ಕಾಂಗ್ರೆಸ್ ಗೆ 135 ಕ್ಷೇತ್ರದಲ್ಲಿ ಗೆಲುವು ಖಚಿತ: ಸಲೀಮ್ ಅಹ್ಮದ್
''ರಾಹುಲ್ಗಾಂಧಿ ನಮಗೆ ನೀಡಿರುವುದು 150ರ ಟಾರ್ಗೇಟ್...''

ತುಮಕೂರು.ಡಿ.31: ತುಮಕೂರು ಜಿಲ್ಲೆಯ 11ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲು 49 ಜನ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದು,ಇಂದು 48 ಜನ ಅಭ್ಯರ್ಥಿಗಳ ಸಂದರ್ಶನ ನಡೆಸಿದ್ದು, ಮುಂದಿನ ದಿನಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು,ಮಂಚೂಣಿ ಘಟಕದ ಮುಖಂಡರುಗಳ ಭೇಟಿಯಾಗಿ ಮಾಹಿತಿ ಕಲೆ ಹಾಕಿದ ನಂತರ ಅಂತಿಮ ಪಟ್ಟಿ ಪ್ರಕಟಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಉಸ್ತುವಾರಿ ಸಲೀಮ್ ಅಹಮದ್ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ.4 ಗಂಟೆಯವರೆಗೂ ಪ್ರತಿಯೊಬ್ಬ ಅಭ್ಯರ್ಥಿಯನ್ನು ಸಂದರ್ಶಿಸಲಾಗಿದೆ.ಮೊದಲ ಹಂತ ಇಂದು ಮುಗಿದಿದ್ದು,ಪಕ್ಷದ ಕಾರ್ಯ ಕರ್ತರು,ವಿವಿಧ ಮಂಚೂಣಿ ಘಟಕಗಳ ಅಧ್ಯಕ್ಷರುಗಳ ಅಭಿಪ್ರಾಯ ಪಡೆದು, ಶಾರ್ಟ್ ಲೀಸ್ಟ್ ತಯಾರಿಸಿ, ಕೆಪಿಸಿಸಿ ಮತ್ತು ಎಐಸಿಸಿಗೆ ಸಲ್ಲಿಸಲಾಗುವುದು ಎಂದರು.
ನಮ್ಮ ಅಂತರಿಕ ಸಮೀಕ್ಷೆಯಂತೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 9ರಲ್ಲಿ ಕಾಂಗ್ರೆಸ್ ಮುಂದಿದೆ. ಹಾಗೆಯೇ ರಾಜ್ಯದಲ್ಲಿ 135 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದು ಖಚಿತ. ಆದರೆ ರಾಹುಲ್ಗಾಂಧಿ ಅವರು ನಮಗೆ ನೀಡಿರುವುದು 150ರ ಟಾರ್ಗೇಟ್. ಅದನ್ನು ಸಕಾರಗೊಳಿಸಲು ನಾವು ಅವಿತರ ಶ್ರಮಿಸುತ್ತಿದ್ದೇವೆ. ಇದರ ಭಾಗವಾಗಿಯೇ ಜನವರಿ 02 ರಂದು ಹುಬ್ಬಳ್ಳಿಯಲ್ಲಿ ಕಳಸ ಬಂಡೂರಿ, ಮಹಾದಾಯಿ ಹೋರಾಟ ಆರಂಭಿಸಲಿದ್ದೇವೆ.ಇದರ ಜೊತೆಗೆ ಜನವರಿ 08 ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಕರ್ತರ ಸಮಾವೇಶ.ಜನವರಿ 11 ರಿಂದ 29ರವರೆಗೆ ಬಸ್ ಯಾತ್ರೆ ಆರಂಭಿಸಲಾಗುವುದು ಎಂದು ಸಲೀಂ ಅಹಮದ್ ತಿಳಿಸಿದರು.
ರಾಜ್ಯದ ಜನತೆ ಬಿಜೆಪಿಯ ದುರಾಡಳಿತ,ಭ್ರಷ್ಟಾಚಾರ,ಸ್ವಜನ ಪಕ್ಷ ಪಾತದಿಂದ ರೋಸಿ ಹೋಗಿದ್ದು,ಬದಲಾವಣೆ ಬಯಸಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸದೆ ಜನರನ್ನು ದಾರಿ ತಪ್ಪಿದೆ.ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಎಲ್ಲರ ಖಾತೆಗೆ 15 ಲಕ್ಷ ರೂ ಕಪ್ಪು ಹಣ ಈಡೇರಿಲ್ಲ. ಬಿಜೆಪಿ ಮಾಡುತ್ತಿರುವುದು ಜನಸಂಕಲ್ಪಯಾತ್ರೆಯಲ್ಲ. ಜನಸಂಕಷ್ಟ ಯಾತ್ರೆ. ಡಬಲ್ ಇಂಜಿನ್ ಸರಕಾರದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ ಎಂದು ಸಲಿಂ ಅಹಮದ್ ನುಡಿದರು.
ತುಮಕೂರು ಜಿಲ್ಲೆಯ 48 ಅರ್ಜಿಗಳಲ್ಲಿ 5 ಜನ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ ರಾಜ್ಯದ 225 ಕ್ಷೇತ್ರಗಳಲ್ಲಿ 1350 ಆಕಾಂಕ್ಷಿಗಳು ಅರ್ಜಿ ಸಲ್ಲಿಸಲಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ,ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಾತಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ನ್ಯಾ.ನಾಗಮೋಹನ್ದಾಸ್ ಕಮಿಟಿ ನೇಮಕ ಮಾಡಿದ್ದು ಕಾಂಗ್ರೆಸ್ ಸರಕಾರ. ಅವರು ನೀಡಿದ ವರದಿಯ ಮೇಲೆ ಈಗಿನ ಸರಕಾರ ಮೀಸಲಾತಿ ಹೆಚ್ಚಳ ಮಾಡಿದೆ.ಆದರೆ ಅದನ್ನುಸಂವಿಧಾನದ 9ನೇ ಶಡ್ಡೂಲ್ನಲ್ಲಿ ಸೇರಿಸದೆ,ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದೆ.ಇದು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನಾವು ಅದನ್ನು ವಿರೋಧಿಸುವವರ ಜೊತೆ ಮಾತುಕತೆ ನಡೆಸಿದ್ದೇವೆ. ಸೌಹಾರ್ಧವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ತುಮಕೂರು ಮತ್ತು ಕೊರಟಗೆರೆ ಉಸ್ತುವಾರಿ ಕೇಶವಮೂರ್ತಿ,ಮತ್ತೊಬ್ಬ ಉಸ್ತುವಾರಿ ಮಂಜಣ್ಣ ಮತ್ತಿತರರು ಉಪಸ್ಥಿತರಿದ್ದರು.







