ಮಂಗಳೂರು: ರಸ್ತೆ ಪಕ್ಕದ ಗುಂಡಿಗೆ ಮಹಿಳೆ ಬಿದ್ದ ಪ್ರಕರಣ; ಟೆಲಿಕಾಂ ಕಂಪೆನಿಯ ವಿರುದ್ಧ ದೂರು

ಮಂಗಳೂರು: ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದ ಬಳಿ ಡಿ.19ರಂದು ಪಾದಚಾರಿ ಮಹಿಳೆಯೊಬ್ಬರು ಸುಮಾರು 7 ಅಡಿ ಆಳದ ಗುಂಡಿಗೆ ಬಿದ್ದು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಟೆಲಿಕಾಂ ಕಂಪೆನಿಯ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ.
ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ, ಮುಂಜಾಗ್ರತಾ ಕ್ರಮಗಳನ್ನು ಕೂಡ ಕೈಗೊಳ್ಳದೆ ಕೇಬಲ್ ದುರಸ್ತಿಗೊಳಿಸಲು ಗುಂಡಿ ತೋಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಹಾಗಾಗಿ ಕಂಪೆನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗುಂಡಿಗೆ ಬಿದ್ದ ಮಹಿಳೆಯನ್ನು ಸಾರ್ವಜನಿಕರು ಮೇಲೆತ್ತಿ ರಕ್ಷಿಸಿದ್ದರು. ಘಟನೆ ಬಳಿಕ ಪಾಲಿಕೆಯು ಆ ಗುಂಡಿಯನ್ನು ಮುಚ್ಚಿಸಿದೆ.
Next Story