ನಾಡಧ್ವಜ ರೂಪಿಸಿದ ರಾಮಮೂರ್ತಿಯವರ ಪತ್ನಿಗೆ ಪಿಂಚಣಿ ನಿರಾಕರಣೆ

ಬೆಂಗಳೂರು, ಡಿ.28: ಅರವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕೆಂಪು-ಹಳದಿ ಕನ್ನಡ ಬಾವುಟವನ್ನು ವಿನ್ಯಾಸಗೊಳಿಸಿ ಅದನ್ನು ಹಾರಿಸಿದ್ದ ಕನ್ನಡ ಚಳವಳಿಯ ರಣ ಸೇನಾನಿ ಮ.ರಾಮಮೂರ್ತಿ ಅವರ ಪತ್ನಿ ಕಮಲಮ್ಮ ರಾಮಮೂರ್ತಿ (95) ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವೃದ್ಧಾಪ್ಯ ವೇತನವನ್ನು ನಿರಾಕರಿಸಿದೆ ಎಂದು ವರದಿಯಾಗಿದೆ.
ನಂಜನಗೂಡಿನವರಾದ ಕಮಲಮ್ಮ ವಿವಾಹದ ನಂತರ ಬೆಂಗಳೂರಿನಲ್ಲಿ ವಾಸವಿದ್ದರು. ಅವರ ಪತಿ ರಾಮಮೂರ್ತಿ ಅವರು 60ರ ದಶಕದಲ್ಲಿ ಕನ್ನಡ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರಿಶಿನ ಮತ್ತು ಕುಂಕುಮವನ್ನು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತಿದ್ದು, ಈ ಹಳದಿ (ಅರಿಶಿನ) ಮತ್ತು ಕೆಂಪು (ಕುಂಕುಮ) ಬಣ್ಣವನ್ನು ಬಳಸಿ ರಾಮಮೂರ್ತಿ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜವನ್ನು ವಿನ್ಯಾಸಗೊಳಿಸಿದ್ದರು.
ಈ ಧ್ವಜವನ್ನು ಜನಪ್ರಿಯಗೊಳಿಸಲು ರಾಮಮೂರ್ತಿಯವರು ಧ್ವಜವನ್ನು ಹಿಡಿದು ಪ್ರತಿದಿನವೂ ನಗರದಾದ್ಯಂತ ಸಂಚರಿಸುತ್ತಿದ್ದರು. ಆದರೆ, 60ರ ದಶಕದಲ್ಲಿ ರಾಮಮೂರ್ತಿ ಅವರು ಹೊಲದಲ್ಲಿ ಕೊಳವೆಬಾವಿ ತೋಡಿಸುತ್ತಿದ್ದ ವೇಳೆ ಭೂಕುಸಿತದಿಂದ ಇಬ್ಬರು ಮಕ್ಕಳ ಜತೆಗೆ ಮೃತಪಟ್ಟಿದ್ದಾರೆ. ಪತಿ ಹಾಗೂ ಪುತ್ರರ ಸಾವಿನ ಬಳಿಕ ಕಮಲಮ್ಮ ಅವರು ಬೆಂಗಳೂರಿನ ಆಶ್ರಮವೊಂದರಲ್ಲಿ ವಾಸವಿದ್ದಾರೆ.
ನಂತರ ಮಹಾನ್ ವ್ಯಕ್ತಿ ರಾಮಮೂರ್ತಿಯವರಿಗೆ ಗೌರವಾರ್ಥವಾಗಿ, ಪೂರ್ವ ಬೆಂಗಳೂರುನಲ್ಲಿ ಒಂದು ಪ್ರದೇಶಕ್ಕೆ ರಾಮಮೂರ್ತಿನಗರ ಎಂಬ ಹೆಸರನ್ನು ಇಡಲಾಗಿದೆ.
ಈ ದುರಂತ ನಡೆದು 50 ವರ್ಷ ಕಳೆದಿದೆ. ಕನ್ನಡ ಹೋರಾಟಗಾರ ರಾಮಮೂರ್ತಿ ಅವರ ಪತ್ನಿ ಕಮಲಮ್ಮ ಅನಾಥರಾಗಿದ್ದಾರೆ. ಅನಾಥರಾಗಿರುವ ಇವರಿಗೆ ಸಹಾಯಕರ ಅಗತ್ಯವಿದೆ. ಆದರೆ, ವೃದ್ಧಾಪ್ಯ ವೇತನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಾಕರಿಸಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ನನಗೆ ತಿಳಿದಿಲ್ಲ, ಪರಿಶೀಲಿಸುವುದಾಗಿ ಹೇಳಿದ್ದಾರೆ.
►ಎಸ್.ಎಂ.ಕೃಷ್ಣರಿಂದ ಸಿಎಂಗೆ ಪತ್ರ
ಮ.ರಾಮಮೂರ್ತಿ ಅವರ ಪತ್ನಿ ಕಮಲಮ್ಮ ಅವರ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ.







