ಅಮಿತ್ ಶಾ ದೇಶದ ಯಾವ ಗ್ರೌಂಡ್ ನಲ್ಲಿ ಬೇಕಾದ್ರೂ ಚೆನ್ನಾಗಿ ಆಡ್ತಾರೆ: ಸಿ.ಟಿ ರವಿ
''ಹಿಂದುತ್ವದ ಐಡಿಯಾಲಜಿ ಮೇಲೆ ಚುನಾವಣೆಗೆ ಹೋಗುತ್ತೇವೆ''
ಬೆಳಗಾವಿ. ಡಿ. 28: 'ಒಳ್ಳೆಯ ಕ್ರಿಕೆಟ್ ಆಟಗಾರ ಯಾವ ಪಿಚ್ ಆದ್ರೂ ಆಟ ಆಡ್ತಾನೆ , ಒನ್ ಪಿಚ್ ಆದ್ರೂ ಸರಿ, ಬೇರೆ ಪಿಚ್ ಆದ್ರೂ ಸರಿ. ಅಮಿತ್ ಶಾ ಯಾವ ಪಿಚ್ ನಲ್ಲಿ ಬೇಕಾದರೂ ಆಡ್ತಾರೆ. ರಾಜ್ಯದಲ್ಲಿ ಹಳೇ ಮೈಸೂರು ಭಾಗವನ್ನು ನಾವು ಹೆಚ್ಚಾಗಿ ಫೋಕಸ್ ಮಾಡುತ್ತಿದ್ದೇವೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಬುಧವಾರ ಸುವರ್ಣ ಸೌಧ ಬಳಿ ಹಳೆ ಮೈಸೂರು ಭಾಗದಲ್ಲಿ ನಡೆಯಲಿರುವ ಅಮಿತ್ ಶಾ ಅವರ ಕಾರ್ಯಕ್ರಮ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಸಿ ಟಿ ರವಿ, ಹಳೆ ಮೈಸೂರು ಭಾಗದಲ್ಲಿ ಮೆಜಾರಿಟಿ ಬಂದ್ರೆ ಅಧಿಕಾರಕ್ಕೆ ಬರೋದು ಸುಲಭ. ಇದು 2008, 2018 ರ ಚುನಾವಣೆಯಲ್ಲಿ ನಮಗೆ ಗೊತ್ತಾಗಿದೆ. ಹಿಂದುತ್ವದ ಐಡಿಯಾಲಜಿ ಮೇಲೆ ಚುನಾವಣೆಗೆ ಹೋಗುತ್ತೇವೆ. ಹಿಂದುತ್ವ, ಅಭಿವೃದ್ಧಿ ಅಜೆಂಡಾದಿಂದ ಚುನಾವಣೆ ಎದುರಿಸುತ್ತೇವೆ. ಹಿಂದುತ್ವ ರಿಲೀಜಿಯನ್ ಅಲ್ಲ, ಅದನ್ನ ಅಳವಡಿಸಿಕೊಂಡ ಎಲ್ಲರೂ ಹಿಂದುಗಳೇ' ಎಂದರು.
''ಚಿಕ್ಕಮಗಳೂರು ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈಗ ಪಂಚಾಯತಿಯಿಂದ ಪಾರ್ಲಿಮೆಂಟ್ವರೆಗೆ ಬಿಜೆಪಿಯಿದೆ. ಒಂದು ಕಾಲದಲ್ಲಿ ನಾವು ಹೇಗಿದ್ದೆವು, ಈಗ ಹೇಗಿದ್ದೇವೆ. ಪರಿಶ್ರಮ ಹಾಕಿದ್ರೆ ಮುಂದೊಂದು ದಿನ ಲಾಭ, ಮಂಡ್ಯ,ಕೋಲಾರ, ಚಿಕ್ಕಬಳ್ಳಾಪುರದಲ್ಲೂ ನಾವು ಬರ್ತೇವೆ.ಮಂಡ್ಯ ಯಾರ ಜಾಗೀರೂ ಅಲ್ಲ, ಕುಮಾರಸ್ವಾಮಿಯವರಿಗೂ ಇದು ಗೊತ್ತಿದೆ" ಎಂದರು.
ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗದೆ ಇರುವುದಕ್ಕೆ ವ್ಯಾಪಾಕ ಟೀಕೆಗಳು ವ್ಯಕ್ತವಾಗುತ್ತಿದೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಧಿವೇಶನ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಲ್ಲ.ಸಮಗ್ರ ಕರ್ನಾಟಕದ ದೃಷ್ಟಿಯಿಂದ ಅಧಿವೇಶನ ನಡೆಸಲಾಗಿದೆ,ಬಜೆಟ್ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಯಾಗಲಿದೆ ಎಂದರು.