. ಅದಕ್ಕೆ ಬದಲಾಗಿ ಭಾರತದ ಭೂಪಟ ಇದೆ. ಹಾಗಾಗಿ ಅವರು ನಿಜವಾದ ದೇಶ ಭಕ್ತರು. ಇವರ್ಯಾರೋ ನಾವು ದೇಶ ಭಕ್ತರು ಅಂತ ಹೇಳಿಕೊಂಡು ಓಡಾಡುತ್ತಾರಲ್ಲ ಇವರಲ್ಲ ದೇಶ ಭಕ್ತರು' ಎಂದು ಹೇಳಿದರು.
ನನ್ನ ಜಂಡ ಬದಲಾಗಬಹುದು ನನ್ನ ಅಜೆಂಡಾ ಬದಲಾಗಲ್ಲ. ನಾನು ಯಾವ ಪಕ್ಷದಲ್ಲಿದ್ದಲ್ಲಿದ್ದರು ತಪ್ಪು ಮಾಡಿದರೆ ಯಾರೇ ಆದರೂ ಅದನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಯನ್ನ ಸಮರ್ಥಿಸಿಕೊಂಡ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಹೌದು ಬಿಜೆಪಿಯವರು ಒಂದನ್ನ ಮುಚ್ಚಿ ಹಾಕಲು ಇನ್ನೊಂದನ್ನ ಹುಟ್ಟು ಹಾಕುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿರುವುದರಲ್ಲಿ ತಪ್ಪಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲೂ ಜನರಿಗೆ ಮೋಸ ಮಾಡಲಿಕ್ಕೆ ಹೋಗುತ್ತಿರಲ್ಲಿರಿ. ಅದೂ ಸಿಎಂ ಕೂಡ ಇದರಲ್ಲಿ ಕೈ ಜೋಡಿಸಿದ್ದಾರೆ. ಎಂಥಾ ಹೀನ ಕೆಲಸಕ್ಕೆ ಕೈ ಹಾಕಿದ್ದೀರಿ. ನಾಚಿಕೆ ಆಗಬೇಕು ನಿಮಗೆ. ಇದನ್ನು ಮುಚ್ಚಿ ಹಾಕಲು ಅದೇ ಸಂದರ್ಭದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಹಟ್ಟು ಹಾಕಿದ್ದು ನಿಜ. ಡಿ.ಕೆ.ಶಿವಕುಮಾರ್ ಹೇಳಿರುವುದರಲ್ಲಿ ತಪ್ಪಿಲ್ಲ ಎಂದು ಎಚ್.ವಿಶ್ವನಾಥ್ ಹೇಳಿದರು.