ಉಡುಪಿ: ಜ.1ರಿಂದ ಬಾಳಿಗಾ ಆಸ್ಪತ್ರೆಯಲ್ಲಿ 31ನೇ ಮದ್ಯವ್ಯಸನ ವಿಮುಕ್ತಿ ಶಿಬಿರ
ಉಡುಪಿ: ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ 31ನೇ ಮದ್ಯವ್ಯಸನ ವಿಮುಕ್ತಿ ಶಿಬಿರವು ಜ.1ರಿಂದ 10ವರೆಗೆ ನಡೆಯಲಿದೆ ಎಂದು ಆಸ್ಪತ್ರೆಯ ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರಮನೆ ತಿಳಿಸಿದ್ದಾರೆ.
ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಹಾಗೂ ನಾಡಿನ ಖ್ಯಾತನಾಮ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅವರ ನೇತೃತ್ವದಲ್ಲಿ ಆಸ್ಪತ್ರೆಯ ವತಿಯಿಂದ ಕಳೆದ 20 ವರ್ಷಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಮದ್ಯವ್ಯಸನ ದಿಂದಾಗುವ ದುಷ್ಪರಿಣಾಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಹಾಗೂ ಮದ್ಯವ್ಯಸನಕ್ಕೆ ಚಿಕಿತ್ಸೆ ನೀಡುತ್ತಾ ಬಂದಿದ್ದು, ಈವರೆಗೆ 30 ಮದ್ಯವ್ಯಸನ ವಿಮುಕ್ತಿ ಶಿಬಿರಗಳನ್ನು ಆಯೋಜಿಸಿದೆ ಎಂದು ಡಾ.ವಿರೂಪಾಕ್ಷ ವಿವರಿಸಿದರು.
ಆಸ್ಪತ್ರೆಯ ಇದುವರೆಗಿನ ಶಿಬಿರಗಳಲ್ಲಿ 1950ಕ್ಕೂ ಅಧಿಕ ಮದ್ಯವ್ಯಸನಿ ಗಳಿಗೆ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಗಣನೀಯ ಸಂಖ್ಯೆಯ ಶಿಬಿರಾರ್ಥಿಗಳು ವ್ಯಸನ ಮುಕ್ತಜೀವನ ಸಾಗಿಸುತಿದ್ದಾರೆ. ಈ ಬಾರಿ ಸಹ ಮೂರು ವರ್ಷಗಳಿಂದ ವ್ಯಸನ ಮುಕ್ತರಾಗಿ ಜೀವನ ನಡೆಸಿದವರನ್ನು ಸನ್ಮಾನಿಸುತ್ತೇವೆ ಎಂದವರು ನುಡಿದರು.
31ನೇ ಮದ್ಯವ್ಯಸನ ವಿಮುಕ್ತಿ ಶಿಬಿರ ಜ.1ರಿಂದ 10ರವರೆಗೆ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ನಡೆಯಲಿದೆ. ಶಿಬಿರಕ್ಕೆ ದಾಖಲಾಗುವ ಶಿಬಿರಾರ್ಥಿಗಳಿಂದ 500ರೂ. ಶುಲ್ಕ ಪಡೆಯುತಿದ್ದು, ಅವರಿಗೆ 10 ದಿನಗಳ ಕಾಲ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಊಟ, ವಸತಿ,ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತದೆ. ಪ್ರತಿದಿನ ಶಿಬಿರಾ ರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ಶಿಬಿರವನ್ನು ಜ.1ರಂದು ಬೆಳಗ್ಗೆ 10ಗಂಟೆಗೆ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಎಂಸಿಯ ಡಾ.ಮುರಳೀಧರ್ ಕುಲಕರ್ಣಿಭಾಗವಹಿಸಲಿದ್ದಾರೆ. ಡಾ.ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿಬಿರದ ಸಮಾರೋಪವು ಜ.10ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.