10 ಕೋಟಿ ಮನೆಗೆ ತಗೊಂಡು ಹೋಗಿದ್ದ ಎಂದ ಶ್ರೀನಿವಾಸ ಪ್ರಸಾದ್ ಗೆ ಎಚ್.ವಿಶ್ವನಾಥ್ ತಿರುಗೇಟು
ಮೈಸೂರು,ಡಿ.17: ಸಂಸದ ವಿ.ಶ್ರೀನಿವಾಸ ಪ್ರಸಾದ್ ದಲಿತರ ಕಷ್ಟಕ್ಕಾಗದ ರಾಜಕಾರಣಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸಂಸದ ವಿ.ಶ್ರೀನಿವಾಸ ಪ್ರಸಾದ್ ದಲಿತರ ಕಷ್ಟಕ್ಕಾಗದ ರಾಜಕಾರಣಿ. ಮುರುಘಾ ಸ್ವಾಮಿಜೀ ದಲಿತರ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ನೀಡಿದ. ಅಂಬೇಡ್ಕರ್ ಮೊಮ್ಮಗ ಆನಂದ ತೇಲ್ತುಂಬ್ದೆ ಅವರನ್ನ ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ಯಾವ ಸಂದರ್ಭದಲ್ಲಾದರೂ ನೀವು ಧ್ವನಿ ಎತ್ತಿದ್ದೀರಾ..? ನೀವು ವೈಟ್ ಕಾಲರ್ ರಾಜಕಾರಣಿ. ಯಾವುದೋ ಬೀದಿ ರೌಡಿ ರೀತಿ ಮಾತನಾಡಿದ್ದೀರಿ. ನನ್ನ ವಿರುದ್ಧ ಬಳಸಿರುವ ಪದಗಳನ್ನ ಜನ ಕ್ಷಮಿಸುವುದಿಲ್ಲ ಎಂದು ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಚುನಾವಣೆ ವೇಳೆ 15 ಕೋಟಿ ಪಡೆದು ಅದರಲ್ಲಿ 4 ರಿಂದ 5 ಕೋಟಿ ಖರ್ಚು ಮಾಡಿ 10 ಕೋಟಿ ಮನೆಗೆ ತಗೊಂಡು ಹೋಗಿದ್ದರು ಎಂದು ಆರೋಪಿಸಿದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಎಚ್.ವಿಶ್ವನಾಥ್, ಚುನಾವಣೆ ಅಂದ ಮೇಲೆ ಪಕ್ಷ ದುಡ್ಡು ಕೊಡೋದು ಸಹಜ. ಲೆಕ್ಕ ಕೇಳಲು ಸಂಸದ ವಿ.ಶ್ರೀನಿವಾಸ ಪ್ರಸಾದ್ ಯಾರು ಎಂದು ಪ್ರಶ್ನಿಸಿದರು.
ಹುಣಸೂರು ಉಪ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಸೈನಿಕನ ಕೈಯಲ್ಲಿ ದುಡ್ಡು ಕೊಟ್ಟು ಕಳುಹಿಸಿದ್ದರು. ಸೈನಿಕ ಹುಣಸೂರಿಗೆ ಬರಲಿಲ್ಲ. ಈ ವಿಚಾರವನ್ನು ಈಗಾಗಲೇ ಹೇಳಿದ್ದೇನೆ. ಎಲ್ಲಾ ಚುನಾವಣೆಗಳಲ್ಲೂ ಪಕ್ಷದವರು ದುಡ್ಡು ಕೊಡುತ್ತಾರೆ. ಶ್ರೀನಿವಾಸ್ ಪ್ರಸಾದ್ ಅವರಿಗೆ ಅವರಿದ್ದ ಪಕ್ಷಗಳು ಹಣ ನೀಡಲ್ಲವೇ.? ನನಗೆ ಎಷ್ಟು ಕೋಟಿ ಬಂದಿದೆ ಅಂತ ಶ್ರೀನಿವಾಸ್ ಪ್ರಸಾದ್ ಗೆ ಏನು ಗೊತ್ತು. ಅವರಿಗೆ ಗೊತ್ತಿಲ್ಲದ ವಿಚಾರವನ್ನು ಯಾಕೆ ಮಾತಾನಾಡಬೇಕು ಎಂದು ಕಿಡಿಕಾರಿದರು.