ಅಮೂಲ್ ಮತ್ತು ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಡೇರಿ ಸ್ಥಾಪನೆ ಸಾಧ್ಯ: ಅಮಿತ್ ಶಾ
ಮಂಡ್ಯ, ಡಿ.30: 'ಅಮೂಲ್ ಮತ್ತು ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಡೇರಿ ಸ್ಥಾಪನೆ ಸಾಧ್ಯ' ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಜಿಲ್ಲೆಯ ಗೆಜ್ಜಲಗೆರೆಯ ಡೇರಿ ಅವರಣದಲ್ಲಿ 260.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ''ಹಾಲು ಉತ್ಪಾದಕರ ಸಂಘದ ಗಳಿಕೆಯ ಶೇ.80ರಷ್ಟು ರೈತರಿಗೆ ನೀಡಲಾಗುತ್ತಿದೆ. ಗುಜರಾತ್ ಕ್ಷೀರ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಅಮೂಲ್ ಹಾಗೂ ನಂದಿನಿ ಎರಡೂ ಒಗ್ಗೂಡಿ ಕೆಲಸ ಮಾಡಿದರೆ ಕೆಲವೇ ವರ್ಷಗಳಲ್ಲಿ ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಡೇರಿ ಸ್ಥಾಪನೆ ಸಾಧ್ಯ'' ಎಂದು ಸಲಹೆ ನೀಡಿದರು.
''ಕೇಂದ್ರ ಸರಕಾರದಿಂದ ಯಾವುದೇ ಕಾರಣಕ್ಕೂ ಸಹಕಾರ ಸಂಘಗಳ ಸದಸ್ಯರಿಗೆ ಹಾಗೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಕೃಷಿ ಮಂತ್ರಾಲಯದಿಂದ ಸಹಕಾರ ಮಂತ್ರಾಲಯವನ್ನು ಪ್ರತ್ಯೇಕಿಸಿ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಧಾನಮಂತ್ರಿಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ'' ಎಂದರು.
ಗೆಜ್ಜಲಗೆರೆಯ ಮೆಗಾ ಡೇರಿಯಲ್ಲಿ 73 ಕೋಟಿ ರೂ. ಕಟ್ಟಡ ನಿರ್ಮಾಣ ಹಾಗೂ 183 ಕೋಟಿ ರೂ. ಯಂತ್ರೋಪಕರಣಗಳಿಗೆ ವೆಚ್ಚ ಮಾಡಲಾಗಿದೆ. ಇಲ್ಲಿ 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ರೀತಿ ಉನ್ನತೀಕರಿಸಲಾಗುವುದು. ಹಾಲನ್ನು ಸಂಸ್ಕರಿಸುವುದರಿಂದ ಬಹಳಷ್ಟು ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಹಾಲು ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. 15,210 ಗ್ರಾಮ ಮಟ್ಟದ ಹಾಲು ಸಹಕಾರ ಸಂಘಗಳಿದ್ದು, 22.22 ಲಕ್ಷ ರೈತರು ಇದರಲ್ಲಿ ಭಾಗವಹಿಸುತ್ತಿದ್ದಾರೆ. 1975ರಿಂದ 2022ರವರೆಗೆ ಕರ್ನಾಟಕ ರಾಜ್ಯ ಡೇರಿ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದೆ. 1975ರಲ್ಲಿ 66 ಸಾವಿರ ಕಿಲೋ ಲೀಟರ್ ಹಾಲು ಸಂಸ್ಕರಿಸಲಾಗುತ್ತಿತ್ತು. ಇಂದು 82 ಲಕ್ಷ ಕಿಲೋ ಲೀಟರ್ ಹಾಲು ಪ್ರತಿ ದಿನ ಸಂಸ್ಕರಿಸಲಾಗುತ್ತಿದೆ. ಮಿಲ್ಕ್ ಫೆಡರೇಷನ್(ಕೆಎಂಎಫ್)ನ ಟರ್ನ್ ಓವರ್ 4 ಕೋಟಿ ರೂ. ಇದ್ದದ್ದು, ಇಂದು 25 ಸಾವಿರ ಕೋಟಿ ರೂ. ತಲುಪಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟದಲ್ಲಿ ಹಸಿರು ಕ್ರಾಂತಿಯ ನಂತರ ಕ್ಷೀರ ಕ್ರಾಂತಿಯಾಗುತ್ತಿದೆ. ಕರ್ನಾಟಕ ಕ್ಷೀರ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದೆ. ಹಗಲಿರುಳು ರೈತ ಬಂಧುಗಳು ಶ್ರಮಿಸುತ್ತಿದ್ದಾರೆ. ಪಶುಸಂಗೋಪನೆಯ ಮೂಲಕ ಹಾಲು ಉತ್ಪಾದನೆ ಮಾಡುವ ರೈತ ಮಹಿಳೆಯರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷಿ ಇಲಾಖೆಯಿಂದ ಸಹಕಾರವನ್ನು ಬೇರ್ಪಡಿಸಿ, ಸಹಕಾರ ಇಲಾಖೆ ಸೃಜಿಸಿ ದೇಶದಲ್ಲಿ ಸಹಕಾರ ರಂಗಕ್ಕೆ ಶಕ್ತಿ ತುಂಬಿದ್ದು, ಇದರಿಂದ ಒಂದು ಕ್ರಾಂತಿಯಾಗಲಿದೆ. ಬೆಂಗಳೂರಿನ ಪ್ರಥಮ ಮೆಗಾ ಡೇರಿ ಸ್ಥಾಪನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರದ್ದು ಮಹತ್ವದ ಪಾತ್ರವಿದೆ. ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲಿಂದ ಪ್ರಾರಂಭವಾದ ಮೆಗಾ ಡೇರಿ ಇಂದು ಎಲ್ಲೆಡೆ ಸ್ಥಾಪನೆಯಾಗುತ್ತಿದೆ ಎಂದು ಅವರು ಶ್ಲಾಘಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಸಹಕಾರಿ ಸಂಘ, ಬ್ಯಾಂಕುಗಳಲ್ಲಿ ಅನ್ಯಾಯಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸಹಕಾರ ಸಚಿವರು ಜವಾಬ್ಧಾರಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಡೇರಿಯಿಂದ ಉಪಉತ್ಪನ್ನಗಳನ್ನು ಮಾಡುವುದರಿಂದ ಹಾಲಿಗೆ ಹೆಚ್ಚು ಬೆಲೆ ನೀಡಲು ಸಹಕಾರವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರಗಳು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಮನ್ಮುಲ್ ಕೈಪಿಡಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಯಣಗೌಡ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಉಪಾಧ್ಯಕ್ಷ, ನಿರ್ದೇಶಕರು, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶಾಂತ ಎಲ್ ಹುಲ್ಮನಿ, ಇತರ ಗಣ್ಯರು ಉಪಸ್ಥಿತರಿದ್ದರು.
“ಒಕ್ಕಲುತನದಿಂದ ಕೂಡಿದ ಮಂಡ್ಯದ ಅಭಿವೃದ್ಧಿಗೆ ಇನ್ನಷ್ಟು ನೀರಾವರಿ ಮತ್ತು ಕೈಗಾರಿಕೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮೈಷುಗರ್ ಕಾರ್ಖಾನೆಯನ್ನು ಸರಕಾರಿ ಸ್ವಾಮದ್ಯದಲ್ಲೇ ಆರಂಭಿಸಲಾಗಿದೆ. ಬರುವ ವರ್ಷ ಎಥನಾಲ್ ಘಟಕ ಸ್ಥಾಪಿಸಲಾಗುವುದು. ವಿಶ್ವೇಶ್ವರಯ್ಯ ನಾಲೆಯ ನೀರಾವರಿಯ ಕೊನೆ ಭಾಗದಲ್ಲಿರುವ ರೈತರಿಗೆ ಯೋಜನೆಗಳನ್ನು ರೂಪಿಸುತ್ತಿದ್ದು, ಒಂದು ವಾರದಲ್ಲಿ ಅವೆಲ್ಲಕ್ಕೂ ಅನುಮೋದನೆ ನೀಡಲಾಗುವುದು.”
-ಬಸವರಾಜ ಬೊಮ್ಮಾಯಿ, ಸಿಎಂ.