ಪ್ರತಿ ಇಂಚು ಜಮೀನನ್ನೂ ಮರಳಿ ಪಡೆಯುತ್ತೇವೆ: ಮಹಾರಾಷ್ಟ್ರ ವಿಧಾನಸಭೆಯಿಂದಲೂ ಸರ್ವಾನುಮತದ ನಿರ್ಣಯ
ಕರ್ನಾಟಕದ ʻಮರಾಠಿ ವಿರೋಧಿʼ ನಿಲುವನ್ನು ಟೀಕಿಸಿದ ಸಿಎಂ ಶಿಂಧೆ
![ಪ್ರತಿ ಇಂಚು ಜಮೀನನ್ನೂ ಮರಳಿ ಪಡೆಯುತ್ತೇವೆ: ಮಹಾರಾಷ್ಟ್ರ ವಿಧಾನಸಭೆಯಿಂದಲೂ ಸರ್ವಾನುಮತದ ನಿರ್ಣಯ ಪ್ರತಿ ಇಂಚು ಜಮೀನನ್ನೂ ಮರಳಿ ಪಡೆಯುತ್ತೇವೆ: ಮಹಾರಾಷ್ಟ್ರ ವಿಧಾನಸಭೆಯಿಂದಲೂ ಸರ್ವಾನುಮತದ ನಿರ್ಣಯ](https://www.varthabharati.in/sites/default/files/images/articles/2022/12/27/361464-1672139098.gif)
ಮುಂಬೈ: ಮಹಾರಾಷ್ಟ್ರ ಜೊತೆಗಿನ ಗಡಿ ವಿವಾದದಲ್ಲಿ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸುವ ಕುರಿತು ಕರ್ನಾಟಕ ವಿಧಾನಸಭೆ ಸರ್ವಾನುಮತದ ನಿರ್ಣಯ ಕೈಗೊಂಡ ಬೆನ್ನಲ್ಲೇ ಮಹಾರಾಷ್ಟ್ರದ ವಿಧಾನಮಂಡಲ ಕೂಡ ಇಂದು ಅಂತಹುದೇ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಂಡಿದೆ. ಕರ್ನಾಟಕದ 'ಮರಾಠಿ ವಿರೋಧಿ ನಿಲುವನ್ನೂ' ಈ ಸಂದರ್ಭ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಖಂಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಸ್ಥಿಕೆಯ ಹೊರತಾಗಿಯೂ ಬಿಜೆಪಿ ಆಡಳಿತದ ಎರಡು ರಾಜ್ಯಗಳ ನಡುವಿನ ಗಡಿ ವಿವಾದ ತಾರಕಕ್ಕೇರಿದೆ.
"ಕರ್ನಾಟಕ ಭಾಗದಲ್ಲಿ 865 ಮರಾಠಿ ಭಾಷಿಕರ ಗ್ರಾಮಗಳಿದ್ದು ಹಾಗೂ ಈ ಗ್ರಾಮಗಳ ಪ್ರತಿ ಇಂಚು ಜಮೀನನ್ನೂ ಮಹಾರಾಷ್ಟ್ರಕ್ಕೆ ತರಲಾಗುವುದು, ಇದನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಎಲ್ಲವನ್ನೂ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮಾಡಲಿದೆ," ಎಂದು ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ನಿರ್ಣಯದಲ್ಲಿ ಹೇಳಲಾಗಿದೆ.
ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ನಿರ್ಣಯ ಕುರಿತು ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಅದು ಪ್ರಚೋದನಾತ್ಮಕವಲ್ಲದೆ ಬೇರಿನ್ನೇನಲ್ಲ ಎಂದಿದ್ದಾರೆ.
ಕಳೆದ ವಾರ ಕರ್ನಾಟಕ ವಿಧಾನಸಭೆ ಕೈಗೊಂಡ ನಿರ್ಣಯವು ಮಹಾರಾಷ್ಟ್ರ ಸೃಷ್ಟಿಸಿದ ಗಡಿ ವಿವಾದವನ್ನು ಖಂಡಿಸಿ "ಕರ್ನಾಟಕದ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ," ಎಂದು ಹೇಳಿತ್ತು.