ಮಕ್ಕಳ ದೌರ್ಜನ್ಯಕ್ಕೆ ಸಂಬಂಧಿಸಿ 180 ಸ್ವಯಂ ಪ್ರೇರಿತ ಪ್ರಕರಣಗಳು ದಾಖಲು : ನಾಗಣ್ಣ ಗೌಡ
ಮಂಗಳೂರು: ಕಳೆದ ಎರಡು ತಿಂಗಳಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 180 ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಮಕ್ಕಳನ್ನು ದೌರ್ಜನ್ಯದಿಂದ ರಕ್ಷಿಸಲು ನಾವೇ ಮುಂದಾಗಬೇಕು. ನಮ್ಮ ಮಕ್ಕಳ ರಕ್ಷಣೆ ನಮ್ಮ ಹೊಣೆಯಾಗಿದೆ. ಹೀಗಾಗಿ ಸಾಮುದಾಯಿಕ ಭಾಗವಹಿಸುವಿಕೆ ಅಗತ್ಯ. ಈ ಉದ್ದೇಶಕ್ಕಾಗಿ ಗ್ರಾಮ ಮತ್ತು ಗ್ರಾಮ ಪಂಚಾಯತ್ ಸಮಿತಿ ರಚಿಸಲಾಗುವುದು. ಗ್ರಾಮ ಪಂಚಾಯತ್ ಮಟ್ಟದ ಸಮಿತಿಗೆ ಒಂದು ದಿನದ ಸೂಕ್ತ ತರಬೇತಿ ನೀಡಲಾಗುವುದು. ಗ್ರಾಮ ಮಟ್ಟದ ಸಮಿತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಮುಖ್ಯಸ್ಥರಾಗಿರುತ್ತಾರೆ. ಪಿಡಿಒ ಸಮಿತಿಗೆ ಕಾರ್ಯದರ್ಶಿಯಾಗಿರುತ್ತಾರೆ. ಪಂಚಾಯತ್, ಎನ್ಜಿಒಗಳು ಸದಸ್ಯರಾಗಿರುತ್ತಾರೆ ಎಂದರು.
ಮಕ್ಕಳ ರಕ್ಷಣೆ ಮತ್ತು ದೌರ್ಜನ್ಯ ತಪ್ಪಿಸಲು, ಗ್ರಾಮ, ಗ್ರಾಪಂ, ತಾಪಂ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ಇರುತ್ತದೆ. ತಾಲೂಕು ಮಟ್ಟದಲ್ಲಿ ಇಒ ಅಧ್ಯಕ್ಷರು ಮತ್ತು ತಹಶೀಲ್ದಾರ್ ಉಪಾಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ನೇತೃತ್ವದಲ್ಲಿ ಜಂಟಿ ಕ್ರೀಯಾ ಸಮಿತಿ ಇರುತ್ತದೆ ಎಂದು ತಿಳಿಸಿದರು.
ಕೇವಲ ಹೆಸರಿಗಷ್ಟೇ ಸಮಿತಿ ಇದ್ದರೆ ಸಾಲದು. ಅದು ಪರಿಣಾಮವಾಗಿ ಆಗಬೇಕಾಗಿದೆ. ಸಮಿತಿಗೆ ಸಂಬಂಧಿಸಿ ಜ.9ರಂದು ಹೈಕೋರ್ಟ್ನಲ್ಲಿ ಸಭೆ ಇದೆ ಎಂದು ಮಾಹಿತಿ ನೀಡಿದರು.
ಮಕ್ಕಳ ರಕ್ಷಣೆಯಲ್ಲಿ ವೈಯ್ಯಕ್ತಿಕ ಗಮನ ಸಲಹೆ
ಮಕ್ಕಳ ರಕ್ಷಣೆಯ ಕೆಲಸದಲ್ಲಿ ತೊಡಗಿರುವ ಅಧಿಕಾರಿಗಳು ಆ ಕಾರ್ಯಕ್ಕೆ ವೈಯಕ್ತಿಕವಾಗಿ ಹೆಚ್ಚಿನ ಗಮನ ಹರಿಸಬೇಕು ಎಂದು ಕೆ. ನಾಗಣ್ಣ ಗೌಡ ಅವರು ಸಲಹೆ ನೀಡಿದರು.
ಅವರು ಜ.5ರ ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಆರ್ಟಿಐ -2009, ಪೋಕ್ಸೋ-2021 ಹಾಗೂ ಬಾಲ ನ್ಯಾಯ ಕಾಯ್ದೆ-2015ರ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತಿಯಾದ ನಂತರವೂ ಅಧಿಕಾರಿಗಳ ಪಾಲಿಗೆ ಮಕ್ಕಳ ರಕ್ಷಣೆಯ ಸಂದರ್ಭದಲ್ಲಿ ಮಾಡುವ ಸೇವೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರದಿಂದ ಈ ಕಾರ್ಯದಲ್ಲಿ ತೊಡಗಿದರೆ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ, ಮಕ್ಕಳ ಏಳಿಗೆಯಲ್ಲಿ ಒದಗಿಸುವ ಸಂಪನ್ಮೂಲಗಳನ್ನು ನೇರವಾಗಿ ಅವರಿಗೆ ತಲುಪುವಂತಾಗಬೇಕು. ಅದರಲ್ಲಿ ಯಾವುದೇ ರೀತಿಯ ಲೋಪಗಳಿಗೆ ಅವಕಾಶವಿರಬಾರದು ಎಂದರು.
ನಿಜ ಹೇಳಬೇಕೆಂದರೆ ಮಕ್ಕಳ ರಕ್ಷಣಾ ಕಾರ್ಯ ನಾಲ್ಕು ತಿಂಗಳ ಗರ್ಭದಿಂದಲೇ ಆರಂಭವಾಗುತ್ತದೆ. ಈ ವೇಳೆ ಗರ್ಭಿಣಿಯರು ರಕ್ತಹೀನತೆಯಿಂದ ಬಳಲಬಾರದು. ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಮಕ್ಕಳ ಬೆಳವಣಿಗೆ ಸಮಗ್ರವಾಗಿ ತಾಯಿಯ ಗರ್ಭದಿಂದಲೇ ಆಗಬೇಕು. ಗರ್ಭಿಣಿಯರ ಆರೋಗ್ಯ ಸುಧಾರಿಸಬೇಕು ಇದಕ್ಕಾಗಿ ಆರೋಗ್ಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ಶೋಭಾ ಬಿ.ಜಿ. ಅವರು ಮಾತನಾಡಿ, ಮಕ್ಕಳ ರಕ್ಷಣಾ ಕಾರ್ಯದಲ್ಲಿ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಗೆ ಬರುವ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಈ ಇಲಾಖೆಗಳ ನಡುವೆ ಸಂಬಂಧ ಉತ್ತಮಗೊಳ್ಳಬೇಕು. ಮಕ್ಕಳ ರಕ್ಷಣಾ ಕಾರ್ಯಕ್ಕೆ ಸಂಬಂಧಿಸಿಂತೆ ಯಾವುದೇ ರೀತಿಯ ನೆರವು ಬೇಕಿದ್ದಲ್ಲೀ ತಮಗೆ ನೇರವಾಗಿ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಮಕ್ಕಳ ರಕ್ಷಣೆ ಕುರಿತಂತೆ ವಿವಿಧ ಇಲಾಖೆಗಳ ಪಾತ್ರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದಕುಮಾರ್ ಹಾಗೂ ಪೊಲೀಸ್ ಅಪರ ಪೊಲೀಸ್ ವರಿಷ್ಠಾಧಿಕಾರಿ ವೇದಿಕೆಯಲ್ಲಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ ಸ್ವಾಗತಿಸಿದರು.
ಜಿಲ್ಲೆಯ ಇಲಾಖೆಗಳ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಡಿಪಿಓಗಳು, ಸ್ವಯಂಸೇವಾ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.







