ಬಂಗಾಳ:ವಂದೇ ಭಾರತ್ ರೈಲಿಗೆ ಕಲ್ಲುತೂರಾಟ, ಹಾನಿ
ಮಾಲ್ಡಾ,ಜ.3: ನಾಲ್ಕು ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿಗೆ ಕೆಲವು ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದು,ಕಿಟಕಿ ಗಾಜುಗಳು ಹುಡಿಯಾಗಿವೆ. ಸೋಮವಾರ ಸಂಜೆ ರೈಲು ಹೌರಾಕ್ಕೆ ಸಂಚರಿಸುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕುಮಾರಗಂಜ್ ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದೆ.
ಹೌರಾ ಮತ್ತು ನ್ಯೂ ಜಲಪಾಯಿಗುರಿ ಜಂಕ್ಷನ್ ನಡುವೆ ಸಂಚರಿಸುವ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿಗೆ ಡಿ.30ರಂದು ಹೌರಾ ನಿಲ್ದಾಣದಲ್ಲಿ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಇದು ದೇಶದಲ್ಲಿ ಏಳನೇ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಆಗಿದೆ.ಕಲ್ಲುತೂರಾಟ ಘಟನೆ ನಡೆದಾಗ ವಂದೇ ಭಾರತ ಎಕ್ಸ್ ಪ್ರೆಸ್ ತನ್ನ ಮೊದಲ ವಾಣಿಜ್ಯಿಕ ಸಂಚಾರ ನಡೆಸುತ್ತಿತ್ತು.
Next Story