ಉತ್ತರಪ್ರದೇಶ: ಯುವತಿಯ ಅಪಹರಿಸಿ ಅತ್ಯಾಚಾರಗೈದು ವಿಷ ಕುಡಿಸಿದ ದುಷ್ಕರ್ಮಿ
![ಉತ್ತರಪ್ರದೇಶ: ಯುವತಿಯ ಅಪಹರಿಸಿ ಅತ್ಯಾಚಾರಗೈದು ವಿಷ ಕುಡಿಸಿದ ದುಷ್ಕರ್ಮಿ ಉತ್ತರಪ್ರದೇಶ: ಯುವತಿಯ ಅಪಹರಿಸಿ ಅತ್ಯಾಚಾರಗೈದು ವಿಷ ಕುಡಿಸಿದ ದುಷ್ಕರ್ಮಿ](https://www.varthabharati.in/sites/default/files/images/articles/2023/01/4/362428-1672817359.jpg)
ಪಿಲಿಭಿಟ್ (Pilibhit): ಹದಿನೆಂಟು ವರ್ಷ ವಯಸ್ಸಿನ ಯುವತಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ಪ್ರತಿರೋಧ ವ್ಯಕ್ತಪಡಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿ ವಿಷಪ್ರಾಶನ ಮಾಡಿಸಿದ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಜೆಹಾನಾಬಾದ್ ಕೋತ್ವಾಲಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ಯುವತಿಯ ನೆರೆಮನೆಯವರೇ ಈ ಕೃತ್ಯ ಎಸಗಿದ್ದಾರೆ ಎಂದು ಆಪಾದಿಸಲಾಗಿದೆ. ಪಿಲಿಭಿಟ್ ಎಸ್ಪಿ ಅತುಲ್ ಶರ್ಮಾ ಅವರಿಗೆ ಈ ಸಂಬಂಧ ದೂರು ನೀಡಲಾಗಿದ್ದು, ಜನವರಿ 1 ರಂದು ನಸುಕಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನೆರೆಮನೆಯ ಕಮಲ್ ಎಂಬಾತ ಯುವತಿಯನ್ನು ಅಪಹರಿಸಿ, ಬಾಯಿ ಮುಚ್ಚಿಸಿ, ಅತ್ಯಾಚಾರ ಎಸಗಿದ ಎಂದು ದೂರು ನೀಡಲಾಗಿದೆ.
ಯುವತಿ ಪ್ರತಿರೋಧ ಒಡ್ಡಿದಾಗ ಅಮಾನುಷವಾಗಿ ಆಕೆಯನ್ನು ಥಳಿಸಿ, ವಿಷ ಕುಡಿಸಲಾಗಿದೆ ಎಂದು ದೂರಿನ ಅಂಶಗಳನ್ನು ಉಲ್ಲೇಖಿಸಿ ಪೊಲೀಸರು ವಿವರ ನೀಡಿದ್ದಾರೆ.
ಅರೋಪಿಯ ಮನೆಗೆ ಯುವತಿಯ ಕುಟುಂಬದವರು ತೆರಳಿದಾಗ, ಆತನ ಕುಟುಂಬ ಸದಸ್ಯರು ಯುವತಿಯ ತಾಯಿಯನ್ನೂ ಥಳಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಆರಂಭದಲ್ಲಿ ಜೆಹಾನಾಬಾದ್ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದೂ ಯುವತಿಯ ಕಡೆಯವರು ಆಪಾದಿಸಿದ್ದಾರೆ.
ಸಂತ್ರಸ್ತೆ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಯುವತಿಯ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.
ಎಸ್ಪಿ ಆದೇಶದ ಮೇರೆಗೆ ಕಮಲ್, ಆತನ ಸ್ನೇಹಿತ ಸಂಜು, ಸಹೋದರಿ ಶೀತಲ್, ತಾಯಿ ಮಾಯಾದೇವಿ ಹಾಗೂ ತಂದೆ ಸತ್ಯಪಾಲ್ ವಿರುದ್ಧ ಮಂಗಳವಾರ ಮಧ್ಯಾಹ್ನ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ಪ್ರಭಾಷ್ ಕುಮಾರ್ ಹೇಳಿದ್ದಾರೆ. ಆರೋಪಿಗಳು ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಸಹ ಪ್ರಯಾಣಿಕೆ ಮೇಲೆ ಮೂತ್ರ ವಿಸರ್ಜಿಸಿದರೂ ಕ್ರಮ ಕೈಗೊಳ್ಳದ ಸಿಬ್ಬಂದಿ: ಆರೋಪ