ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬೀದರ್ ನ ಶಾ ರಶೀದ್ ಅಹ್ಮದ್ ಖಾದ್ರಿ ಯಾರು? ಅವರ ಸಾಧನೆ ಏನು?
ಬೀದರ್: ಕೇಂದ್ರ ಸರ್ಕಾರ ಕೊಡ ಮಾಡುವ ಪದ್ಮ ಪ್ರಶಸ್ತಿಗೆ ಈ ಬಾರಿ ಬೀದರಿನ ಬಿದ್ರಿ ಕರಕುಶಲ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಅವರೂ ಭಾಜನರಾಗಿದ್ದಾರೆ.
1955 ರ ಜೂನ್ ನಲ್ಲಿ ಪ್ರತಿಷ್ಠಿತ ಬಿದ್ರಿ ಕಲೆಗಾರರ ಕುಟುಂಬದಲ್ಲಿ ಜನಿಸಿರುವ ಇವರು ತಮ್ಮ ತಂದೆಯಿಂದಲೇ ಬಿದ್ರಿ ಕರಕುಶಲವನ್ನು ಕಲಿತಿದ್ದಾರೆ.
ತಮ್ಮ ಪೂರ್ವಜರ ಕಾಲದಿಂದಲೂ ಬಿದ್ರಿ ಕರಕುಶಲದಲ್ಲಿ ತೊಡಗಿಸಿಕೊಂಡಿರುವ ಕುಟುಂಬದಿಂದ ಬಂದಿದ್ದರೂ, ಕಲೆಯಲ್ಲಿ ಅಲ್ಪ ಪ್ರಮಾಣದ ದುಡಿಮೆಯಷ್ಟೇ ಬರುತ್ತಿದ್ದರಿಂದ ಕುಟುಂಬದ ಸಾಂಪ್ರದಾಯಿಕ ಕಸುಬಿನಲ್ಲಿ ಮುಂದುವರಿಯುವುದು ಅವರ ತಂದೆಗೆ ಇಷ್ಟವಿರಲಿಲ್ಲ. ಅದಾಗ್ಯೂ ಪರಿಸ್ಥಿತಿಯ ಕಾರಣದಿಂದ ಕೊನೆಗೆ ಖಾದ್ರಿ ಅವರು ತಮ್ಮ ತಂದೆಯ ಮೇಲ್ವಿಚಾರಣೆಯಲ್ಲೇ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
'ಈ ಕರಕುಶಲತೆಯಲ್ಲಿ ತಾನು ತೊಡಗಿಸಿಕೊಂಡ ನಂತರ ತನಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿತು. ಈ ಪ್ರಾಚೀನ ಹಳೆಯ ಕರಕುಶಲತೆಯ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಹೊಸ ಮಾದರಿ, ವಿನ್ಯಾಸ ಕಂಡುಹಿಡಿಯಲು ಪ್ರಾರಂಭಿಸಿದೆ' ಎಂದು ಖಾದ್ರಿ ಅವರು ಹೇಳುತ್ತಾರೆ.
ತಂದೆಯಿಂದ ತರಬೇತಿ ಪಡೆದ ನಂತರ, 1970 ರಿಂದ ಸ್ವತಂತ್ರವಾಗಿ ಕೆಲಸ ಮಾಡಲು ಪ್ರಾರಂಭಿಸಿದ ಅವರು ಈ ಕಲೆಗೆ ಹೊಸ ವಿನ್ಯಾಸದ ಮಾದರಿಗಳನ್ನು ಪರಿಚಯಿಸಿದ್ದು, ಕಠಿಣ ಪ್ರಯತ್ನಗಳೊಂದಿಗೆ ಕರಕುಶಲತೆಯನ್ನು ಅಭಿವೃದ್ಧಿಪಡಿಸಲು ಪ್ರಮುಖ ಪಾತ್ರ ವಹಿಸಿದರು.ಬಿದ್ರಿ ಕಲೆಯಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿರುವ ಖಾದ್ರಿ ಅವರನ್ನು ಅರಸಿ ಇದುವರೆಗೆ ಹಲವು ಪ್ರಶಸ್ತಿಗಳು ಒಲಿದು ಬಂದಿದೆ.
2012 ರಲ್ಲಿ ಶಿಲ್ಪ ಗುರು ಪ್ರಶಸ್ತಿ, 1988 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1984 ರಲ್ಲಿ ರಾಜ್ಯ ಪ್ರಶಸ್ತಿ, 2006 ರಲ್ಲಿ ಸುವರ್ಣ ಕರ್ನಾಟಕ ಉತ್ಸವ ಪ್ರಶಸ್ತಿ, 2004 ರಲ್ಲಿ ಗ್ರೇಟ್ ಇಂಡಿಯನ್ ಅಚೀವರ್ಸ್ ಅವಾರ್ಡ್, 1996 ರಲ್ಲಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಮೊದಲಾದವು ಅವುಗಳಲ್ಲಿ ಪ್ರಮುಖವಾದವು.
ಅಮೇರಿಕ (ಯುಎಸ್ಎ), ಇಟಲಿ, ಸಿಂಗಾಪುರ, ಹಾಲೆಂಡ್, ಸ್ಪೇನ್, ಕಿಂಗ್ಡಮ್ ಆಫ್ ಬಹ್ರೇನ್, ಮಸ್ಕತ್ , ಸ್ವಿಝರ್ಲ್ಯಾಂಡ್ ಸೇರಿದಂತೆ ವಿದೇಶಗಳಲ್ಲೂ ಕರಕುಶಲ ಪ್ರದರ್ಶನ ನಡೆಸಿ ತಮ್ಮ ಛಾಪನ್ನು ಅವರು ಮೂಡಿಸಿದ್ದಾರೆ.
ಇದನ್ನೂ ಓದಿ: ಎಸ್ಸೆಂ ಕೃಷ್ಣಗೆ ಪದ್ಮ ವಿಭೂಷಣ, ಸುಧಾ ಮೂರ್ತಿ, ಎಸ್. ಎಲ್ ಭೈರಪ್ಪಗೆ ಪದ್ಮ ಭೂಷಣ,ರಶೀದ್ ಅಹ್ಮದ್ ಖಾದ್ರಿ ಸಹಿತ ನಾಲ್ವರಿಗೆ ಪದ್ಮಶ್ರೀ