ಮೀನುಗಾರರ ಬೇಡಿಕೆ ಈಡೇರಿಕೆಗೆ ಮೀನುಗಾರರ ನಿಯೋಗದ ಮನವಿ
ಬೆಳಗಾವಿಯಲ್ಲಿ ಸಿದ್ಧರಾಮಯ್ಯರ ಭೇಟಿ

ಬೈಂದೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಭಾಗಿಯಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮೀನುಗಾರರ ನಿಯೋಗದೊಂದಿಗೆ ಭೇಟಿ ಮಾಡಿದ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ನಾಡದೋಣಿಯವರಿಗೆ ವರ್ಷದ 10 ತಿಂಗಳು ಸೀಮೆಎಣ್ಣೆ ನೀಡಬೇಕು. ಆದರೆ ಕಳೆದ 5 ತಿಂಗಳಲ್ಲಿ ಕೇವಲ ಆಗಸ್ಟ್ ತಿಂಗಳಲ್ಲಿ ಮಾತ್ರ ಸೀಮೆಎಣ್ಣೆ ವಿತರಿಸಲಾಗಿದೆ. ಮೀನುಗಾರರಿಗೆ ನೀಡುವ ಖುಣ ಪರಿಹಾರ ನಿಧಿಗೆ ಹಾಗೂ ನಾಡದೋಣಿ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ 300 ಕೋಟಿ ರೂ. ಹಣವನ್ನು ಈ ಬಾರಿಯ ಬಜೆಟ್ನಲ್ಲಿ ಕಾಯ್ದಿರಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದ್ದಾರೆ.
ಗಂಗೊಳ್ಳಿ ಜೆಟ್ಟಿ ದುರಸ್ತಿಗೆ ಆಗ್ರಹ: ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿಗೆ ಮಂಜೂರಾಗಿರುವ 12 ಕೋಟಿ ರೂ.ಗಳಲ್ಲಿ 11.23 ಕೋಟಿ ಹಣ ಪಡೆದು ಕೊಂಡಿದ್ದರೂ, ಶೇ.30ರಷ್ಟು ಕಾಮಗಾರಿ ಮಾತ್ರ ಆಗಿದೆ. ಜೆಟ್ಟಿ ಕುಸಿತ ಪ್ರಕರಣದ ತನಿಖೆಯನ್ನು ಖಾಸಗಿ ಕಂಪೆನಿಗೆ ನೀಡಲಾಗಿದೆ. ಕುಸಿದಿರುವ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಯೂ ನಡೆಯುತ್ತಿಲ್ಲ. ಗಂಗೊಳ್ಳಿ ಬಂದರಿನ ಅವ್ಯವಸ್ಥೆಯಿಂದಾಗಿ ಮೀನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಸಾವು- ನೋವು ಸಂಭವಿಸುತ್ತಿವೆ. ಕಳೆದೆರಡು ವರ್ಷಗಳಿಂದ ಸಂಕಷ್ಟ ಪರಿಹಾರ ನಿಧಿಯೂ ಬಿಡುಗಡೆಯಾಗುತ್ತಿಲ್ಲ ಎನ್ನುವುದನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತಂದ ಪೂಜಾರಿ ಅಧಿವೇಶನದಲ್ಲಿ ಆದ್ಯತೆ ನೆಲೆಯಲ್ಲಿ ಸರ್ಕಾರದ ಗಮನಕ್ಕೆ ಮೀನುಗಾರರ ಸಮಸ್ಯೆಗಳನ್ನು ತರುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ನೋಟಿಸ್ ನೀಡಿ ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೋರುವುದಾಗಿ ಹಾಗೂ ಸರಕಾರದ ಮುಖ್ಯಸ್ಥರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ ಎಂದು ಗೋಪಾಲ ಪೂಜಾರಿ ತಿಳಿಸಿದರು.
ಗಂಗೊಳ್ಳಿ ನಾಡ ದೋಣಿ ವಲಯ ಸಂಘಟನೆಯ ಅಧ್ಯಕ್ಷ ಯಶವಂತ್ ಖಾರ್ವಿ, ಮೀನುಗಾರ ಮುಖಂಡರಾದ ಗೋಪಾಲ್ ಖಾರ್ವಿ, ಹರೀಶ್ ಖಾರ್ವಿ, ಗಣಪತಿ ಖಾರ್ವಿ, ಮೊಗವೀರ ಸಮುದಾಯದ ಪ್ರಮುಖರಾದ ಹರೀಶ್ ತೋಳಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದ ಪೂಜಾರಿ ಪಡುಕೋಣೆ ನಿಯೋಗದಲ್ಲಿದ್ದರು.