ಮಂಗಳೂರು: ಅನೈತಿಕ ಪೊಲೀಸ್ಗಿರಿ ಖಂಡಿಸಿ ಜೆಡಿಎಸ್ ಪ್ರತಿಭಟನೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್ಗಿರಿಯನ್ನು ಖಂಡಿಸಿ ಜಾತ್ಯತೀತ ಯುವ ಜನತಾದಳದ ದ.ಕ ಜಿಲ್ಲಾ ಘಟಕದ ವತಿಯಿಂದ ನಗರದ ಮಿನಿವಿಧಾನ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ಗಿರಿ ಹೆಚ್ಚುತ್ತಿವೆ. ಶಾಂತಿಯುತವಾಗಿರುವ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರವೇ ಕಾರಣವಾಗಿದೆ. ಈ ಸರಕಾರ ಕುಮ್ಮಕ್ಕು ನೀಡುತ್ತಿರುವುದರಿಂದ ಸಂಘಪರಿವಾರದ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಜಿಲ್ಲೆಗೆ ಕಳಂಕ ತರುವ ಈ ಅನೈತಿಕ ಪೊಲೀಸ್ಗಿರಿಯನ್ನು ಮಟ್ಟಹಾಕದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ನಝೀರ್ ಉಳ್ಳಾಲ್, ಸುಶೀಲ್ ನೊರೊನ್ಹಾ, ದಿನಕರ ಉಳ್ಳಾಲ್, ಇಕ್ಬಾಲ್ ಮುಲ್ಕಿ, ರಮೀಝಾ ನಾಸರ್, ರತ್ನಾಕರ ಸುವರ್ಣ ಮತ್ತಿತರರು ಪಾಲ್ಗೊಂಡಿದ್ದರು.