VIDEO ನೋಡಿ | ಮೋದಿ ಮುಂದೆ ಬೊಮ್ಮಾಯಿ ನಾಯಿ ಮರಿ ಥರ....: ಸಿದ್ದರಾಮಯ್ಯ ವಾಗ್ದಾಳಿ
ಬಳ್ಳಾರಿ, ಜ. 4: ‘ಮುಖ್ಯಂಮಂತ್ರಿ ಬಸವರಾಜ ಬೊಮ್ಮಾಯಿಯವರೇ ನಿಮಗೆ ನಿಜಕ್ಕೂ ದಮ್ಮು, ತಾಕ್ಕತ್ತು ಇದ್ದರೆ ಕೇಂದ್ರದಿಂದ ಕರ್ನಾಟಕಕ್ಕ್ಕೆ ಬರಬೇಕಿರುವ ಅನುದಾನ ತರಬೇಕಿತ್ತು. ಪ್ರಧಾನಿ ಮೋದಿಯವರ ಮುಂದೆ ನೀವು ನಾಯಿ ಮರಿಯಂತೆ ಇರ್ತೀರಿ, ಅವರನ್ನು ಕಂಡರೆ ನೀವು ಗಡಗಡ ನಡುಗುತ್ತೀರಿ’ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಜಿಲ್ಲೆಯ ಹಗರಿಬೊಮ್ಮನಹಳ್ಳ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜ್ ಮೈದಾನದಲ್ಲಿ ಶಾಸಕ ಭೀಮಾ ನಾಯ್ಕ್ ಏರ್ಪಡಿಸಿದ್ದ ‘ಸಾರ್ಥಕ ನಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ 5,499 ಕೋಟಿ ರೂ.ವಿಶೇಷ ಅನುದಾನ ಬರಬೇಕಿತ್ತು. ಆದರೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾವು ಆ ಮೊತ್ತವನ್ನು ಕೊಡಲು ಸಾಧ್ಯವಿಲ್ಲವೆಂದು ಪತ್ರ ಬರೆಯುತ್ತಾರೆ. ಸಿಎಂ ನಿಮಗೆ ಧೈರ್ಯವಿದ್ದರೆ ಆ ಅನುದಾನ ತರಬೇಕಿತ್ತು’ ಎಂದು ಸವಾಲು ಹಾಕಿದರು.
ನಮ್ಮ ಸರಕಾರದ ಅವಧಿಯಲ್ಲಿ ಜನರಿಗೆ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ, ಇಂದಿನ ಬಿಜೆಪಿ ಸರಕಾರ 600 ಭರವಸೆಗಳ ಪೈಕಿ ಕೇವಲ ಶೇ.10ರಷ್ಟು ಭರವಸೆಗಳನ್ನು ಈಡೇರಿಸಿದೆ ಎಂದು ದೂರಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೇ ವೇದಿಕೆಗೆ ಬರಲಿ, ಈ ಮಾತು ಸುಳ್ಳೋ ಅಥವಾ ಸತ್ಯವೋ ಸಾಬೀತುಪಡಿಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
‘ನಮ್ಮ ಅವಧಿಯಲ್ಲಿ ರಾಜ್ಯದಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಬಿಜೆಪಿಯವರಿಗೆ ಒಂದೇ ಒಂದು ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಸರಕಾರಕ್ಕೆ ಜನಪರ ಕಾಳಜಿ ಇದೆಯೆ?, ಇಂತಹ ಸರಕಾರ ರಾಜ್ಯದಲ್ಲಿರಬೇಕೇ ಎಂಬುದನ್ನು ಜನರೇ ತೀರ್ಮಾನಿಸಲಿ’ ಎಂದು ಸಿದ್ದರಾಮಯ್ಯ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಮಾಲವಿ ಜಲಾಶಯಕ್ಕೆ ಈ ವರೆಗೂ ಯಾವುದೇ ಸರಕಾರ ಅನುದಾನ ನೀಡಿರಲಿಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಅಂದಿನ ಶಾಸಕ ಭೀಮಾನಾಯ್ಕ್ ಜೆಡಿಎಸ್ನವರಾಗಿದ್ದರೂ ಪಕ್ಷಪಾತವಿಲ್ಲದೆ 150 ಕೋಟಿ ರೂ.ಅನುದಾನ ನೀಡಿ, ತುಂಗಭದ್ರಾ ನದಿ ನೀರು ತುಂಬಿಸಲಾಗಿದೆ ಎಂದು ಅವರು ನುಡಿದರು.
ಬಿಜೆಪಿ ಸರಕಾರದಲ್ಲಿ ವಿಧಾನಸೌಧ, ವಿಕಾಸಸೌಧದ ಪ್ರತಿಗೋಡೆಗಳು ಲಂಚ, ಲಂಚ ಎಂದು ಪಿಸುಗುಡುತ್ತಿವೆ. ಬಿಜೆಪಿ ಸರಕಾರ ಸುಳ್ಳಿನ ಕಾರ್ಖಾನೆಯಂತಿದೆ. ಕೇವಲ ವರ್ಷದಲ್ಲೇ 80ಲಕ್ಷ ಕೋಟಿ ರೂ.ಸಾಲ ಮಾಡಿದ್ದು, ರಾಜ್ಯದ ಜನತೆಯ ಮೇಲೆ ಈ ಸರಕಾರ ಸಾಲದ ಹೊರೆಯನ್ನು ಹೊರಿಸಿದೆ ಎಂದು ಟೀಕಿಸಿದರು.