9 ತಿಂಗಳ ಹಿಂದೆ ಕೊಲೆಯಾಗಿರುವ ಬೆಂಗಳೂರಿನ ಯುವಕನ ಮೃತದೇಹಕ್ಕಾಗಿ ಚಾರ್ಮಾಡಿ ಘಾಟ್ ನಲ್ಲಿ ಶೋಧ
ಚಿಕ್ಕಮಗಳೂರು, ಜ.4: ಸುಮಾರು ಒಂಭತ್ತು ತಿಂಗಳ ಹಿಂದೆ ಕೊಲೆಯಾಗಿರುವ ಬೆಂಗಳೂರು ಮೂಲದ ಯುವಕನ ಮೃತದೇಹಕ್ಕಾಗಿ ಚಾರ್ಮಾಡಿ ಘಾಟಿಯಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬೆಂಗಳೂರು ಕೋಣನಕುಂಟೆ ಮೂಲದ ಶರತ್ ಕೊಲೆಯಾದ ಯುವಕ. ಹಣ ಸಾಲ ಪಡೆದು ಹಿಂದಿರುಗಿಸದ ಹಿನ್ನೆಲೆಯಲ್ಲಿ
ಇವರನ್ನು ತಂಡವೊಂದು 9 ತಿಂಗಳ ಹಿಂದೆ ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆಗೈದಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಬಂದ ಅನಾಮಿಕ ಮಾಹಿತಿಯನ್ನು ಆಧರಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿ ಎಫ್ ಐ ಆರ್ ದಾಖಲಿಸಿದ್ದಾರೆ. ಈ ಸಂಬಂಧ ವಿಚಾರಣೆಯ ವೇಳೆ ಆರೋಪಿಗಳು ಶರತ್ ಮೃತದೇಹವನ್ನು ಚಾರ್ಮಾಡಿ ಘಾಟ್ ನಲ್ಲಿ ಎಸೆದಿರುವುದಾಗಿ ಬಾಯಿಬಿಟ್ಟಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ನ ದುರ್ಗಮ ಅರಣ್ಯದಲ್ಲಿ ಸ್ಥಳೀಯರ ನೇತೃತ್ವದಲ್ಲಿ ಮೃತದೇಹಕ್ಕಾಗಿ ಪೊಲೀಸರು ಮಂಗಳವಾರದಿಂದ ಹುಡುಕಾಟ ಆರಂಭಿಸಿದ್ದಾರೆ. ಇಂದು ಕೂಡಾ ಶೋಧ ಕಾರ್ಯ ಮುಂದುವರಿದಿದೆ.