ಬಾಂಬ್ ತಯಾರಿಸಿದ ಬಗ್ಗೆ ಆರೋಪಿ ಶಾರಿಕ್ನಿಂದ ಮಾಹಿತಿ ಸಿಕ್ಕಿಲ್ಲ: ಸಚಿವ ಆರಗ ಜ್ಞಾನೇಂದ್ರ
ಬೆಳಗಾವಿ, (ಸುವರ್ಣವಿಧಾನಸೌಧ) ಡಿ.26: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಕುಕ್ಕರ್ ಬಾಂಬ್ ತಯಾರಿಸಿದ ಬಗ್ಗೆ ಆರೋಪಿ ಶಾರಿಕ್ನಿಂದ ಮಾಹಿತಿ ಸಿಕ್ಕಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಅವರು, ಕೃತ್ಯವೆಸಗಿದ ಶಾರಿಕ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾನೆ.ಹಾಗಾಗಿ, ಆತನಿಂದ ಕುಕ್ಕರ್ ಬಾಂಬ್ ಹೇಗೆ ತಯಾರಿಸಿದ ಎನ್ನುವ ಕುರಿತು ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು.
ಶಾರಿಕ್ ಆಸ್ಪತ್ರೆಯಿಂದ ಹೊರಬಂದ ಮೇಲೆ ಇನ್ನಷ್ಟು ಮಾಹಿತಿ ಸಿಗಬಹುದು. ಇನ್ನೂ, ಆತ ಆನ್ಲೈನ್ ಮೂಲಕ ಈ ಕೃತ್ಯಕ್ಕೆ ತಯಾರಿ ನಡೆಸಿದ್ದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಸದನಕ್ಕೆ ತಿಳಿಸಿದರು.
ಇದಕ್ಕೂ ಮುನ್ನ ಬಿ.ಕೆ.ಹರಿಪ್ರಸಾದ್ ಪ್ರಸ್ತಾಪಿಸಿ, ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಏನಾಗಿದೆ?. ಅಲ್ಲದೆ, ಇದನ್ನು ಜನರೇ ಕಂಡು ಹಿಡಿದಿದ್ದಾರೆ ಹೊರತು ಪೊಲೀಸರಲ್ಲ. ಇದರಿಂದ ರಾಜ್ಯದ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎನ್ನುವುದು ಸಾಬೀತಾಗಿದೆ ಎಂದು ಆರೋಪಿಸಿದರು.