ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಬೈಸಿಕಲ್ ಪ್ರಯಾಣ ಹೊರಟ 73 ವರ್ಷದ ಡಾ.ಕಿರಣ್ ಸೇಥ್
ಕನ್ನಡ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶ

ಬೆಂಗಳೂರು, ಜ.2: ಮಕ್ಕಳಿಗೆ ಸಂಗೀತ, ಕಲೆ, ಜಾನಪದ, ನಾಟಕಗಳು ಸೇರಿದಂತೆ ಭಾರತೀಯ ಸಂಸ್ಕೃತಿಯನ್ನು ಕಲಿಸುವುದು, ಅದರ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪದ್ಮಶ್ರೀ ಪುರಸ್ಕೃತ ಡಾ.ಕಿರಣ್ ಸೇಥ್ ತಿಳಿಸಿದ್ದಾರೆ.
ಸೋಮವಾರ ಪ್ರೆಸ್ಕ್ಲಬ್ನಲ್ಲಿ ಸ್ಪಿಕ್ಮ್ಯಾಕೆ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಬೈಸಿಕಲ್ ಪ್ರಯಾಣ ಮಾಡುತ್ತಿದ್ದು, ಆ ಮಾರ್ಗದಲ್ಲಿ ಬರುವ ಶಾಲಾ-ಕಾಲೇಜಿನ ವಿದ್ಯಾರ್ಥಿ, ಸಿಬ್ಬಂದಿ, ಪ್ರಾಂಶುಪಾಲರು, ಶಿಕ್ಷಣ ತಜ್ಞರು, ಮಂತ್ರಿಗಳು ಸೇರಿದಂತೆ ದಾನಿಗಳನ್ನು ಭೇಟಿ ಮಾಡಿ, ದೇಶದ ಸಂಸ್ಕೃತಿ, ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಬೈಸಿಕಲ್ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲದೇ, ಧ್ಯಾನ, ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿಯೂ ಸಹಕಾರಿಯಾಗಿದೆ. ಹಾಗೂ ಯುವಕರಲ್ಲಿ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು ಮುಖ್ಯ ಧ್ಯೇಯವಾಗಿದೆ ಎಂದರು.
73 ವರ್ಷದ ಡಾ.ಕಿರಣ್ ಸೇಥ್ ಅವರು, ಕಳೆದ ವರ್ಷ ಆ.15ರಂದು ಶ್ರೀನಗರದಿಂದ ಸೈಕಲ್ ಯಾತ್ರೆ ಪ್ರಾರಂಭಿಸಿದ್ದು, ಈಗಾಗಲೇ 3000 ಕಿ.ಮೀ ಸಂಚಾರಿಸಿದ್ದಾರೆ. ಜ.2ರಿಂದ 5ರವರೆಗೆ ಬೆಂಗಳೂರಿನಲ್ಲಿ ಇರಲಿದ್ದು, ಜನತೆಗೆ ತಮ್ಮ ಸಂದೇಶವನ್ನು ಸಾರಲಿದ್ದಾರೆ ಎಂದು ಸ್ಪಿಕ್ಮ್ಯಾಕೆ ಸಲಹೆಗಾರ ವಿದ್ಯಾ ಹರೀಶ್ ತಿಳಿಸಿದರು.






.jpg)
.jpg)
.jpg)

