ಸೂರಲ್ಪಾಡಿಯಲ್ಲಿ ಸಾಮಾಜಿಕ, ಧಾರ್ಮಿಕ ಮುಖಂಡ ನೌಶಾದ್ ಹಾಜಿ ಅಂತ್ಯ ಸಂಸ್ಕಾರ; ಭಾರೀ ಜನಸ್ತೋಮ

ಮಂಗಳೂರು, ಜ.1: ರವಿವಾರ ಬೆಳಿಗ್ಗೆ ಬೆಳ್ತಂಗಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದ ಸಾಮಾಜಿಕ ಮತ್ತು ಧಾರ್ಮಿಕ ಮುಂದಾಳು ನೌಶಾದ್ ಹಾಜಿ ಸೂರಲ್ಪಾಡಿ ಅವರ ಅಂತ್ಯ ಸಂಸ್ಕಾರವು ಸೂರಲ್ಪಾಡಿ ಜಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಿತು.
ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಸಮೀಪ ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾಮಾಜಿಕ, ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ(44) ಸಹಿತ ಇಬ್ಬರು ಮೃತಪಟ್ಟ ಘಟನೆ ರವಿವಾರ ಬೆಳಿಗ್ಗೆ ವರದಿಯಾಗಿತ್ತು.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಬೆಳ್ತಂಗಡಿಯ ದಾರುಸ್ಸಲಾಂ ಶಿಕ್ಷಣ ಸಂಸ್ಥೆಗೆ ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮುಸ್ಸಂಜೆಯ ವೇಳೆ ಬಳಿಕ ನೌಶಾದ್ ಹಾಜಿಯವರ ಸೂರಲ್ಪಾಡಿಯ ನಿವಾಸಕ್ಕೆ ಮೃತದೇಹವನ್ನು ಕರೆತರಲಾಯಿತು. ಕುಟುಂಬ ಸದಸ್ಯರು ಅಂತಿಮ ದರ್ಶನ ಪಡೆದ ಬಳಿಕ ಅಲ್ಲಿಂದ ಸೂರಲ್ಪಾಡಿ ಜಮಾ ಮಸೀದಿಗೆ ಕೊಂಡೊಯ್ದು ಅಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಸಾವಿರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು. ರಾತ್ರಿ ವೇಳೆ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.
ಇದಕ್ಕೂ ಮೊದಲು ನೌಶಾದ್ ಹಾಜಿಯವರ ಅಂತಿಮ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಪರಿಸರದಲ್ಲಿ ಒಂದು ಕಿ.ಮೀ. ವರೆಗೂ ಜನಸಂದಣಿಯಿತ್ತು. ಈ ವೇಳೆ ಟ್ರಾಫಿಕ್ ನಿಯಂತ್ರಿಸುವಲ್ಲಿ ಪೊಲೀಸರೊಂದಿಗೆ ಎಸ್ಕೆಎಸ್ಸೆಸ್ಸೆಫ್ ನ ವಿಖಾಯ ಕಾರ್ಯಕರ್ತರು ಸಹಕರಿಸಿದರು.






.jpeg)





