ಲಾರಿ ಮಾಲಕರ ಮೇಲೆ ಶೋಷಣೆ ಮಾಡುತ್ತಿರುವ ಸರಕಾರ: ಬಿ.ಚೆನ್ನಾರೆಡ್ಡಿ ಆರೋಪ
''ಗುಜರಿ ನೀತಿ ವಿಷಾದನೀಯ''
ಬೆಂಗಳೂರು, ಡಿ.18: ಪ್ರಸ್ತುತ ಇರುವ ಮೋಟಾರು ವಾಹನ ಕಾಯ್ದೆಯು, ಸರಕು ಸಾಗಾಣಿಕೆ ವಾಹನಗಳ ಮಾಲಕರಿಗೆ ಸಂಪೂರ್ಣ ವಿರುದ್ಧವಾಗಿದೆ. ಇದು ಉದ್ದಿಮೆ ಏಳಿಗೆಗೆ ಮಾರಕವಾಗಿದೆ. ಸರಕಾರವು ಉದ್ದಿಮೆಯ ಏಳಿಗೆಗೆ ಯೋಜನೆಗಳನ್ನು ರೂಪಿಸಿ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ಕೊಡದೆ ಉದ್ದಿಮೆಯ ಅಭಿವೃದ್ಧಿಯನ್ನು ನಿರ್ಬಂಧಿಸುತ್ತಿದೆ ಎಂದು ಫೆಡರೇಶನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ನ ಗೌರವ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಆರೋಪಿಸಿದರು.
ರವಿವಾರ ಬಸವನಗುಡಿ ರಸ್ತೆಯಲ್ಲಿರುವ ಮರಾಠಾ ಹಾಸ್ಟೆಲ್ ಆವರಣದಲ್ಲಿ ನಡೆದ ದಿ ಬೆಂಗಳೂರು ಲೋಕಲ್ ಲಾರಿ ಓನರ್ಸ್ ಅಸೋಸಿಯೇಷನ್ನ ಸುವರ್ಣ ಮಹೋತ್ಸವ ಆಚರಣೆ ಹಾಗೂ ರಾಜ್ಯ ಲಾರಿ ಮಾಲಕರ ಸಮ್ಮೇಳನದ ಸಂದರ್ಭದಲ್ಲಿ ಮಾತನಾಡುತ್ತಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.
ಅಲ್ಲದೆ ಬದಲಾದ ಕೆಲವು ವ್ಯವಸ್ಥೆಗಳಿಂದಾಗಿ, ಲಾರಿ ಮಾಲಕರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ರಸ್ತೆ ಸುರಕ್ಷತೆಯ ಹೆಸರಲ್ಲಿ ಕೇಂದ್ರ ಸರಕಾರ ದಂಡದ ಮೊತ್ತವನ್ನು ಕನಿಷ್ಠ 5 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳಿಗೆ ಅವೈಜ್ಞಾನಿಕವಾಗಿ ಏರಿಸಿದೆ. ಈ ಬದಲಾವಣೆಯ ನಂತರ ಪರಿಸ್ಥಿತಿ ಯಾವುದೇ ರೀತಿಯಲ್ಲಿಯೂ ಬದಲಾಗಿಲ್ಲ. ಅಪಘಾತ, ಸಾವು ನೋವುಗಳ ಪ್ರಮಾಣದಲ್ಲೂ ಯಾವುದೇ ನಿಯಂತ್ರಣ ಕಂಡುಬಂದಿಲ್ಲ ಎಂದು ಅವರು ಹೇಳಿದರು.
ಇತ್ತೀಚೆಗೆ ತೆರಿಗೆ ಪಾವತಿಯನ್ನು ಮಾತ್ರ ಗಣಕೀಕೃತ ಮಾಡಿದ್ದು, ಉಳಿದ ಎಲ್ಲ ಸೇವೆಗಳನ್ನೂ ಗಣಕೀಕೃತ ಗೊಳಿಸಬೇಕು. ಇದರಿಂದ ಲಾರಿ ಮಾಲಕರು ಪದೇ ಪದೇ ಸಾರಿಗೆ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕಿದೆ ಎಂದು ಚೆನ್ನಾರೆಡ್ಡಿ ಮನವಿ ಮಾಡಿದರು.
ಮೋಟರ್ ವಾಹನ ಕಾಯ್ದೆಯ ಯಾವುದೇ ನಿಯಮಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಡಿ ತನಿಖಾ ಠಾಣೆಗಳು ದಿನದ 24ಗಂಟೆ ಹಾಗೂ ವರ್ಷದ 365 ದಿನವೂ ನಿರಂತರವಾಗಿ ಕೆಲಸ ಮಾಡುತ್ತಿವೆ. ಇದು ಸಾಗಾಣಿಕೆ ಉದ್ಯಮಕ್ಕೆ ಹೊರೆಯಾಗಿ ಪರಿಣಮಿಸಿದೆಯೇ ಹೊರತು, ವರ್ಷದಿಂದ ವರ್ಷಕ್ಕೆ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಅವರು ಹೇಳಿದರು.
ಗುಜರಿ ನೀತಿ ವಿಷಾದನೀಯ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ವಾಹನಗಳು ಸುವ್ಯವಸ್ಥೆಯಲ್ಲಿವೆಯೋ ಇಲ್ಲವೋ ಎಂದು ನಿರ್ಧಾರ ಮಾಡಬಹುದಾಗಿದೆ. ಸುವ್ಯವಸ್ಥೆಯಲ್ಲಿರುವ ವಾಹನಗಳಿಗೆ ಮಾತ್ರ ಅರ್ಹತಾ ಪತ್ರ, ನವೀಕರಣ ಪತ್ರ ನೀಡಬೇಕು. ಇಲ್ಲವಾದಲ್ಲಿ ನಿರಾಕರಿಸಬೇಕು. ಇಂಥದ್ದೊಂದು ವ್ಯವಸ್ಥೆ ಇರುವಾಗ ಕೇಂದ್ರ ಸರಕಾರ 15 ವರ್ಷ ಹಳೆಯದಾದ ವಾಹನಗಳಿಗೆ ‘ಗುಜರಿ ನೀತಿ’ ಜಾರಿ ಮಾಡಿರುವುದು ವಿಷಾದನೀಯ ಎಂದು ಚೆನ್ನಾರೆಡ್ಡಿ ತಿಳಿಸಿದರು.
ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ವಾಹನ ಖರೀದಿಸಿರುವವರಿಗೆ ಇದು ಆರ್ಥಿಕವಾಗಿ ಹೊರೆಯಾಗಲಿದೆ. ಅಷ್ಟೇ ಅಲ್ಲ, ಹಳೆಯ ವಾಹನಗಳ ರಿಪೇರಿ ಉದ್ಯೋಗ, ಬಿಡಿ ಭಾಗಗಳ ವ್ಯಾಪಾರಿ ಅಂಗಡಿಯನ್ನೆ ನಂಬಿಕೊಂಡು ಲಕ್ಷಾಂತರ ಮೆಕಾನಿಕ್ಸ್ ಕುಟುಂಬಗಳು ಜೀವನ ಸಾಗಿಸುತ್ತಿವೆ. ಈಗಷ್ಟೇ ಕೊರೋನ ಸಂದಿಗ್ಧ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುತ್ತಿರುವ ಇಂಥವರಿಗೆ ಗುಜರಿ ನೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಸ್ಯೆಗಳು ಬೇಕಾದಷ್ಟಿವೆ. ಅದರ ಮಧ್ಯೆ ಇನ್ನಷ್ಟು ಸಮಸ್ಯೆಯನ್ನು ಹುಟ್ಟುಹಾಕುವ ನೀತಿ ಜಾರಿಯಾಗುತ್ತಿದೆ. ನಮ್ಮಲ್ಲಿ ಸಿಗುತ್ತಿರುವ ಇಂಧನ ಪರಿಸರಕ್ಕೆ ಅನುಗುಣವಾಗಿದೆಯೇ? ‘ಭಾರತ್ 6’ ಇದ್ದರೆ ಮಾತ್ರ ಹೊಸ ವಾಹನಗಳನ್ನು ನೋಂದಣಿ ಮಾಡುತ್ತಿದ್ದಾರೆ. ಆದರೆ ಭಾರತ್ 6ಗೆ ಬೇಕಾದಂಹ ಇಂಧನ ಪೂರೈಕೆ ನಮ್ಮಲ್ಲಿದೆಯೇ? ಗುಜರಿ ನೀತಿಗನುಗುಣವಾಗಿ ವಾಹನಗಳನ್ನು ಗುಜರಿಗೆ ಹಾಕಿದರೆ ಅಂಥ ವಾಹನಗಳಿಗೆ ನಿರ್ದಿಷ್ಟ ಬೆಲೆ ನಿಗದಿಪಡಿಸಿದ್ದಾರೆಯೇ? ಎಂದು ಚೆನ್ನಾರೆಡ್ಡಿ ಪ್ರಶ್ನಿಸಿದರು.
ಹಳೆಯ ವಾಹನಗಳಿಗೆ ಗ್ರೀನ್ ಟ್ಯಾಕ್ಸ್ ಹೇರುವುದು, ಥರ್ಡ್ ಪಾರ್ಟಿ ಇನ್ಶುರೆನ್ಸ್ ಪ್ರೀಮಿಯಂ ಅನ್ನು ಪ್ರತಿ ವರ್ಷ ಏರಿಸುತ್ತಿರುವುದು ಮುಂತಾದ ವಿಷಯಗಳ ಕುರಿತಂತೆ ಕೇಂದ್ರ ಸರಕಾರ ದೇಶಾದ್ಯಂತ ಇರುವ ವಾಹನ ಮಾಲಕರ ಸಂಘಗಳ ಜೊತೆಗೆ ಜಂಟಿಯಾಗಿ ಸಭೆ ಕರೆದು ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ಪಡೆದು ಆ ನಂತರ ಹೊಸ ಬಗೆಯ ನೀತಿ ನಿಯಮಗಳ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕರಾದ ಉದಯ್ ಗರುಡಾಚಾರ್, ಝಮೀರ್ ಅಹ್ಮದ್ ಖಾನ್ ಹಾಗೂ ಸಾರಿಗೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.