ಅಧ್ಯಾತ್ಮ, ತತ್ವಶಾಸ್ತ್ರದ ಮಹಾನ್ ಚೇತನ ಸಿದ್ದೇಶ್ವರ ಶ್ರೀ
ಬೆಂಗಳೂರು, ಜ.3: ಜ್ಞಾನಯೋಗಾಶ್ರಮದ ಚೇತನ ಸಿದ್ದೇಶ್ವರ ಶ್ರೀ ಅವರು ಅಧ್ಯಾತ್ಮ, ತತ್ವಶಾಸ್ತ್ರದ ಮಹಾನ್ ಚೇತನವಾಗಿ ಬೆಳೆದವರು. ಆಶ್ರಮಕ್ಕೆ ಹಣ ನೀಡಲು ಸರಕಾರ ಮುಂದೆ ಬಂದಾಗ ಬೇಡವೆಂದು ಹಣದಿಂದ ದೂರವಿದ್ದವರು. ದೇಶ, ವಿದೇಶದ ದಾನಿಗಳ ನೆರವನ್ನೂ ಒಪ್ಪದವರು. ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿದಾಗ ಅದನ್ನೂ ನಯವಾಗಿಯೇ ನಿರಾಕರಿಸಿದವರು.
ವಿಜಯಪುರ ಜಿಲ್ಲೆಯ ಬಿಜ್ಜರಗಿಯಲ್ಲಿ. 1940 ಅ.24ರಂದು ಅವರು ಜನಿಸಿದರು. ತಂದೆಯ ಹೆಸರು ಓಗೆಪ್ಪಗೌಡ ಬಿರಾದಾರ, ತಾಯಿ ಸಂಗವ್ವ. ಬಾಲ್ಯದ ಹೆಸರು ಸಿದ್ಧಗೊಂಡ ಬಿರಾದಾರ. ಬಾಲ್ಯದಿಂದಲೇ ಆಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿದ್ದರು.
ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ: ಬಿಜ್ಜರಗಿಯ ಸರಕಾರಿ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿವರೆಗೆ ಅಭ್ಯಾಸ ಮಾಡಿ ನಂತರ ವಿಜಯಪುರ ನಗರದ ಎಸ್.ಎಸ್.ಹೈಸ್ಕೂಲ್ನಲ್ಲಿ 8ನೇ ತರಗತಿ, ಬಳಿಕ ಚಡಚಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಶ್ರೀ ಮಲ್ಲಿಕಾರ್ಜುನರವರ ಪ್ರವಚನ ಇದ್ದಾಗ ಅಲ್ಲಿಯೇ ಶಿಕ್ಷಣ ಮುಂದುವರಿಸಿ, ನಂತರ ಬಿಎಲ್ಡಿಇ ಸಂಸ್ಥೆಯ ಅಂದಿನ ‘ವಿಜಯ ಕಾಲೇಜ್’ನಲ್ಲಿ ಪಿಯುಸಿ ಓದು, ನಂತರ ಕೊಲ್ಹಾಪುರದ ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಚೇತನ ಸಿದ್ದೇಶ್ವರ ಶ್ರೀ ಅವರು ಜ್ಞಾನಯೋಗಾಶ್ರಮದ ಸಂಸ್ಥಾಪಕರಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನ ಕೇಳಲು ಹೋಗುತ್ತಿದ್ದರು. 1958ರಲ್ಲಿ ಚಡಚಣದಲ್ಲಿ ಪ್ರವಚನ ಮುಕ್ತಾಯ ಸಂದರ್ಭದಲ್ಲಿ ಅವರು ಬಾಲ ಸಿದ್ಧಗೊಂಡನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಸಿದ್ದೇಶ್ವರ ಎಂದು ನಾಮಕರಣ ಮಾಡಿದರು. ಅಲ್ಲಿಂದಲೇ ಸಿದ್ದೇಶ್ವರ ಸ್ವಾಮೀಜಿಯ ಅಧ್ಯಾತ್ಮ ಜೀವನ ಯಾತ್ರೆ ಶುರುವಾಯಿತು. ಮಲ್ಲಿಕಾರ್ಜುನ ಸ್ವಾಮೀಜಿ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಸಿದ್ದೇಶ್ವರರನ್ನು ಆಶ್ರಮದಲ್ಲಿಯೇ ಉಳಿಸಿಕೊಂಡು ಪೋಷಿಸಿದರು. ಅವರು ಪೋಷಿಸಿದ ‘ ಸಿದ್ದೇಶ್ವರ’ ಎಂಬ ಸಸಿ ಈಗ ಸಂಸ್ಕಾರಗಳ ಫಲವನ್ನು ಜನತೆ ಉಣ್ಣುವಂತೆ ಮಾಡಿದೆ.
ಸಿದ್ದೇಶ್ವರ ಶ್ರೀಗೆ ಪ್ರವಚನವೇ ಜೀವನ. ಪರಿಪೂರ್ಣ ಬದುಕಿಗೆ ಪ್ರವಚನದ ಪಥ ತೋರಿದವರು. ಕನ್ನಡ, ಇಂಗ್ಲಿಷ್, ಪರ್ಷಿಯನ್ ಸಹಿತ ಅನೇಕ ಭಾಷೆೆಗಳಲ್ಲಿ ಪಾಂಡಿತ್ಯ. ಇಂಗ್ಲಿಷ್ ಭಾಷೆಯಲ್ಲಿಯೂ ನಿರರ್ಗಳವಾಗಿ ಪ್ರವಚನ. ಸಾಕ್ರೆಟಿಸ್, ಕನ್ಫ್ಯೂಷಿಯಸ್ ತತ್ವಗಳಿಂದ ಹಿಡಿದು, ಬುದ್ಧನ ಬೋಧನೆಗಳನ್ನು, ಬಸವಣ್ಣವರ ವಿಚಾರಗಳನ್ನು, ವೇದಗಳ ಸಾರವನ್ನು ಪ್ರವಚನದಲ್ಲಿ ಉಲ್ಲೇಖಿಸುವ ವಿದ್ವತ್ತು. ಅಮೆರಿಕ, ಜಪಾನ್ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಪ್ರವಚನ ನೀಡಿದವರು.
ಸರಕಾರದ ಅನುದಾನ ನಿರಾಕರಣೆ: ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಆಶ್ರಮಕ್ಕೆ ಅನುದಾನ ನೀಡಿದಾಗ ಅದನ್ನು ನಯವಾಗಿ ನಿರಾಕರಿಸಿ, ಇಲ್ಲಿ ಜ್ಞಾನ ಪ್ರಸಾರ ನಡೆಯುತ್ತದೆ. ಹಣ ಬೇಕಾಗಿಲ್ಲ ಎಂದವರು ಸಿದ್ದೇಶ್ವರ ಶ್ರೀ. ದೇಶ, ವಿದೇಶದ ದಾನಿಗಳು ಆಶ್ರಮಕ್ಕೆ ದೇಣಿಗೆ ನೀಡಲು ಮುಂದೆ ಬಂದರೂ ಅವರು ಸ್ವೀಕರಿಸಲಿಲ್ಲ, ಭಕ್ತರೊಬ್ಬರು ಕಾರು ತಂದು ಆಶ್ರಮಕ್ಕೆ ತಂದು ನಿಲ್ಲಿಸಿ, ಕೀಲಿ ಕೊಟ್ಟರೂ ನಗುತ್ತಲೇ ಅದನ್ನು ನಿರಾಕರಿಸಿದವರು.
2018ರಲ್ಲಿ ಪದ್ಮಶ್ರೀ ಪ್ರಶಸ್ತಿ ಬಂದಾಗಲೂ, ಮೋದಿಗೆ ಪತ್ರ ಬರೆದು, ತಾನು ಅಧ್ಯಾತ್ಮದ ಕಡೆ ಒಲವಿರುವವನು. ನನಗಿಂತ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಿ. ತನಗೆ ಪ್ರಶಸ್ತಿ ಬೇಡ ಎಂದಿದ್ದರು. ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ನೀಡಿದಾಗಲೂ ನಿರಾಕರಿಸಿದ್ದರು.ಅಂಥವರು ಮೋದಿಯನ್ನು ಕಳೆದ ಕೆಲವು ತಿಂಗಳುಗಳ ಹಿಂದೆ ಮೈಸೂರಿನಲ್ಲಿ ಹೊಗಳಿದ್ದು ಹಲವರಿಗೆ ಅಚ್ಚರಿಯನ್ನುಂಟು ಮಾಡಿತ್ತು. ಮೋದಿಯವರನ್ನು ನೋಡುವುದೇ ಸೌಭಾಗ್ಯ; ಇಂತಹ ಪ್ರಧಾನಿ ದೊರೆತದ್ದು ದೇಶದ ಸುದೈವ; ದೇಶ ಕಂಡ ಬಹಳ ಅಪರೂಪದ ಪ್ರಧಾನಿ ಎಂದೆಲ್ಲ ಹಾಡಿಹೊಗಳಿದ್ದು ತೀವ್ರ ಟೀಕೆಗೆ ಕಾರಣವಾಗಿತ್ತು. ರಾಜಕೀಯ ಮತ್ತು ರಾಜಕಾರಣಿಗಳ ಹಂಗಿಲ್ಲದವರನ್ನೂ ರಾಜಕೀಯ ದುಷ್ಟತನ ನುಂಗಿ ಹಾಕಿತಲ್ಲ ಎಂಬ ಕಳವಳ ವ್ಯಕ್ತವಾಗಿತ್ತು.
ಇದನ್ನೂ ಓದಿ: ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ನಿಧನ