ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್
ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಿದೆ.
ರಾಜ್ಯ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ನರೋತ್ತಮ್ ಮಿಶ್ರಾ ಅವರು ಚರ್ಚೆಗೆ ಸಿದ್ಧ ಎಂದು ಹೇಳಿದ ನಂತರ ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್ ಅವರು ಮಂಡಿಸಿದ ಪ್ರಸ್ತಾವನೆಯನ್ನು ಸ್ಪೀಕರ್ ಗಿರೀಶ್ ಗೌತಮ್ ಅವರು ಅಂಗೀಕರಿಸಿದರು.
ನಾವು ಬಿಜೆಪಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರಲಿದ್ದೇವೆ. ಸರಕಾರವು ಎಲ್ಲ ಹಂತದಲ್ಲೂ ವಿಫಲವಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ Madhya Pradesh Congress president Kamal Nath ಅವರು ಬುಧವಾರ ಬೆಳಗ್ಗೆ ಹೇಳಿದ್ದರು.
ಕಾಂಗ್ರೆಸ್ 51 ಅಂಶಗಳ ಮೇಲೆ ರಾಜ್ಯ ಸರಕಾರದ ವಿರುದ್ಧ 104 ಪುಟಗಳ "ಚಾರ್ಜ್ ಶೀಟ್" ಸಲ್ಲಿಸಿದೆ ಎಂದು ಗೋವಿಂದ್ ಸಿಂಗ್ ಸೋಮವಾರ ಹೇಳಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಪಕ್ಷದ ಎಲ್ಲಾ ಶಾಸಕರು ಸದನದಲ್ಲಿ ಇರುವಂತೆ ಕಾಂಗ್ರೆಸ್ ಈ ಹಿಂದೆ ವಿಪ್ ಜಾರಿ ಮಾಡಿತ್ತು.
230 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ 127 ಹಾಗೂ ಕಾಂಗ್ರೆಸ್ 96 ಶಾಸಕರನ್ನು ಹೊಂದಿದೆ.