ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರ ದಟ್ಟಣೆ ತಡೆಯಲು ಆಗ್ರಹ
ಚಿಕ್ಕಮಗಳೂರು, ಡಿ.31: ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರ ಧಟ್ಟಣೆ ತಡೆಯಲು ವನ್ಯಜೀವಿ ವಿಭಾಗ ತಕ್ಷಣ ಕ್ರಮ ಕೈಗೊಳ್ಳಬೇಕು. ಅಭಯಾರಣ್ಯದ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಬೇಕು ಎಂದು ಭದ್ರಾ ವೈಲ್ಡ್ಲೈಫ್ ಕನ್ಸರ್ವೇಶನ್ ಟ್ರಸ್ಟ್ನ ಡಿ.ವಿ.ಗಿರೀಶ್ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಗೆ ವಾರಾಂತ್ಯ ಹಾಗೂ ಇನ್ನಿತರ ರಜಾದಿನಗಳಲ್ಲಿ ಬರುತ್ತಿರುವ ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಚಿಕ್ಕಮಗಳೂರು ನಗರಕ್ಕೆ ಬಂದು ಮುಳ್ಳಯ್ಯನಗಿರಿ ಹಾಗೂ ಸುತ್ತಲ ಪ್ರದೇಶಕ್ಕೆ ಹೋಗುವ ಪ್ರವಾಸಿಗರಲ್ಲಿ ಬಹಳಷ್ಟು ಮಂದಿ ಭದ್ರಾ ಅಭಯಾರಣ್ಯಕ್ಕೂ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ದಿನವೊಂದಕ್ಕೆ ಎಷ್ಟು ಮಂದಿ ಪ್ರವಾಸಿಗರನ್ನು ಅಭಯಾರಣ್ಯದೊಳಗೆ ಪ್ರಾಣಿ ವೀಕ್ಷಣೆಗೆ ಬಿಡಬಹುದು ಎಂಬ ಬಗ್ಗೆ ಅರಣ್ಯ ಇಲಾಖೆ ಆಲೋಚಿಸಬೇಕಾಗಿದೆ. ಭದ್ರಾ ಅಭಯಾರಣ್ಯ ವನ್ಯಜೀವಿಗಳ ಸುರಕ್ಷಿತ ತಾಣ. ಈ ಅಭಯಾರಣ್ಯವನ್ನು ಆನೆ ಸೇರಿದಂತೆ ಹಲವು ಸಸ್ಯಾಹಾರಿ ಪ್ರಾಣಿಗಳು ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ. ಅಭಯಾರಣ್ಯ ಹುಲಿ ಸಂರಕ್ಷಣಾ ತಾಣವೂ ಆಗಿದ್ದು, ವನ್ಯಪ್ರಾಣಿಗಳನ್ನು ಹಾಗೂ ಇಲ್ಲಿರುವ ವೈವಿಧ್ಯಮಯ ಪಕ್ಷಿ ಪ್ರಭೇದ ಮತ್ತು ಕಾಡನ್ನು ನೋಡಲು ಬರುವವರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಯಂತ್ರಣ ಅತ್ಯಂತ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಭಯಾರಣ್ಯ ಮನುಷ್ಯರ ಓಡಾಟ ಹಾಗೂ ಚಟುವಟಿಕೆಗಳಿಗೆ ಮುಕ್ತವಾದ ಪ್ರದೇಶವಲ್ಲ. ಈ ರಕ್ಷಿತಾರಣ್ಯ ವನ್ಯಪ್ರಾಣಿಗಳಿಗೆ ಅತ್ಯಂತ ಸುರಕ್ಷಿತ ಜಾಗವಾಗಿದ್ದು, ಹೆಚ್ಚಿನ ಜನ ಹಾಗೂ ವಾಹನ ಓಡಾಟಕ್ಕೆ ಇಲ್ಲಿ ಅವಕಾಶವಿರಬಾರದು. ಹಾಗೆಂದ ಮಾತ್ರಕ್ಕೆ ಪ್ರವಾಸಿಗರು ಇಲ್ಲಿಗೆ ಬರಲೇಬಾರದೆಂಬ ಅಭಿಪ್ರಾಯವಲ್ಲ. ಆದರೆ ಇತ್ತೀಚೆಗೆ ಸಾಮಾನ್ಯವಾಗಿ ವಾರಾಂತ್ಯದಲ್ಲಿ 250ರಿಂದ 300 ಮಂದಿ ಬರುತ್ತಿದ್ದು, ಬಂದ ಪ್ರತೀ ಪ್ರವಾಸಿಗರನ್ನು ವನ್ಯಪ್ರಾಣಿ ವೀಕ್ಷಣೆಗೆ ವಾಹನದಲ್ಲಿ ಕರೆದೊಯ್ಯುವ ಸೌಲಭ್ಯವಿದೆ. ದಿನಪೂರ್ತಿ ವಾಹನಗಳ ಸತತ ಓಡಾಟ ಈ ವನ್ಯಜೀವಿಗಳ ನಿರಾತಂಕ ಬದುಕಿಗೆ ಮಾರಕವಾಗುವ ಸಂಭವವೂ ಇದೆ. ಈ ಪ್ರದೇಶವನ್ನು ಜನ ಹಾಗೂ ವಾಹನ ಮುಕ್ತವಾಗಿಸಿ ಪ್ರಾಣಿಗಳ ಓಡಾಟಕ್ಕೆ ನಿರಾತಂಕ ವಾತಾವರಣ ನಿರ್ಮಿಸಲೆಂದೇ ಸರಕಾರ ಹಾಗೂ ಪರಿಸರಾಸಕ್ತರು ಈ ಅಭಯಾರಣ್ಯದೊಳಗಿದ್ದ 13 ಹಳ್ಳಿಗಳನ್ನು ಸ್ಥಳಾಂತರಿಸಿ ಪೂರ್ಣ 500 ಚ.ಕಿ.ಮೀ. ಅಭಯಾರಣ್ಯವನ್ನು ಅರಣ್ಯೇತರ ಚಟುವಟಿಕೆಗಳಿಂದ ಮುಕ್ತವಾಗಿಸಿದೆ. ಆದರೆ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಾದಂತೆ ವಾರಾಂತ್ಯದಲ್ಲಿ ಹಾಗೂ ರಜಾದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳನ್ನು ತೋರಿಸಲು ಅರಣ್ಯ ಇಲಾಖೆ ಒಂದು ಮಿನಿ ಬಸ್ ಹಾಗೂ ಮೂರು ವಾಹನಗಳನ್ನು ವ್ಯವಸ್ಥೆ ಮಾಡಿದೆ. ದಿನವೊಂದಕ್ಕೆ 200ರಿಂದ 300 ಜನ ಬಂದರೆ 7ರಿಂದ 8 ಬಾರಿ ಅಭಯಾರಣ್ಯದೊಳಗೆ ವಾಹನಗಳನ್ನು ಓಡಿಸುವುದು ಅನಿವಾರ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿನವೊಂದಕ್ಕೆ ಎಷ್ಟು ಮಂದಿಗೆ ಅಭಯಾರಣ್ಯದೊಳಗೆ ಹೋಗಲು ಅವಕಾಶ ನೀಡಬೇಕೆಂಬ ಬಗ್ಗೆ ಒಂದು ನಿರ್ದಿಷ್ಟ ನಿಯಂತ್ರಣ ನೀತಿಯನ್ನು ರೂಪಿಸಬೇಕಾಗಿದೆ. ಅಭಯಾರಣ್ಯ ಕೇವಲ ವನ್ಯಜೀವಿಗಳ ಬಗ್ಗೆ ಜನ ಅರಿಯುವ ಪ್ರದೇಶವೇ ಹೊರತು ಯಾವುದೇ ರೀತಿಯ ಮೋಜು-ಮಸ್ತಿಯ ತಾಣವಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಬರುವ ಎಲ್ಲಾ ಪ್ರವಾಸಿಗರಿಗೂ ಅಭಯಾರಣ್ಯದೊಳಗೆ ಕರೆದೊಯ್ಯಲೇಬೇಕೆಂಬ ಒತ್ತಡಕ್ಕೆ ಇಲಾಖೆ ಒಳಗಾಗಬಾರದು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಎಷ್ಟು ಮಂದಿಗೆ ಅವಕಾಶ ನೀಡಬಹುದೆಂಬ ಬಗ್ಗೆ ಇಲಾಖೆಗೆ ಒಂದು ನಿರ್ದಿಷ್ಟ ಮಾನದಂಡವಿರಬೇಕು ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಪತ್ರಿಕೆಯಲ್ಲಿ ಅಭಯಾರಣ್ಯಕ್ಕೆ ಬರುವ ಪ್ರವಾಸಿಗರಿಗೆ ಒಳಗೆ ಹೋಗಿ ಪ್ರಾಣಿಗಳನ್ನು ವೀಕ್ಷಿಸಲು ಯಾವುದೇ ರೀತಿ ನಿರಾಸೆಯಾಗದಂತೆ ನೋಡಿಕೊಳ್ಳುವುದಾಗಿ ಇಲಾಖೆಯ ಅಧಿಕಾರಿಗಳು ಹೇಳಿದ್ದು, ಇದು ವನ್ಯಜೀವಿಗಳ ನಿರಾತಂಕ ಬದುಕಿಗೆ ಮಾರಕ ಎನ್ನಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಇಲಾಖೆ ಅಭಯಾರಣ್ಯದೊಳಗೆ ಬೆಳಗ್ಗೆ 7ರಿಂದ 9 ಹಾಗೂ ಸಂಜೆ 4 ರಿಂದ 6ರವರೆಗೆ ಪ್ರವಾಸಿಗರನ್ನು ಕರೆದೊಯ್ಯಲು ಸಮಯ ಸೀಮಿತಗೊಳಿಸಬೇಕು. ಈ ಬಗ್ಗೆ ಅಲ್ಲಿಗೆ ಬರುವ ಪ್ರವಾಸಿಗರಿಗೆ ವೆಬ್ಸೈಟ್ ಹಾಗೂ ಮಾಧ್ಯಮಗಳ ಮೂಲಕ ಮಾಹಿತಿಯನ್ನು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.