ಅಬ್ದುಲ್ ಜಲೀಲ್ ಹತ್ಯೆ ಸಿಬಿಐ ತನಿಖೆಗೆ ಶಾಫಿ ಸ ಅದಿ ಒತ್ತಾಯ

ಬೆಂಗಳೂರು, ಡಿ.25: ಮಂಗಳೂರು ನಗರ ಹೊರವಲಯದಲ್ಲಿ ಅಬ್ದುಲ್ ಜಲೀಲ್ ಎಂಬ ಯುವಕನ ಕೊಲೆ ನಡೆದಿರುವುದು ಅತ್ಯಂತ ಖಂಡನೀಯ. ಅಲ್ಲದೆ, ಕರಾವಳಿಯಲ್ಲಿ ನಡೆದಿರುವ ಇಂತಹ ಘಟನೆಗಳನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸ ಅದಿ ಆಗ್ರಹಿಸಿದ್ದಾರೆ.
ರವಿವಾರ 'ವಾರ್ತಾಭಾರತಿ' ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಇಂತಹ ಘಟನೆಗಳಿಂದ ಮೃತಪಡುವ ಸಂತ್ರಸ್ತರ ಕುಟುಂಬಗಳಿಗೆ ಸರಕಾರ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಈ ಪರಿಹಾರದ ಹಣವನ್ನು ಆರೋಪಿಗಳು ಹಾಗೂ ಇದಕ್ಕೆ ಕುಮ್ಮಕ್ಕು ನೀಡುವವರಿಂದಲೇ ವಸೂಲು ಮಾಡಬೇಕು ಎಂದು ಆಗ್ರಹಿಸಿದರು.
ಅಬ್ದುಲ್ ಜಲೀಲ್ ಕುಟುಂಬವನ್ನು ಭೇಟೊಯಾಗಿ ಸಾಂತ್ವನ ಹೇಳುತ್ತೇನೆ: ಕರಾವಳಿ ಭಾಗದಲ್ಲಿ ಚುನಾವಣೆಗಳು ಸಮೀಪಿಸುವಾಗ ಹಾಗೂ ಚುನಾವಣೆಗಳ ನಂತರ ಕೊಲೆಗಳು ಆಗುತ್ತಿರುವುದು ದುರ್ದೈವ. ದ್ವೇಷ ಮನುಷ್ಯನ ಪ್ರಾಣ ಕಳೆಯುವಷ್ಟು ಕ್ರೂರವಾಗುತ್ತಿದೆ. ನಾಗರಿಕ ಸಮಾಜ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಶಾಫಿ ಸ ಅದಿ ಮನವಿ ಮಾಡಿದರು.
ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಫಾಝಿಲ್, ಪ್ರವೀಣ್ ನೆಟ್ಟಾರ್, ಮಸೂದ್ ಕೊಲೆಗಳು ಆಗಿವೆ. ಇದೀಗ ಜಲೀಲ್ ಹತ್ಯೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.







