ವೈದ್ಯಕೀಯ ಆಮ್ಲಜನಕದ ನಿಯಮಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಸೂಚನೆ
![ವೈದ್ಯಕೀಯ ಆಮ್ಲಜನಕದ ನಿಯಮಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಸೂಚನೆ ವೈದ್ಯಕೀಯ ಆಮ್ಲಜನಕದ ನಿಯಮಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಸೂಚನೆ](https://www.varthabharati.in/sites/default/files/images/articles/2022/12/24/361158-1671888779.jpeg)
ಹೊಸದಿಲ್ಲಿ,ಡಿ.24: ನೆರೆಯ ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರವು ವೈದ್ಯಕೀಯ ಆಮ್ಲಜನಕದ ಕ್ರಿಯಾತ್ಮಕ ಮತ್ತು ನಿಯಮಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಶನಿವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ವೈದ್ಯಕೀಯ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವಾರಕ್ಕೊಮ್ಮೆ ಪುನರ್ಪರಿಶೀಲನಾ ಸಭೆಯನ್ನು ನಡೆಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು,ಜೀವರಕ್ಷಕ ಉಪಕರಣ,ದ್ರವ ವೈದ್ಯಕೀಯ ಆಮ್ಲಜನಕ ಮತ್ತು ಆಮ್ಲಜನಕ ಸಿಲಿಂಡರ್ಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಸಹ ತಿಳಿಸಿದೆ.
‘ದೇಶದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಿವೆ ಮತ್ತು ಸದ್ಯಕ್ಕೆ ಉಲ್ಬಣಗೊಳ್ಳುತ್ತಿಲ್ಲ,ಆದರೂ ಭವಿಷ್ಯದಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ಈ ವೈದ್ಯಕೀಯ ಮೂಲಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಅತ್ಯಂತ ಮುಖ್ಯವಾಗಿದೆ. ಸಕಾಲಿಕ ಸಿದ್ಧತೆ ಮತ್ತು ಸ್ಪಂದಿಸುವಿಕೆಯೊಂದಿಗೆ ಭವಿಷ್ಯದಲ್ಲಿ ಉದ್ಭವಿಸಬಹುದಾದ ಕೋವಿಡ್ಗೆ ಸಂಬಂಧಿಸಿದ ಯಾವುದೇ ಸವಾಲುಗಳನ್ನು ಎದುರಿಸಲು ನಮಗೆ ಸಾಧ್ಯವಾಗುತ್ತದೆ ’ ಎಂದು ಸಚಿವಾಲಯದ ಪತ್ರದಲ್ಲಿ ಹೇಳಲಾಗಿದೆ.
ಕೆಲವು ದೇಶಗಳ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ
ಚೀನಾ,ಜಪಾನ,ದಕ್ಷಿಣ ಕೊರಿಯಾ,ಸಿಂಗಾಪುರ ಮತ್ತು ಥೈಲ್ಯಾಂಡ್ಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯು ಕಡ್ಡಾಯವಾಗಲಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಶನಿವಾರ ತಿಳಿಸಿದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಭಾರತವನ್ನು ಪ್ರವೇಶಿಸಿದ ನಂತರವೂ ಈ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗುವುದು. ಅವರು ಪಾಸಿಟಿವ್ ಆಗಿದ್ದರೆ ಅಥವಾ ಜ್ವರದ ಲಕ್ಷಣಗಳನ್ನು ಹೊಂದಿದ್ದರೆ ಅವರನ್ನು ಕ್ವಾರಂಟೈನ್ಗೆ ಒಳಪಡಿಸುವಂತೆ ನಾವು ಆದೇಶಿಸಿದ್ದೇವೆ ಎಂದು ಹೇಳಿದರು.
ಡಿ.24ರಿಂದ ಅಂತರರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣಗಳಿಗೆ ಆಗಮಿಸಿದ ಬಳಿಕ ಅವರ ಪೈಕಿ ಶೇ.2ರಷ್ಟು ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ವಿಮಾನಯಾನ ಸಂಸ್ಥೆಗಳು ಆಯ್ಕೆ ಮಾಡುವ ಪ್ರಯಾಣಿಕರು ಕೋವಿಡ್ ಪರೀಕ್ಷೆಗೆ ತಮ್ಮ ರಕ್ತದ ಸ್ಯಾಂಪಲ್ಗಳನ್ನು ನೀಡಿದ ಬಳಿಕವಷ್ಟೇ ಅವರಿಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರವು ಗುರುವಾರ ತಿಳಿಸಿತ್ತು