ದಾವಣಗೆರೆ: 3.50 ಲಕ್ಷ ರೂ. ಮೌಲ್ಯದ ಆಭರಣ ಪತ್ತೆ ಹಚ್ಚಲು ಪೊಲೀಸರಿಗೆ ನೆರವಾದ ಆಟೊ ಚಾಲಕ
ದಾವಣಗೆರೆ,ಡಿ.27: ಗ್ರಾಹಕರೊಬ್ಬರು ಮರೆತು ಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗ್ ಪತ್ತೆ ಹಚ್ಚಲು ಪೊಲೀಸರಿಗೆ ನೆರವಾದ ರಾಮಕೃಷ್ಣ ಹೆಗಡೆ ನಗರದ ಆಟೋ ಚಾಲಕ ಸುಭಾನ್ ಖಲೀಲ್ ಸಾಬ್ ಅವರಿಗೆ ಪೊಲೀಸರು ಸನ್ಮಾನಿಸಿದ್ದಾರೆ.
ಚಿತ್ರದುರ್ಗದ ಹಿಮ್ಮತ್ ನಗರದ ಅಸ್ಮತ್ ಉನ್ನೀಸಾ ದಾವಣಗೆರೆಯ ಸುಲ್ತಾನ್ ಪ್ಯಾಲೇಸ್ ಕಲ್ಯಾಣ ಮಂಟಪಕ್ಕೆ 25 ರಂದು ಮದುವೆ ಸಮಾರಂಭಕ್ಕೆ ಬಂದಿದ್ದರು. ಈ ವೇಳೆ ಆಟೋದಿಂದ ಇಳಿಯುವಾಗ 3.5 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್ ಮರೆತು ಹೋಗಿದ್ದರು. ಬಳಿಕ ಬಂದು ಆಟೊವನ್ನು ಹುಡುಕಿದಾಗ ಅದರಲ್ಲಿ ವ್ಯಾನಿಟಿ ಬ್ಯಾಗ್ ಇರಲಿಲ್ಲ. ಮತ್ತೊಬ್ಬ ಪ್ರಯಾಣಿಕರು ಬ್ಯಾಗ್ ತೆಗೆದುಕೊಂಡು ಹೋಗಿದ್ದರು. ಬಳಿಕ ಅಸ್ಮತ್ ಉನ್ನೀಸಾ ಅವರೊಂದಿಗೆ ತೆರಳಿದ ಸುಭಾನ್ ಆಜಾದ್ ನಗರ ಪೊಲೀಸರಿಗೆ ದೂರು ನೀಡಿದ್ದರು.
ಈ ವೇಳೆ ಆಟೋ ಚಾಲಕನೊಂದಿಗೆ ಪೊಲೀಸರು ಪ್ರಯಾಣಿಕರು ಇಳಿದ ಸ್ಥಳಗಳಲ್ಲಿ ಸಿಬ್ಬಂದಿಯೊಂದಿಗೆ ಹುಡುಕಾಡಿದರು. ಸಂಜೆ 7 ಗಂಟೆ ಸಮಯದಲ್ಲಿ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದೆ. ಇದರಲ್ಲಿ ಬಂಗಾರದ 2 ನಕ್ಲೇಸ್, ಕಿವಿಯ ಹ್ಯಾಂಗಿಂಗ್ಸ್ ಒಟ್ಟು 7 ತೊಲ ಅಂದಾಜು 3.50 ಲಕ್ಷದ ಮೌಲ್ಯದ ಬಂಗಾರದ ಆಭರಣಗಳು ಇದ್ದವು ಎನ್ನಲಾಗಿದೆ.
ಅಭರಣ ಪತ್ತೆಯಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ಅಭಿನಂದಿಸಿದ್ದಾರೆ. ಇದೇ ವೇಳೆ ಅಭರಣ ಪತ್ತೆಗೆ ನೆರವಾದ ಆಟೋ ಚಾಲಕನಿಗೆ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪಿಎಸ್ಐ ತಿಪ್ಪೇಸ್ವಾಮಿ ಸನ್ಮಾನಿಸಿದ್ದಾರೆ.
ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪ್ರಶಂಸಿಸಿದ್ದಾರೆ.