ಕಾಲು ಸಂಕಗಳ ನಿರ್ಮಾಣ: ಅಧಿಕಾರಿಗಳ ವಿರುದ್ಧ ರಾಘವೇಂದ್ರ ಆಕ್ರೋಶ

ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಕಾಲುಸಂಕಗಳ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ಕೋಟಿಗಳ ಅನುದಾನ ತಂದರೂ ಕಾಮಗಾರಿ ನಡೆದಿಲ್ಲ. ತಕ್ಷಣ ಉಳಿದ ಕಾಲು ಸಂಕ ನಿರ್ಮಾಣಕ್ಕೆ ಮುತುವರ್ಜಿ ವಹಿಸಿ ಕೆಲಸ ಮಾಡಿ, ಅನುದಾನ ತಂದರೂ ಕೆಲಸ ಆಗೋದಿಲ್ಲ ಎಂದರೆ ಜನರಿಗೆ ಉತ್ತರ ನೀಡುವುದು ಹೇಗೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅಧಿಕಾರಿಗಳ ವಿರುದ್ಧ ತೀವ್ರವಾದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು. ಅಭಿವೃದ್ಧಿ ಕೆಲಸಗಳಿಗಾಗಿ ಕೋಟ್ಯಾಂತರ ರೂ. ಅನುದಾನವನ್ನು ಮಂಜೂರು ಮಾಡಿಕೊಂಡು ಬರುತ್ತೇವೆ. ಆದರೆ ಅದನ್ನು ಸಮರ್ಪಕ ರೀತಿಯಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಅಭಿವೃದ್ಧಿ ಕಾಮಗಾರಿ ಅನುಷ್ಠಾನ ವಿಳಂಬವಾಗುತ್ತಿದೆ. ಚುನಾವಣೆಯು ಹತ್ತಿರವಿ ರುವುದರಿಂದ ಇನ್ನೆರಡು ತಿಂಗಳಲ್ಲಿ ಬಹುತೇಕ ಕಾಮಗಾರಿಗಳನ್ನು ಮುಗಿಸಿ ಎಂದರು.
ಬೈಂದೂರು ಕ್ಷೇತ್ರದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದ್ದು, ಇದಕ್ಕಾಗಿ ದಿಲ್ಲಿಯಲ್ಲಿ ಸಂಬಂಧಪಟ್ಟ ಸಚಿವರನ್ನು ಮಾತನಾಡಿಸಿ, 23 ಬಿಸ್ಸೆನ್ನೆಲ್ ಟವರ್ಗಳನ್ನು ಮಂಜೂರುಗೊಳಿಸಲಾಗಿದ್ದರೂ ಇನ್ನು ಸಹ ಕೆಲವೆಡೆಗಳಲ್ಲಿ ಅದಕ್ಕೆ ಸ್ಥಳಗಳನ್ನು ಗುರುತಿಸುವ ಕೆಲಸ ಆಗಿಲ್ಲ. ನಿಮ್ಮ ಈ ರೀತಿಯ ನಿರ್ಲಕ್ಷ್ಯ ದಿಂದ ಜನ ನಮಗೆ ಶಾಪ ಹಾಕುತ್ತಿದ್ದಾರೆ ಎಂದು ಕಂದಾಯ ಅಧಿಕಾರಿಗಳ ವಿರುದ್ಧ ಸಂಸದರು ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ರಾಜಪ್ಪ, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಉಪಸ್ಥಿತರಿದ್ದರು.
ಗಾಂಜಾ, ಮಟ್ಕಾ ಬಗ್ಗೆ ಕಠಿಣ ಕ್ರಮವಹಿಸಿ..
ಶಂಕರನಾರಾಯಣ, ಅಂಪಾರು, ವಂಡ್ಸೆ ರಸ್ತೆ ಅಭಿವೃದ್ಧಿಗೆ 26 ಕೋಟಿ ಬಿಡುಗಡೆ ಆಗಿದ್ದು, ರಸ್ತೆ ಪಕ್ಕದಲ್ಲಿ ಹಾಕಿದ ಜೆಲ್ಲಿ ಕಳಪೆ ಆಗಿದೆ. ರಸ್ತೆ ಕೆಲಸ ಶೃದ್ಧೆಯಿಂದ ಮಾಡದಿದ್ದರೆ ಭ್ರಷ್ಟಾಚಾರ ಆರೋಪ ನಮ್ಮ ತಲೆಗೆ ಕಟ್ಟುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾನುವಾರುಗಳು ಅಪಘಾತದಲ್ಲಿ ಸಾಯುತ್ತಿದ್ದು, ಗೋಮಾಳ, ಸರ್ಕಾರಿ ಜಾಗ ಗುರುತಿಸಿದರೆ, ಬೀಡಾಡಿ ಹಸುಗಳನ್ನು ಅದರಲ್ಲಿ ಬಿಡುವ ಮೂಲಕ ಅವುಗಳ ರಕ್ಷಣೆ, ಅಪಘಾತ ತಪ್ಪಿಸಲು ಸಾಧ್ಯವಿದೆ.
ಶಿರೂರು ಬಳಿ ಗಾಂಜಾ, ಬೈಂದೂರು ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ಬಗ್ಗೆ ನಿಗಾ ಇಡುವಂತೆ ಪೊಲೀಸರಿಗೆ ಸಂಸದರು ಸೂಚಿಸಿದರು.
ಕಾಲ್ತೋಡಿನ ಕಾಲುಸಂಕದಲ್ಲಿ ಮಗುವೊಂದು ಕೊಚ್ಚಿ ಹೋದ ದುರಂತ ನಮ್ಮ ಕಣ್ಣ ಮುಂದೆ ಇದೆ. ಬೈಂದೂರು ಕ್ಷೇತ್ರಕ್ಕೆ ಕಾಲುಸಂಕಗಳ ನಿರ್ಮಾಣಕ್ಕಾಗಿಯೇ ೫ ಕೋಟಿ ಮಂಜೂರಾಗಿದೆ. ಕಾಮಗಾರಿ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. 50-60 ಕಾಲು ಸಂಕ ನಿರ್ಮಾಣವಾಗಬೇಕಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ.
-ಬಿ.ವೈ ರಾಘವೇಂದ್ರ, ಸಂಸದ
