'ಜನಸಾಹಿತ್ಯ ಸಮ್ಮೇಳನ'ಕ್ಕೆ ಬೆಂಬಲ ಸೂಚಿಸಿದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಡಿ.28: ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ರಾಜಕೀಯ ಸಮಾವೇಶವೆಂದು ಖಂಡಿಸಿ ಅದಕ್ಕೆ ಪರ್ಯಾಯವಾಗಿ ಪ್ರಗತಿಪರ ಚಿಂತಕರು, ಹಿರಿಯ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ಒಟ್ಟುಗೂಡಿ ಜನವರಿ 8 ರಂದು ‘ಜನಸಾಹಿತ್ಯ ಸಮ್ಮೇಳನ'ವನ್ನು ಆಯೋಜಿಸಲು ತೀರ್ಮಾನಿಸಿದ್ದು, ಈ ಸಮಾವೇಶಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಬೆಂಬಲ ಸೂಚಿಸಿದ್ದಾರೆ.
ಜನಸಾಹಿತ್ಯ ಸಮ್ಮೇಳನವು ನಗರದ ಕೆ. ಆರ್. ಸರ್ಕಲ್ನಲ್ಲಿರುವ ಅಲುಮ್ನಿ ಸಭಾಂಗಣದಲ್ಲಿ ರವಿವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಸಾಹಿತಿಗಳಾದ ಪುರುಷೋತ್ತಮ ಬಿಳಿಮಲೆ, ದಿನೇಶ್ ಅಮೀನಮಟ್ಟು, ದೇವನೂರು ಮಹಾದೇವ, ಎಸ್.ಜಿ ಸಿದ್ದರಾಮಯ್ಯ, ಮುಕುಂದರಾಜ್, ಕೆ.ಷರೀಫ, ವಿಮಲ.ಕೆ.ಎಸ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹಲವಾರು ಮಹತ್ವದ ಕೃತಿಗಳನ್ನು ರಚಿಸಿರುವ, ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಡಾ. ಬರಗೂರು ರಾಮಚಂದ್ರಪ್ಪ ಅವರು, ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.